
ಪುಣ್ಯ ಸಂಪಾದಿರುವ ರಂಜಾನ್ ತಿಂಗಳ ಉಪವಾಸದ ಬಳಿಕ ‘ಈದ್ ಉಲ್ ಫಿತ್ರ್’ ಹಬ್ಬ ಆಚರಿಸುವುದಾದರೆ, ಇಸ್ಲಾಮಿಕ್ ಕ್ಯಾಲೆಂಡರಿನ ‘ದುಲ್ ಹಜ್’ ತಿಂಗಳ 10ರಂದು ಬಕ್ರೀದ್ ಆಚರಣೆ ನಡೆಯುತ್ತದೆ. 4 ಸಾವಿರ ವರ್ಷಗಳಿಗೂ ಹಿಂದೆ ಹುಟ್ಟಿದ್ದ ಪ್ರವಾದಿ ಇಬ್ರಾಹಿಂ ಅವರ ತ್ಯಾಗವನ್ನು ನೆನಪಿಸುವುದು ‘ಬಕ್ರೀದ್’ನ ಮುಖ್ಯ ಆಶಯ. ಇಬ್ರಾಹಿಂ ಅವರು ಪ್ರವಾದಿ ಮುಹಮ್ಮದ್ ಅವರಿಗಿಂತ ಎರಡೂವರೆ ಸಾವಿರ ವರ್ಷಗಳ ಹಿಂದೆ ಹುಟ್ಟಿದ್ದರು ಎಂದು ಮುಸ್ಲಿಂ ಬಾಂಧವರ ಪವಿತ್ರ ಗ್ರಂಥಗಳಲ್ಲಿ ಉಲ್ಲೇಖವಾಗಿದೆ.
ಪ್ರವಾದಿ ಇಬ್ರಾಹಿಂ ಅವರ ತ್ಯಾಗ-ಬಲಿದಾನಗಳ ನೆನಪಿನಲ್ಲಿ ಈ ಹಬ್ಬ ಆಚರಿಸಲಾಗುತ್ತೆ.
ಇಸ್ಲಾಮಿಕ್ ನಂಬಿಕೆಗಳ ಪ್ರಕಾರ, ಪ್ರವಾದಿ ಇಬ್ರಾಹಿಂಗೆ ಒಮ್ಮೆ ಅಲ್ಲಾಹ್ನು ಅಗ್ನಿ ಪರೀಕ್ಷೆಯನ್ನು ಮಾಡುತ್ತಾರೆ. ಒಮ್ಮೆ ಅಲ್ಲಾಹ್ನು ಪ್ರವಾದಿ ಇಬ್ರಾಹಿಂ ಕನಸಿನಲ್ಲಿ ಕಾಣಿಸಿಕೊಂಡು ಪ್ರವಾದಿ ಬಳಿ ಇರುವ ಯಾವುದಾದರೂ ಆತ್ಯಮೂಲ್ಯವಾದ ವಸ್ತುವೊಂದನ್ನು ತನಗೆ ಬಲಿ ನೀಡಬೇಕು, ತ್ಯಾಗ ಮಾಡಬೇಕೆಂದು ಆದೇಶಿಸುತ್ತಾರೆ. ಇಂತಹದೊಂದು ಕನಸು ಬಿದ್ದ ಬಳಿಕ ಅನೇಕ ದಿನಗಳ ಕಾಲ ಪ್ರವಾದಿ ಇಬ್ರಾಹಿಂಗೆ ಇದು ಭಾದಿಸುತ್ತಿತ್ತು. ಬಳಿಕ ತನ್ನ ಕನಸಿನ ಕುರಿತು ತನ್ನ ಪತ್ನಿಯ ಬಳಿ ಹೇಳಿಕೊಳ್ಳುತ್ತಾರೆ. ಸಾಕಷ್ಟು ಚರ್ಚೆ ಬಳಿಕ ಪ್ರವಾದಿ ಇಬ್ರಾಹಿಂ ಹಾಗೂ ಆವರ ಪತ್ನಿ ಜೊತೆಗೂಡಿ ತಮ್ಮ ಒಬ್ಬನೇ ಮಗನನ್ನು ಅಲ್ಲಾಹ್ನಿಗೆ ಬಲಿ ನೀಡಲು ನಿರ್ಧರಿಸುತ್ತಾರೆ. ತಮ್ಮ ಪಾಳಿಗೆ ಇದ್ದ ಏಕೈಕ ಅತ್ಯಮೂಲ್ಯವಾದ ವ್ಯಕ್ತಿಯಾದ ಮಗನನ್ನೇ ತ್ಯಾಗ ಮಾಡಲು ಇಬ್ಬರೂ ನಿರ್ಧಸಿರುತ್ತಾರೆ. ನಂತರ ಇದಕ್ಕೆ ತನ್ನ ಮಗನಾದ ಇಸ್ಮಾಹಿಲ್ ಒಪ್ಪಿಗೆಯ ಕುರಿತು ಆತನಲ್ಲಿ ಚರ್ಚಿಸುತ್ತಾರೆ. ಅಲ್ಲಾಹ್ನಿಗಾಗಿ ಬಲಿಯಾಗಲು ಇಸ್ಮಾಯಿಲ್ ಹಿಂದೆ ಮುಂದೆ ಯೋಚಿಸದೇ ಕೂಡಲೇ ಒಪ್ಪಿಕೊಳ್ಳುತ್ತಾರೆ.
