ಬಳ್ಳಾರಿ / ಕಂಪ್ಲಿ : ರೈತರಿಗೆ ಸಿಗಬೇಕಾದ ಸರ್ಕಾರದ ಎಲ್ಲಾ ಸೌಲಭ್ಯಗಳನ್ನು ಸಕಲಾದಲ್ಲಿ ದೊರಕಿಸಿಕೊಡಲು ಕೃಷಿ ಇಲಾಖೆ ಅಧಿಕಾರಿಗಳು ಸೂಕ್ತವಾಗಿ ಗಮನ ಹರಿಸಬೇಕು ಎಂದು ಕಂಪ್ಲಿ ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷರಾದ ವಿಪ್ರದ ನಾರಾಯಣಪ್ಪ ಅಧಿಕಾರಿಗಳಿಗೆ ಸೂಚಿಸಿದರು.
ಅವರು ಪಟ್ಟಣದ ಎಪಿಎಂಸಿ ಆವರಣದಲ್ಲಿರುವ ರೈತ ಸಂಪರ್ಕ ಕೇಂದ್ರದ ಕಚೇರಿಯಲ್ಲಿ ಏರ್ಪಡಿಸಿದ್ದ ತಾಲ್ಲೂಕು ಕೃಷಿಕ ಸಮಾಜದ ಪ್ರಥಮ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈಗಾಗಲೇ ಮುಂಗಾರು ಹಂಗಾಮು ಆರಂಭವಾಗುತ್ತಿದ್ದು, ರೈತರಿಗೆ ಸಕಾಲದಲ್ಲಿ ಅಗತ್ಯವಿರುವ ಬಿತ್ತನೇ ಬೀಜಗಳನ್ನು ದಾಸ್ತಾನು ಮಾಡಿ ವಿತರಿಸಲು ಕ್ರಮಗಳನ್ನು ಕೈಗೊಳ್ಳಬೇಕು, ಕಳಪೆ ಬಿತ್ತನೆ ಬೀಜಗಳ ಮಾರುಕಟ್ಟೆ ಬಾರದಂತೆ, ಮಾರಾಟವಾಗದಂತೆ ಕ್ರಮಗಳನ್ನು ಕೈಗೊಳ್ಳಬೇಕೆಂದ ಅವರು ತಾಲ್ಲೂಕು ಕೃಷಿಕ ಸಮಾಜದ ಕಚೇರಿಗೆ ನಿವೇಶನವನ್ನು ಒದಗಿಸುವಂತೆ ತಹಸಿಲ್ದಾರರಿಗೆ, ಎಪಿಎಂಸಿ ಕಾರ್ಯದರ್ಶಿಗಳಿಗೆ ಹಾಗೂ ಶಾಸಕರಿಗೆ ಮನವಿ ಪತ್ರವನ್ನು ಸಲ್ಲಿಸುವುದಾಗಿ ತಿಳಿಸಿದರು.
ಪಶು ವೈದ್ಯಕೀಯ ಇಲಾಖೆಯ ಪ್ರಬಾರ ಮುಖ್ಯ ಪಶು ವೈದ್ಯಾಧಿಕಾರಿ ಡಾ.ಬಸವರಾಜ ಮಾತನಾಡಿ, ಇಲಾಖೆಯಿಂದ ರಾಷ್ಟ್ರೀಯ ಜಾನುವಾರು ಉದ್ಯಮಶೀಲತಾ ಯೋಜನೆಯಡಿಯಲ್ಲಿ ರೈತರಿಗೆ ಕುರಿ ಸಾಕಾಣಿಕೆಗಾಗಿ ವಿಶೇಷ ಸಬ್ಸಿಡಿ ಹಾಗೂ ಸಾಲ ಸೌಲಭ್ಯಗಳಿವೆ. 100 ಕುರಿಗಳನ್ನು ಸಾಕಾಣಿಕೆ ಮಾಡಿದರೆ 10 ಲಕ್ಷರೂ, ಸಬ್ಸಿಡಿ ಹಾಗೂ ಬ್ಯಾಂಕ್ ಸಾಲ ಸೌಲಭ್ಯ,500 ಕುರಿಗಳನ್ನು ಸಾಕಾಣಿಕೆ ಮಾಡಿದರೆ 50 ಲಕ್ಷರೂ ಸಬ್ಸಿಡಿ ಮತ್ತು ಬ್ಯಾಂಕ್ ಸಾಲ ಸೌಭ್ಯಗಳು ಸಿಗುತ್ತವೆ. ಆದರೆ ಕಡ್ಡಾಯವಾಗಿ ಕುರಿ ಸಾಕಾಣಿಕೆ ಷೆಡ್ಗಳನ್ನು ನಿರ್ಮಿಸಿಕೊಳ್ಳಬೇಕು ಎಂದ ಅವರು ಅನುಗ್ರಹ ಯೋಜನೆಯಡಿಯಲ್ಲಿ ಕುರಿಗಳು ಅಕಸ್ಮಾತ್ ಆಗಿ ಕುರಿಗಳು ಸಾವನ್ನಪ್ಪಿದರೆ, ಒಂದು ಕುರಿಗೆ 7500 ರೂಗಳ ಪರಿಹಾರ, ದನ ಹಾಗೂ ಎಮ್ಮೆಗಳು ಸಾವನ್ನಪ್ಪಿದರೆ ತಲಾ 15 ಸಾವಿರು ರೂಗಳ ಪರಿಹಾರ ಸಿಗುತ್ತದೆ. ರೈತರಿಗೆ ಜಾನುವಾರುಗಳನ್ನು ಸಾಕಲು ಕೆಸಿಸಿ ಸಾಲ ಸೌಲಭ್ಯಗಳು ಇವೆ ಎಂದು ವಿವರಿಸಿದರು.
