ಬಳ್ಳಾರಿ / ಕಂಪ್ಲಿ : ನೆರೆ ಆಂಧ್ರ ಪ್ರದೇಶದ ಅನಂತಪುರ ಲೋಕಸಭಾ ಕ್ಷೇತ್ರದಿಂದ ಎರಡು ಬಾರಿ ಸಂಸದರಾಗಿದ್ದ ಕಂಪ್ಲಿ ಕೊಟ್ಟಾಲ್ ನಿವಾಸಿಗಳಾಗಿದ್ದ ಮಾಜಿ ಸಂಸದ ದರೂರು ಪುಲ್ಲಯ್ಯ (95) ಸೋಮವಾರ ಮಧ್ಯಾಹ್ನ ಪಟ್ಟದ ಕರುಗೋಡು ರಸ್ತೆಯ ಎಪಿಎಂಸಿ ಆವರಣದಲ್ಲಿರುವ ತಹಸಿಲ್ದಾರ್ ಕಚೇರಿ ಅವರಣದಲ್ಲಿ ತೀವ್ರ ಹೃದಯಾಘಾತದಿಂದ ನಿಧನರಾದರು.
ಕಾರ್ಯ ನಿಮಿತ್ತ ಪಟ್ಟಣದ ನಾಡ ಕಚೇರಿಗೆ ಆಗಮಿಸಿದ್ದ ದರೂರು ಪುಲಯ್ಯವರು ಉಪತಹಸಿಲ್ದಾರರಿಂದ ತಮ್ಮ ಜಮೀನಿನ ಪಹಣಿ ಪತ್ರಗಳನ್ನು ಪಡೆದು ಹೊರಗೆ ಬಂದಾಗ ಯಾರೊಂದಿಗೋ ಮಾತನಾಡುತ್ತಿರುವಾಗಲೇ ತೀವ್ರವಾದ ಹೃದಯಾಘಾತವಾಗಿದ್ದು, ಕೂಡಲೇ ಅವರನ್ನು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬಂದರೂ ಸಹಿತ ಅವರು ಮಾರ್ಗಮಧ್ಯದಲ್ಲಿಯೇ ಸಾವನ್ನಪ್ಪಿದ್ದಾರೆ.
ನಂತರ ಅವರ ಮೃತ ದೇಹವನ್ನು ಅವರ ಪುತ್ರ ಬಳ್ಳಾರಿಯಲ್ಲಿರುವ ಅವರ ನಿವಾಸಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಮೃತರಿಗೆ ಕಂಪ್ಲಿ ಕೊಟ್ಟಾಲ್ ಗ್ರಾಮದಲ್ಲಿ ಸ್ವಂತ ಮನೆ ಹಾಗೂ ಜಮೀನುಗಳಿದ್ದು, ಸುಗ್ಗೇನಹಳ್ಳಿ ಸುತ್ತಮುತ್ತಲೂ ಸಹಿತ ಅವರ ಜಮೀನುಗಳಿಗೆ ಮೃತರು 1977 ಮತ್ತು 1980ರಲ್ಲಿ ಅನಂತಪುರ ಲೋಕಸಭಾ ಕ್ಷೇತ್ರದಿಂದ ಎರಡು ಬಾರಿ ಕಾಂಗ್ರೇಸ್ ಪಕ್ಷದಿಂದ ಸಂಸದರಾಗಿದ್ದರು. ಇದಕ್ಕೂ ಮುನ್ನ ಅವರು ಉರವಕೊಂಡ ಪಂಚಾಯತ್ ಸಮಿತಿ ಅಧ್ಯಕ್ಷರಾಗಿದ್ದ ಅವರು ಕಂಪ್ಲಿ ಸಹಕಾರ ಸಕ್ಕರೆ ಕಾರ್ಖಾನೆಯ ನಿರ್ದೇಶಕರು ಹಾಗೂ ಅಧ್ಯಕ್ಷರಾಗಿದ್ದರು, ಅಲ್ಲದೆ ಸಿಂಗಟಾಲೂರು ಏತ ನೀರಾವರಿ ವಿರುದ್ಧ ಹೋರಾಟ ಮಾಡಿದ್ದ ಅವರು ತುಂಗಭದ್ರಾ ಜಲಾಶಯದ ಪ್ರವಾಹ ಸಂದರ್ಭದಲ್ಲಿ ಪ್ರವಾಹ ನಿಯಂತ್ರಣಕ್ಕಾಗಿ ಸಮಾನಾಂತರ ಕಾಲುವೆ ನಿರ್ಮಾಣಕ್ಕೆ ಹೋರಾಟ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಮೃತರು ಪತ್ನಿ, ಓರ್ವ ಪುತ್ರ ಹಾಗೂ ಆರು ಜನಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ವರದಿ : ಜಿಲಾನಸಾಬ್ ಬಡಿಗೇರ್
