ಕಲಬುರಗಿ/ ಚಿತ್ತಾಪುರ : ಪಟ್ಟಣದ ಪತ್ರಕರ್ತನ ಮೇಲೆ ಬೆದರಿಕೆ ಹಾಕಿದ ಅಳ್ಳೋಳ್ಳಿ ಗ್ರಾ.ಪಂ ಪಿಡಿಒ ಅವರನ್ನು ಅಮಾನತ್ತು ಮಾಡಬೇಕು ಎಂದು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಿದ್ಧರಾಜ ಮಲ್ಕಂಡಿ ಒತ್ತಾಯಿಸಿದರು.
ಪಟ್ಟಣದ ತಹಶೀಲ್ ಕಚೇರಿಯಲ್ಲಿ ಜಿಲ್ಲಾಧಿಕಾರಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್ ಅವರಿಗೆ ಸಲ್ಲಿಸಿ ಮಾತನಾಡಿದ ಅವರು, ಅಳ್ಕೊಳ್ಳಿ ಗ್ರಾಮ ಪಂಚಾಯಿತಿಯ ೧೫ನೇ ಹಣಕಾಸು ಯೋಜನೆಯಡಿ ಕೈಗೊಂಡಿರುವ ಕಾಮಗಾರಿ ಹಾಗೂ ಖರ್ಚು ವೆಚ್ಚದ ಕುರಿತು ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಕೇಳಿದ ಪತ್ರಕರ್ತ ನಾಗಯ್ಯ ಸ್ವಾಮಿಗೆ ಪಿಡಿಒ ದೇವಿಂದ್ರಪ್ಪ ಭಾಲ್ಕಿ ಬೆದರಿಕೆ ಹಾಕಿದ್ದಾರೆ. ಗ್ರಾ.ಪಂನಲ್ಲಿ ಅವ್ಯವಹಾರ ನಡೆದಿದೆ ಎಂದು ದೂರುಗಳು ಬಂದಿದ್ದು, ಸಮಗ್ರ ಮಾಹಿತಿಯೊಂದಿಗೆ ವರದಿ ಮಾಡುವುದಕ್ಕಾಗಿ ಮಾ. ೧ರಂದು ಗ್ರಾ.ಪಂ ಕಚೇರಿಯಲ್ಲಿ ೧೫ನೇ ಹಣಕಾಸಿನಲ್ಲಿ ೨೦೨೩-೨೪, ೨೦೨೪-೨೫ ನೇ ಸಾಲಿನಲ್ಲಿ ನಡೆದ ಕಾಮಗಾರಿಗಳು, ಖರ್ಚಾದ ಅನುದಾನದ ಬಗ್ಗೆ ಮಾಹಿತಿ ನೀಡಿವಂತೆ ಆರ್.ಟಿ.ಐ ಅಡಿ ಅರ್ಜಿ ಸಲ್ಲಿಸಿದ್ದರು. ಮಾ. ೫ರಂದು ಮಧ್ಯಾಹ್ನ ೧.೫೩ಕ್ಕೆ ಗ್ರಾಪಂ ಪಿ.ಡಿ.ಒ ದೇವಿಂದ್ರಪ್ಪ ಭಾಲ್ಕಿ ಪತ್ರಕರ್ತನಿಗೆ ಕರೆ ಮಾಡಿ, ಬ್ಲಾಕ್ ಮೇಲ್ ಮಾಡುವುದಕ್ಕಾಗಿ ಆರ್.ಟಿ.ಐ ಅಡಿ ಮಾಹಿತಿ ಕೇಳುತ್ತಿದ್ದೀಯಾ, ನಿನ್ನ ವಿರುದ್ಧ ಕೇಸ್ ದಾಖಲಿಸಿ ಒಳಗೆ ಹಾಕಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ. ಆದರೆ ಕೆಟ್ಟದಾಗಿ ನಿಂದಿಸುವುದರ ಮೂಲಕ ದರ್ಪ ಮೆರೆದು ಅವಹೇಳನ ಮಾಡಿದ್ದಾರೆ. ಈ ಬಗ್ಗೆ ಪಿಡಿಒ ವಿರುದ್ಧ ಕ್ರಮಕೈಗೊಳ್ಳಬೇಕೆಂದು ತಾಪಂ, ಜಿಪಂ ಅಧಿಕಾರಿಗಳಿಗೆ ನಾಗಯ್ಯ ಸ್ವಾಮಿ ದೂರು ನೀಡಿದ್ದಾರೆ.
