ಹುಬ್ಬಳ್ಳಿ: ಧಾರವಾಡ ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಶಿವಕುಮಾರ್ ಪಾಟೀಲ ಅಕ್ರಮ ನೇಮಕಾತಿ ರದ್ದುಪಡಿಸಬೇಕು ಅಲ್ಲದೆ ತಕ್ಷಣ ವಜಾ ಮಾಡಿ ಈತನ ಮತ್ತು ಈತನ ಸಹಚರರಿಂದ ನಡೆದ ಅಕ್ರಮ ಭ್ರಷ್ಟಾಚಾರವನ್ನು ವಿಶೇಷ ಸಿಐಡಿ ತನಿಖೆಗೆ ಒಳಪಡಿಸಬೇಕು ಎಂದು ಸಮತಾಸೇನಾ ರಾಜ್ಯಾಧ್ಯಕ್ಷ ಗುರುನಾಥ ಉಳ್ಳಿಕಾಶಿ ಆಗ್ರಹಿಸಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ನಿರ್ಮಿತಿ ಕೇಂದ್ರಗಳನ್ನು ಸ್ಥಾಪಿಸಿದ ಉದ್ದೇಶಗಳಿಗೆ ತದ್ವಿರುದ್ಧವಾಗಿ ಕಳೆದ ಹಲವಾರು ವರ್ಷಗಳಿಂದ ನಿರ್ಮಿತಿ ಕೇಂದ್ರಗಳ ಮೂಲಕ ಅಕ್ರಮ ಲೂಟಿ ದಂಧೆ ನಡೆಯುತ್ತಿದೆ ಎಂದು ಆರೋಪಿಸಿದ ಅವರು, ಧಾರವಾಡದ ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕನಾಗಿ ಅಕ್ರಮವಾಗಿ ನೇಮಕವಾಗಿ ತನ್ನ ಸಹಚರರ ಬಳಗವನ್ನು ಸೃಷ್ಟಿಸಿ ನೇರ ಭ್ರಷ್ಟಾಚಾರದಲ್ಲಿ ತೊಡಗಿರುವ ಶಿವಕುಮಾರ್ ಅವರನ್ನು ವಜಾ ಮಾಡಬೇಕು, ನಿಯಮಾನುಸಾರವಾಗಿ ಪತ್ರಿಕಾ ಪ್ರಕಟಣೆಯನ್ನು ನೀಡದೇ ತಮಗೆ ಬೇಕಾದವರನ್ನು ನೇಮಕ ಮಾಡಲಾಗಿದೆ. ಈತನ ಸಹಚರದಿಂದ ನಡೆದಿರುವ ಕೋಟ್ಯಾಂತರ ರೂ.ಅಕ್ರಮ ಅವ್ಯವಹಾರ, ಜಿ.ಎಸ್.ಟಿ ವಂಚನೆ, ಲೇಬರ್ ಸೆಸ್ ವಂಚನೆ, ಅರ್ಹರಿಗೆ ಕಾಮಗಾರಿಗಳಿಂದ ವಂಚನೆ, ಸರ್ವಾಧಿಕಾರಿ ಧೋರಣೆ ತೋರುತ್ತಿದ್ದು, ಈ ನಿಟ್ಟಿನಲ್ಲಿ ಸಿಐಡಿ ತನಿಖೆಗೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.
ಈ ಪ್ರಕರಣದ ಕುರಿತಂತೆ ಮುಖ್ಯಮಂತ್ರಿಗಳು, ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಮತ್ತು ವಸತಿ ಹಾಗೂ ಗೃಹ ಸಚಿವರ ಗಮನಕ್ಕೆ ತರಲಾಗುವುದು ಎಂದ ಅವರು, ಧಾರವಾಡ ಜಿಲ್ಲಾಧಿಕಾರಿಗಳಿಗೂ ಪ್ರತ್ಯೇಕ ದೂರು ಸಲ್ಲಿಸಿ ಹದಿನೈದು ದಿನಗಳ ಗಡುವು ನೀಡಲಾಗುವುದು, ವಿಳಂಬವಾದಲ್ಲಿ ಗಂಭೀರ ಹೋರಾಟಕ್ಕೆ ಸಮತಾ ಸೇನಾ ಮುಂದಾಗಲಿದೆ ಎಂದು ಅವರು ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಅಶೋಕ ಕಾಶೆಣ್ಣವರ, ಹನುಮಂತ ತಳವಾರ, ಮಂಜುಳಾ ಬೆಣಗಿ, ಮಂಜುನಾಥ ಸಣ್ಣಕ್ಕಿ, ಇಮ್ಮಿಯಾಜ್ ಬಿಜಾಪೂರ ಇದ್ದರು.




















