ಬಳ್ಳಾರಿ/ ಕಂಪ್ಲಿ: ಮಾ.08. ಪಟ್ಟಣದ ಕೊಟ್ಟಾಲ್ ರಸ್ತೆಯ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಪಿಎಂಕೆಎಸ್ವೈ-ಸೂಕ್ಷ್ಮ ನೀರಾವರಿ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ (ಪ್ರತಿ ಹನಿಗೆ ಅಧಿಕ ಬೆಳೆ) ಅಡಿಯಲ್ಲಿ ಒಂದು ದಿನದ ಸಾಂಸ್ಥಿಕ ತರಬೇತಿ ಕಾರ್ಯಕ್ರಮ ನಡೆಯಿತು.
ಸಹಾಯಕ ಕೃಷಿ ನಿರ್ದೇಶಕಿ ಡಾ. ಅಭಿಲಾಷ ಸಿ.ಆರ್. ಕಾರ್ಯಕ್ರಮ ಉದ್ಘಾಟಿಸಿ ನಂತರ ಪ್ರಾಸ್ತಾವಿಕವಾಗಿ ಮಾತನಾಡಿ, ಸೂಕ್ಷ್ಮ ನೀರಾವರಿ ಯೋಜನೆ ಅಡಿಯಲ್ಲಿ ತುಂತುರು ಮತ್ತು ಹನಿ ನೀರಾವರಿ ಪದ್ಧತಿಗಳಿದ್ದು, ಸೂಕ್ಷ್ಮ ನೀರಾವರಿ ಪದ್ಧತಿಯಿಂದ ಶೇಕಡ 50 ರಿಂದ 70ರಷ್ಟು ನೀರಿನ ಮಿತವ್ಯಾಯ ಸಾಧಿಸಬಹುದು ಎಂದರು.
ನಂತರ ಡಾ.ಜಿ.ನಾರಪ್ಪ ಗಂಗಾವತಿ ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ಶಾಸ್ತ್ರ ವಿಜ್ಞಾನಿ ಡಾ.ಜಿ.ನಾರಪ್ಪ ಮಾತನಾಡಿ, ಹನಿ ನೀರಾವರಿ ಪದ್ಧತಿಯಿಂದ ಆಗುವ ಲಾಭಗಳ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು. ಹನಿ ನೀರಾವರಿ ಪದ್ಧತಿಯಿಂದ ಶೇ.30 ರಿಂದ 40% ಇಳುವರಿ ಹೆಚ್ಚಿಸಬಹುದು. ಸೂಕ್ಷ್ಮ ನೀರಾವರಿಯಲ್ಲಿ ರಸವಾರಿ ಪದ್ಧತಿ ಮೂಲಕ 30 ರಿಂದ 40% ರಷ್ಟು ರಾಸಾಯನಿಕ ಗೊಬ್ಬರಗಳ ಮಿತವ್ಯಯ ಸಾಧಿಸುವುದು. ಕಳೆ ನಿಯಂತ್ರಣ ಮಾಡಿ ಕೂಲಿ ವೆಚ್ಚವನ್ನು ಕಡಿಮೆ ಮಾಡಬಹುದು ಹಾಗೂ ಗಿಡದಿಂದ ಗಿಡಕ್ಕೆ ರೋಗ ಹರಡುವಿಕೆಯನ್ನು ತಡೆಗಟ್ಟಬಹುದೆಂದು ತಿಳಿಸಿದರು.
ತದ ನಂತರ ಸಿಬ್ಬಂದಿ ರೇಣುಕಾರಾಜ್ ಮಾತನಾಡಿ, ಸೂಕ್ಷ್ಮ ನೀರಾವರಿ ಯೋಜನೆ ಅಡಿಯಲ್ಲಿ ರೈತ ಫಲಾನುಭವಿಗಳಿಗೆ ಸಿಗುವ ಸಹಾಯಧನ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಕೃಷಿ ಅಧಿಕಾರಿಗಳಾದ ನವ್ಯ, ಶಿವಪ್ಪ ಬಾರಿಗಿಡದ್ ಸೇರಿದಂತೆ ರೈತರು ಹಾಗೂ ಸಿಬ್ಬಂದಿ ಇದ್ದರು.
ವರದಿ : ಜಿಲಾನ್ ಸಾಬ್ ಬಡಿಗೇರ