ರಾಯಚೂರು/ದೇವದುರ್ಗ : ವನಸಿರಿ ಫೌಂಡೇಷನ್ ದೇವದುರ್ಗ ತಾಲೂಕ ಘಟಕ ಹಾಗೂ ಗಬ್ಬೂರು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಸಹಯೋಗದೊಂದಿಗೆ ಪರಿಸರ ಸಮತೋಲನ ಕಾಪಾಡುವ ನಿಟ್ಟಿನಲ್ಲಿ ವನಸಿರಿ ಫೌಂಡೇಷನ್ ಕೈಗೊಂಡ ಕಲ್ಯಾಣ ಕರ್ನಾಟಕ ಆಕ್ಸಿಜನ್ ಕ್ರಾಂತಿ ಅಭಿಯಾನ ಕಾರ್ಯಕ್ರಮದ ಅಂಗವಾಗಿ ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದ ಉನ್ನತೀಕರಿಸಿದ ಶಾಸಕರ ಸರಕಾರಿ ಬಾಲಕರ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದೇವದುರ್ಗ ತಾಲೂಕಿನಲ್ಲಿ ಇದೇ ಪ್ರಪ್ರಥಮ ಬಾರಿಗೆ ಪರಿಸರ ಸಂರಕ್ಷಣೆ ಕುರಿತು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲು ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ಆಕ್ಸಿಜನ್ ಕ್ರಾಂತಿ ಯೋಜನೆಗೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದ ನೇತೃತ್ವ ವಹಿಸಿದ್ದ ವನಸಿರಿ ಫೌಂಡೇಷನ್ ದೇವದುರ್ಗ ತಾಲೂಕ ಅಧ್ಯಕ್ಷ ಪ್ರಕಾಶ ಪಾಟೀಲ್ ಶಾವಂತಗೇರಿ ಮಾತನಾಡಿ ವನಸಿರಿ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷರಾದ ಹಾಗೂ ಪರಿಸರ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಅಮರೇಗೌಡ ಮಲ್ಲಾಪುರ ಅವರು ದಿನ ನಿತ್ಯ ಪರಿಸರ ಸೇವೆಯಲ್ಲಿ ತೊಡಗಿ ಪರಿಸರ ಸಂರಕ್ಷಣೆಗಾಗಿ ಹಗಲಿರುಳೆನ್ನದೆ ಗಿಡ ಮರಗಳನ್ನು ಉಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಅವರ ನೇತೃತ್ವದಲ್ಲಿ ವನಸಿರಿ ತಂಡ ಕಲ್ಯಾಣ ಕರ್ನಾಟಕದ ರಾಯಚೂರ,ಗುಲ್ಬರ್ಗ, ಬೀದರ್,ಯಾದಗಿರಿ ಕೊಪ್ಪಳ ಬಳ್ಳಾರಿ ಹಾಗೂ ಇನ್ನಿತರ ಜಿಲ್ಲೆಗಳಲ್ಲಿ ಗಿಡ ಮರಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಡುವ ಉದ್ದೇಶದಿಂದ ಮತ್ತು ಪರಿಸರ ಸಮತೋಲನ ಕಾಪಾಡುವ ನಿಟ್ಟಿನಲ್ಲಿ ಆಕ್ಸಿಜನ್ ಕ್ರಾಂತಿ ಯೋಜನೆ ಅಭಿಯಾನ ಕೈಗೊಂಡಿದ್ದಾರೆ. ಈ ಅಭಿಯಾನಕ್ಕೆ ನಮ್ಮ ವನಸಿರಿ ಫೌಂಡೇಷನ್ ತಾಲೂಕು ಘಟಕದ ವತಿಯಿಂದ ಇಂದು ಈ ಶಾಲೆಯಲ್ಲಿ ಚಾಲನೆ ನೀಡಲಾಗಿದೆ. ಇದು ತಾಲೂಕಿನಾದ್ಯಂತ ವಿಸ್ತರಿಸಲಿ ಎಂಬುದು ನಮ್ಮ ಆಶಯವಾಗಿದೆ ಮತ್ತು ಆಕ್ಸಿಜನ್ ಕ್ರಾಂತಿ ಯೋಜನೆಗೆ ದೇವದುರ್ಗ ತಾಲೂಕಿನ ಸಂಘ ಸಂಸ್ಥೆಗಳು,ಪರಿಸರ ಪ್ರೇಮಿಗಳು ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ತಿರುಮಲ ರೆಡ್ಡಿ ವನಸಿರಿ ಫೌಂಡೇಶನ್ ಪರಿಸರ ಕಾಳಜಿಯನ್ನು ಕಂಡು ಪ್ರಶಂಸೆ ವ್ಯಕ್ತ ಪಡಿಸಿ, ಆಕ್ಸಿಜನ್ ಕ್ರಾಂತಿ ಯೋಜನೆಗೆ ನಮ್ಮ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಂಪೂರ್ಣ ಬೆಂಬಲ ನೀಡುವುದಾಗಿ ಘೋಷಿಸಿದರು ಮತ್ತು ಪರಿಸರ ಮತ್ತು ಶಿಕ್ಷಣಕ್ಕೆ ಮೊದಲ ಆಧ್ಯತೆ ನೀಡಬೇಕೆಂದರು.
ಇದೇ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ ಭಾನುಪ್ರಕಾಶ ಖೇನದ ಹಾಗೂ ಹಿರಿಯ
ಪತ್ರಕರ್ತರಾದ ಮೈನುದ್ದಿನ್ ಕಾಟಮಳ್ಳಿ ಅವರು ಪರಿಸರ ಸೇವೆಗೆ ಸದಾ ಕಾಲ ಬೆಂಬಲ ವ್ಯಕ್ತಪಡಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ದೇವದುರ್ಗ ವನಸಿರಿ ಫೌಂಡೇಶನ್ ನ ಕಾರ್ಯದರ್ಶಿ ವೆಂಕಟರೆಡ್ಡಿ ಪಾಟೀಲ್, ಗುರುಗಳಾದ ಷಣ್ಮುಖ, ಸುನಿಲ್ ಜಾಡಲ್ ದಿನ್ನಿ, ಶಾಲಾ ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