ಆದರೆ ಇದುವರೆಗೂ ಕ್ರಮ ಕೈಗೊಂಡಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಾಲೂಕಿನಲ್ಲಿ ಕಳೆದ ಹಲವು ವರ್ಷಗಳಿಂದ ಪತ್ರಕರ್ತರು ಸಾಮಾಜಿಕ ಸಮಸ್ಯೆಗಳ ವಿರುದ್ಧ ಬೆಳಕು ಚೆಲ್ಲುವ ಕೆಲಸ ಮಾಡುತ್ತಿದ್ದೇವೆ. ಆ ಮೂಲಕ ಸಂವಿಧಾನದ ೪ ನೇ ಅಂಗವಾಗಿ ಶಿಸ್ತುಬದ್ಧ ಆಡಳಿತದ ಹಂಬಲ ಹೊತ್ತು ಕೆಲಸ ಮಾಡಿಕೊಂಡು ಬರುತ್ತಿದ್ದೇವೆ. ಆದ್ದರಿಂದ ನಮ್ಮ ಚಿತ್ತಾಪುರ ತಾಲೂಕು ಪತ್ರಕರ್ತರ ಸಂಘ ತಮ್ಮಲ್ಲಿ ಮನವಿ ಮಾಡಿ ಕೊಳ್ಳುವುದೇನೆಂದರೆ, ಹಿಂದೆ ಬೇರೆ ಗ್ರಾಪಂನಲ್ಲಿ ಕಾರ್ಯ ನಿರ್ವಹಿಸಿದ ಕಾಮಗಾರಿಗಳ ಬಗ್ಗೆ ತನಿಖೆ ಮಾಡಬೇಕು. ಈ ಕೂಡಲೇ ಸಂಬಂಧಪಟ್ಟ ಪಿಡಿಒ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು. ಕನಿಷ್ಠ ಸೌಜನ್ಯವಿಲ್ಲದೇ ಮಾತನಾಡಿದ ಅಧಿಕಾರಿಯನ್ನು ಕೂಡಲೇ ಅಮಾನತ್ತು ಮಾಡಬೇಕೆಂದು ಸಂಘವು ಒತ್ತಾಯಿಸುತ್ತದೆ ಎಂದು ಹೇಳಿದರು.
ತಹಶೀಲ್ದಾರ್ ನಾಗಯ್ಯ ಹಿರೇಮಠ ಮನವಿ ಪತ್ರ ಸ್ವೀಕರಿಸಿ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯದರ್ಶಿ ವೀರೇಂದ್ರಕುಮಾರ ಕೊಲ್ಲೂರ, ತಾಲೂಕು ಸಂಘದ ಪದಾಧಿಕಾರಿಗಳಾದ ಮಡಿವಾಳಪ್ಪ ಹೇರೂರ, ರಾಯಪ್ಪ ಕೋಟಗಾರ, ಅನಂತನಾಗ ದೇಶಪಾಂಡೆ, ಸಂತೋಷಕುಮಾರ ಕಟ್ಟಿಮನಿ, ದಯಾನಂದ ಖಜೂರಿ, ಅಣ್ಣರಾಯ ಮಾಡಬೂಳಕರ್, ಪೃಥ್ವಿರಾಜ ಸಾಗರ, ಚಂದ್ರಶೇಖರ ಬಳ್ಳಾ, ನಾಗಯ್ಯಸ್ವಾಮಿ ಅಲ್ಲೂರ ಸೇರಿದಂತೆ ಇತರರಿದ್ದರು.
ವರದಿ ಮೊಹಮ್ಮದ್ ಅಲಿ, ಚಿತ್ತಾಪುರ