ಕೊನೆಗೆ ಇಬ್ರಾಹಿಂ ತನ್ನ ಮಗನನ್ನು ಬಲಿಕೊಡಲು ಬಲಿಪೀಠದಲ್ಲಿ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಮಾಡಿಕೊಳ್ಳುತ್ತಾನೆ. ತನ್ನ ಮಗನ ಕುತ್ತಿಗೆಯ ಭಾಗಕ್ಕೆ ಕತ್ತರಿಸಲು ಮುಂದಾಗುತ್ತಾನೆ ಈ ವೇಳೆ ಅವನಿಗೆ ಅನೇಕ ಅಡೆ-ತಡೆಗಳು ಎದುರಾಗುತ್ತವೆ. ದೇವರ ನೆನೆದು ಭಕ್ತಿಯಿಂದ ಮಗನನ್ನು ತ್ಯಾಗ ಮಾಡಲು ಇಬ್ರಾಹಿಂ ಮುಂದಾಗುತ್ತಾನೆ ಆಗ ಮಗನ ಕುತ್ತಿಗೆಗೆ ಕತ್ತಿ ತರುತ್ತಿದ್ದಂತೆ ಇಸ್ಮಾಯಿಲ್ ಮಾಯವಾಗಿ ಆತನ ಜಾಗದಲ್ಲಿ ಕುರಿಯೊಂದು ಕಾಣಿಸಿಕೊಳ್ಳುತ್ತದೆ. ಅಲ್ಲಾಹನು ಪ್ರವಾದಿ ಇಬ್ರಾಹಿಂರ ಭಕ್ತಿ, ನಂಬಿಕೆ, ವಿಶ್ವಾಸವನ್ನು ಪರೀಕ್ಷಿಸಿದ್ದು ಇದರಲ್ಲಿ ಪ್ರವಾದಿ ಉತ್ತೀರ್ಣರಾಗಿದ್ದಾರೆ. ಹೀಗಾಗಿ ಈ ಹಬ್ಬವನ್ನು ಬಲಿದಾನ, ತ್ಯಾಗದ ಸಂಕೇತವಾಗಿ ಆಚರಿಸಲಾಗುತ್ತೆ.
