
ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಗ್ರಾಮ ಮಟ್ಟದ ಕೂಸಿನ ಮನೆ ಸಮಿತಿ ಸದಸ್ಯರುಗಳಿಗೆ ಒಂದು ದಿನದ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವನ್ನು ಕಂಪ್ಲಿ ತಾಲೂಕು ಪಂಚಾಯಿತಿಯ ಸಹಾಯಕ ನಿರ್ದೇಶಕರಾದ ಮಲ್ಲನಗೌಡ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ತರಬೇತಿದಾರರಾದ ಬಿ ಲತಿಫಾ ಬೇಗಂ ಮಾತನಾಡಿ
ಕೂಸಿನ ಮನೆ ಎಂದರೆ ಶಿಶು ಪಾಲನಾ ಕೇಂದ್ರ ಎಂದರ್ಥ ಮತ್ತು ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (MGNREGA) ಅಡಿಯಲ್ಲಿ ಕೆಲಸ ಮಾಡುವ ತಾಯಂದಿರ ಮಕ್ಕಳಿಗೆ ಆರೋಗ್ಯ ರಕ್ಷಣೆ, ಪೋಷಣೆ ಮತ್ತು ಸುರಕ್ಷತೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ. ಈ ಯೋಜನೆಯು ರಾಜ್ಯದ ಗ್ರಾಮ ಪಂಚಾಯತ್ಗಳಿಂದ ಬೆಂಬಲವನ್ನು ಪಡೆಯುತ್ತದೆ ಮತ್ತು ಇದನ್ನು “ಅಗತ್ಯ ಸಾರ್ವಜನಿಕ ಮೂಲಸೌಕರ್ಯ” ಎಂದು ಗುರುತಿಸುವುದು ಮಕ್ಕಳ ಆರೈಕೆಯ ಹೊರೆಯನ್ನು ಮರು ಹಂಚಿಕೆ ಮಾಡುವತ್ತ ಒಂದು ಮಹತ್ವದ ಹೆಜ್ಜೆಯಾಗಿದೆ ಎಂದರು.
ಈ ಸಂದರ್ಭದಲ್ಲಿ ಸಹಾಯಕ ಲೆಕ್ಕಾಧಿಕಾರಿಗಳಾದ ನಾರಾಯಣಸ್ವಾಮಿ, ತಾಲೂಕ ಪಂಚಾಯತ ಕಂಪ್ಲಿ, ದೇವಲಾಪುರ, ರಾಮಸಾಗರ, ಮೆಟ್ರಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಈರಮ್ಮ ಪೂಜಾರಿ ಹಾಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಬೀರಲಿಂಗಪ್ಪ, ಹನುಮಂತಪ್ಪ ಸೇರಿದಂತೆ ಗ್ರಾಮ ಮಟ್ಟದ ಕೂಸಿನ ಮನೆ ಮೇಲ್ವಿಚಾರಣಾ ಸಮಿತಿಯ ಪದಾಧಿಕಾರಿಗಳು ಹಾಜರಿದ್ದರು.
ತರಬೇತುದಾರರು, ನರೇಗಾ ತಾಲೂಕು ಸಂಯೋಜಕರಾದ ಹನುಮೇಶ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾರ್ಗದರ್ಶನ ನೀಡಿದರು.
ವರದಿ ಜಿಲಾನ್ ಸಾಬ್ ಬಡಿಗೇರ್




