ತೋಟಗಾರಿಕೆ ಇಲಾಖೆಯ ಸಹಾಯಕ ತೋಟಗಾರಿಕಾ ಅಧಿಕಾರಿ ಕರಿಗೌಡ ಆರ್.ಜೆ. ಮಾತನಾಡಿ ರೈತರಿಗೆ ಪ್ರಧಾನಂತ್ರಿ ಕೃಷಿ ಸಿಂಚಯ ಯೋಜನೆಯಡಿಯಲ್ಲಿ ಹನಿ ನೀರಾವರಿ ಯೋಜನೆ, ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆಯಡಿಯಲ್ಲಿ ಕೃಷಿ ಹೊಂಡ ನಿರ್ಮಾಣ, ಕೃಷಿ ಪರಿಕರಗಳ ವಿತರಣೆ ಯೋಜನೆಯಡಿಯಲ್ಲಿ ಸಣ್ಣ ಪ್ರಮಾಣದ ಟ್ಯಾಕ್ಟರ್ಗಳ ವಿತರಣೆ ಹಾಗೂ ಜೇನು ಸಾಕಾಣಿಕೆ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದರು.
ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಸೋಮಶೇಖರ್ ಮಾತನಾಡಿ ಕೃಷಿ ಇಲಾಖೆಯಿಂದ ಮನರೇಗಾ ಯೋಜನೆಯಡಿಯಲ್ಲಿ ಕೃಷಿ ಹೊಂಡಗಳ ನಿರ್ಮಾಣ ಸೌಲಭ್ಯಗಳು, ಸಹಾಯಧನದಲ್ಲಿ ಕೃಷಿ ಪರಿಕರಗಳ ಸೌಲಭ್ಯಗಳು, ಸಹಾಯಧನದಲ್ಲಿ ಬಿತ್ತನೆ ಬೀಜಗಳ ವಿತರಣೆಗೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಎಸ್.ಬಿ.ಪಾಟೀಲ್ ಮಾತನಾಡಿ ಮುಂಗಾರು ಹಂಗಾಮಿನಲ್ಲಿ ಸಕಾಲದಲ್ಲಿ ರೈತರಿಗೆ ಉತ್ತಮ ಗುಣಮಟ್ಟದ ಬಿತ್ತನೆ ಬೀಜಗಳನ್ನು ವಿತರಿಸಲು ಕ್ರಮಗಳನ್ನು ಕೈಗೊಳ್ಳಲಾಗುವುದು, ರೈತರು ಪರ್ಯಾಯ ಬೆಳೆಗಳನ್ನು ಬೆಳೆಯುವತ್ತಾ ಗಮನ ಹರಿಸಬೇಕು ಎಂದರು.
ಸಭೆಯಲ್ಲಿ ತಾಲ್ಲೂಕು ಕೃಷಿಕ ಸಮಾಜದ ಉಪಾಧ್ಯಕ್ಷ ಎನ್.ಮಲ್ಲಿಕಾರ್ಜುನ, ಪ್ರಧಾನ ಕಾರ್ಯದರ್ಶಿ ತಿಮ್ಮಪ್ಪ, ಜಿಲ್ಲಾ ಪ್ರತಿನಿಧಿ ಯು. ದೊಡ್ಡಬಸಪ್ಪ, ಸದಸ್ಯರಾದ ಜಿ.ಸೋಮಶೇಕರ್, ಚನ್ನಬಸಪ್ಪ, ಹರಿಜನ ಹುಲುಗಪ್ಪ, ಬಿ.ನಾಗರಾಜ,ಅಯ್ಯಪ್ಪ ಸೇರಿದಂತೆ ರೈತ ಸಂಪರ್ಕ ಕೇಂದ್ರದ ಸಿಬ್ಬಂದಿಗಳು ಹಾಜರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್
