ಬಳ್ಳಾರಿ / ಕಂಪ್ಲಿ : ಮುಂಗಾರು ಮಳೆ ಪ್ರಾರ್ಥಿಸಿ, ಪಟ್ಟಣದಲ್ಲಿರುವ ಸಹಸ್ರಾರು ಭಕ್ತರ ಆರಾಧ್ಯ ದೇವತೆ ಶ್ರೀ ಗ್ರಾಮ ದೇವತೆ ಮಾರೆಮ್ಮ ದೇವಸ್ಥಾನದ ಹೊರಗಡೆಯಲ್ಲಿ ಸಣ್ಣದೊಂದು ಚಪ್ಪರ ಹಾಕಿ, ಮಾರೆಮ್ಮ ದೇವಿಯ ಒರಗಿನ ಅಮ್ಮನನ್ನು ಕೂರಿಸಿ, ವಿಶೇಷ ಪೂಜೆ, ಉತ್ಸವ ಮೂಲಕ ವಿವಿಧ ಧಾರ್ಮಿಕ ಕಾರ್ಯಕ್ರಮ ಮಂಗಳವಾರ ಶ್ರದ್ದಾಭಕ್ತಿಯಿಂದ ನೆರೆವೇರಿದವು.
ಮಳೆ ಪ್ರಾಪ್ತಿ ಮತ್ತು ಲೋಕಕಲ್ಯಾಣಕ್ಕಾಗಿ ಶ್ರೀ ಗ್ರಾಮ ದೇವತೆ ಮಾರೆಮ್ಮ ದೇವಿಯ ಸಕಲ ಸದ್ಭಕ್ತ ಮಂಡಳಿಯವರು ಹಾಗೂ ಭಕ್ತರು ಇಲ್ಲಿನ ತುಂಗಭದ್ರಾ ನದಿಗೆ ಬೆಳಗಿನ ಜಾವ ತೆರಳಿ, ನಂತರ ಗಂಗಾದೇವಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದ ನಂತರ ತನಗೊಡ ಒತ್ತು, ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಉತ್ಸವ ಮೆರವಣಿಗೆ ಶ್ರದ್ಧೆಯಿಂದ ನಡೆಸಿದರು. ತದ ನಂತರ ಮಾರೆಮ್ಮ ದೇಗುಲದ ಹೊರಭಾಗದಲ್ಲಿ ಚಪ್ಪರ ಹಾಕಿ ಪ್ರತಿಷ್ಠಾಪಿಸಿ ವಿಶೇಷ ಪೂಜೆಯನ್ನು ಸಲ್ಲಿಸಿದರು.
ಸರ್ವ ಸಮುದಾಯದವರು ದೇವಿಗೆ ಹೋಳಿಗೆ ನೈವೇದ್ಯವನ್ನು ಸಮರ್ಪಿಸಿದರು. ನಂತರ ದೇವಿಯ ತನುಗೊಡದ ಜೊತೆಗೆ ಅಲ್ಲಿನ ಪ್ರತಿಯೊಂದು ವಸ್ತುಗಳನ್ನು ಚೀಲಗಳಲ್ಲಿ ತುಂಬಿಕೊಂಡು ಅವುಗಳನ್ನು ಡೊಳ್ಳು ಮತ್ತು ಜಾನಪದ ಕಲಾತಂಡಗಳೊಂದಿಗೆ ಪಟ್ಟಣದ ಹೊರವಲಯದ ಹೊರಮ್ಯಾರೆಗೆ ಬಿಟ್ಟು ಬರಲಾಯಿತು.
ಮಳೆ, ಬೆಳೆಯೊಂದಿಗೆ ರೈತರು, ನಾಡಿನ ಜನರು ನೆಮ್ಮದಿ ನೀಡಲೆಂದು ಬೇಡಿಕೊಂಡರು.
ನಂತರ ಮುಖಂಡ ಎಂ. ಗೋಪಾಲ ಮಾತನಾಡಿ, ಈ ಬಾರಿಯ ಮುಂಗಾರು ಮಳೆಗಳು ಕಣ್ಮರೆಯಾಗಿವೆ. ಇದರಿಂದ ನಾಡಿನಲ್ಲಿ ಸಮೃದ್ಧ ಮಳೆ ಪ್ರಾರ್ಥಿಸಿ, ಕಳೆದ ಹನ್ನೊಂದು ದಿನ ಗುಡ್ಡೇಕಲ್ಲಿಗೆ ಮಡಿಯೊಂದಿಗೆ ನೀರೆರೆಯಲಾಗಿದೆ. ಹನ್ನೊಂದನೇ ದಿನವಾದ ಮಂಗಳವಾರದಂದು ತನುಗೊಡದೊಂದಿಗೆ ಉತ್ಸವ ಮೆರವಣಿಯೊಂದಿಗೆ ಒರಗಿನ ಅಮ್ಮನ ಪುಜೆ, ಪುನಸ್ಕಾರ ನೆರವೇರಿಸಲಾಗಿದೆ. ಒರಗಿನ ಅಮ್ಮ ನಮ್ಮ ಪ್ರಾರ್ಥನೆ ಆಲಿಸಿ, ಮಳೆಯನ್ನು ದಯಪಾಲಿಸಲಿ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಎನ್.ಯಲ್ಲಪ್ಪ, ಎನ್.ನಾಗರಾಜ, ದೊಡ್ಡಶೇಖಣ್ಣ, ನಾಗಪ್ಪ, ಎನ್.ದ್ಯಾವಣ್ಣ, ಮಲ್ಲಯ್ಯ, ವಿರುಪಣ್ಣ, ವೆಂಕಟಾಪತಿ, ವೆಂಕಟರಮಣ, ಈರಣ್ಣ ಸೇರಿದಂತೆ ಮಾರೆಮ್ಮ ದೇವಿಯ ಸದ್ಭಕ್ತರು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