ಈ ತ್ಯಾಗದ ಕುರುಹಾಗಿ ಮುಸ್ಲಿಮರು ಈದ್ ಉಲ್ ಅಧಾ ದಿವಸ ಮೇಕೆ ಅಥವಾ ಕುರಿಯನ್ನು ಬಲಿ ನೀಡುತ್ತಾರೆ. ಸಂಪ್ರದಾಯದ ಪ್ರಕಾರ, ಬಲಿ ನೀಡಲಾದ ಮಾಂಸವನ್ನು ಮೂರು ಭಾಗಗಳಾಗಿ ವಿಂಗಡಿಸಲಾಗುತ್ತದೆ. ಒಂದು ಭಾಗವು ಕುಟುಂಬ ವರ್ಗ, ಸ್ನೇಹಿತರು ಮತ್ತು ನೆರೆಹೊರೆಯವರಿಗೆ, ಎರಡನೇ ಭಾಗವನ್ನು ಬಡವರು ಮತ್ತು ನಿರ್ಗತಿಕರಿಗೆ ವಿತರಿಸಲಾಗುತ್ತದೆ. ಹಾಗೆಯೇ ಮೂರನೇ ಭಾಗವನ್ನು ಕುಟುಂಬಕ್ಕೆ ಮೀಸಲಿಡಲಾಗುತ್ತದೆ. ಆದರೆ ವಾಸ್ತವವಾಗಿ ಇಲ್ಲಿ ಕುರಿ ಸಾಂಕೇತಿಕವಷ್ಟೇ. ಬದಲಾಗಿ ಈ ಹಬ್ಬವು ಮನುಷ್ಯನ ಮನಸ್ಸಿನಲ್ಲಿರುವ ಮತ್ಸರ, ಲೋಭ, ಮೋಹ ಮೊದಲಾದವುಗಳನ್ನು ಬಲಿ ನೀಡಬೇಕೆಂಬುದನ್ನು ಸೂಚಿಸುತ್ತದೆ.
ಮನೆ ಮನೆಗಳಲ್ಲಿ ಹಬ್ಬದೂಟ:
ಮನೆಗಳಲ್ಲಿ ಹಬ್ಬದ ಊಟ, ವಿಶೇಷ ಖಾದ್ಯಗಳನ್ನು ತಯಾರಿಸುವರು. ಗೆಳೆಯರು, ಬಂಧುಗಳನ್ನು ಆಹ್ವಾನಿಸಿ ಜೊತೆಯಾಗಿ ಊಟ ಮಾಡಿ, ಸಂಭ್ರಮ ಹಂಚಿಕೊಳ್ಳುವರು. ಹಬ್ಬದ ದಿನ ದಾನವಾಗಿ ದೊರೆಯುವ ಮಾಂಸ, ಹಣ, ದಿನಸಿ ಸಾಮಗ್ರಿಗಳಿಂದ ಎಷ್ಟೋ ಬಡಕುಟುಂಬಗಳಿಗೂ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳುವ ಅವಕಾಶ ಕಲ್ಪಿಸುತ್ತದೆ.
ಹಜ್ಜ್ ಯಾತ್ರೆಯ ಪವಿತ್ರ ಬಕ್ರೀದ್
ಬಕ್ರೀದ್ ಹಬ್ಬ ಎಂದರೆ ಹಜ್ ಯಾತ್ರೆಯ ಸಂಭ್ರಮ. ಈ ಹಬ್ಬದ ಶುಭ ಸಂದರ್ಭದಲ್ಲಿಯೇ ಹಜ್ ಯಾತ್ರೆ ಭಕ್ತಿ ವೈಭವದಿಂಧ ನಡೆಯುತ್ತದೆ. ಆರೋಗ್ಯ ಹಾಗೂ ಆರ್ಥಿಕವಾಗಿ ಯೋಗ್ಯನಾಗಿರುವ ವ್ಯಕ್ತಿ ಜೀವನದಲ್ಲೊಮ್ಮೆ ಹಜ್ ಯಾತ್ರೆ ಕೈಗೊಳ್ಳಬೇಕು. ವಿಶ್ವದೆಲ್ಲೆಡೆಯಿಂದ ಲಕ್ಷೋಪಲಕ್ಷ ಮುಸ್ಲಿಮರು ವರ್ಷಕ್ಕೊಮ್ಮೆ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಮೆಕ್ಕಾ ನಗರದಲ್ಲಿ ಹೇಗೆ ಒಟ್ಟುಗೂಡುತ್ತಾರೆ, ಬಡವ, ಬಲ್ಲಿದ, ರಾಜ, ಮಂತ್ರಿ, ಸಚಿವ ಎಂಬ ಯಾವ ಬೇಧವೂ ಅಲ್ಲಿಲ್ಲ, ಅಲ್ಲಿ ಕೇವಲ ಎರಡು ತುಂಡು ಶುಭ್ರವಾದ ಶ್ವೇತ ಬಟ್ಟೆ (ಪವಿತ್ರ ಎಹರಾಮ್) ಧರಿಸಿ ಹಜ್ ಧಾರ್ಮಿಕ ವಿಧಾನದಲ್ಲಿ ಪಾಲ್ಗೊಳ್ಳುತ್ತಾರೆ.
ಕಾಬಾ ಬಳಿಯಲ್ಲೇ ಇರುವ ಎಂದೂ ಕಡಿಮೆಯಾಗದೆ ಸದಾ ಹರಿಯುತ್ತಲೇ ಇರುವ ಮರುಭೂಮಿಯ ಬುಗ್ಗೆಯೇ ಝಮಝಮ್ ನ ಬಾವಿ. ಅತ್ಯದ್ಭುತ ಗುಣಗಳುಳ್ಳ ಇದರ ನೀರನ್ನು ಲೋಕದ ಮೂಲೆ ಮೂಲೆಗೆ ಮಕ್ಕಾ ಯಾತ್ರಿಗಳು ಕೊಂಡೊಯ್ಯುತ್ತಾರೆ. ಇಬ್ರಾಹೀಮ ಮತ್ತು ಇಸ್ಮಾಯೀಲರು ಕೂಡಿ ಅಲ್ಲಾಹನ ಆಜ್ಞೆಯಂತೆ ಭೂಮಂಡಲದ ಕೇಂದ್ರ ಭಾಗದಲ್ಲಿ ನಿರ್ಮಿಸಿದ, ಮುಸ್ಲಿಮರೆಲ್ಲರೂ ನಮಾಝಿಗೆ ಅಭಿಮುಖವಾಗಿಸುವ ಕಾಬಾ ಭವನಕ್ಕೆ ಪ್ರದಕ್ಷಿಣೆಯಿಂದ ಹಿಡಿದು, ಹಾಜಿರಾರು ನೀರಿಗಾಗಿ ಓಡಾಡಿದ ಸಫಾ ಮರ್ವ ಬೆಟ್ಟಗಳಿಗೆ ಏರುವ ಎಲ್ಲಾ ವಿಧಿಗಳೂ ಹಜ್ಜ್ ನ ಭಾಗಗಳಾಗಿವೆ.
ಹಜ್ ಯಾತ್ರ ನಿರ್ವಹಣೆ ಸಂದರ್ಭದಲ್ಲಿ ಹೃದಯಾಂತರಾಳದಿಂದ ತಮ್ಮ ಗತ ತಪ್ಪುಗಳ ಬಗ್ಗೆ ಪಶ್ಚಾತ್ತಾಪ ಪಟ್ಟು ರೋಧಿಸಿ ಕ್ಷಮೆಯಾಚಿಸಿ ಪ್ರಾರ್ಥಿಸಿದರೆ ದೇವನು ಪ್ರಾರ್ಥನೆಯನ್ನು ಸ್ವೀಕರಿಸಿ ಪರಿಶುದ್ಧಗೊಳಿಸುತ್ತಾನೆಯೆಂದು ಪ್ರವಾದಿ ನುಡಿದಿರುತ್ತಾರೆ. ವಿವಿಧ ವಿಧಿಗಳ ಮೂಲಕ ತನ್ನನ್ನು ಸಂಸ್ಕರಿಸಿ, ದೇವವಿಶ್ವಾಸ ಮತ್ತು ದೇವ ಭಯ ವೃದ್ಧಿಸಿ ಹೊಸ ಜೀವನ ಆರಂಭಿಸುವ ಬದ್ಧತೆಯೊಂದಿಗೆ ಹಾಜಿಗಳು ಮರಳುತ್ತಾರೆ.
ಕೇವಲ ಪ್ರಾಣಿ ಬಲಿ ಒಂದೇ ಅಲ್ಲ ಬಡವರಿಗಾಗಿ ಶ್ರೀಮಂತರಿಂದ ಆಹಾರ ಧಾನ್ಯಗಳ ದಾನ ಹಾಗೂ ಒಳ್ಳೆಯ ಕಾರ್ಯಕ್ಕಾಗಿ ಸಮಯದ ತ್ಯಾಗ ಅವಶ್ಯಕತೆ ಇರುವವರಿಗೆ ರಕ್ತದಾನದ ತ್ಯಾಗ ಹೀಗೆ ನಾನಾ ರೀತಿಯ ಜಾಗವನ್ನು ಇಸ್ಲಾಂ ಬಕ್ರೀದ್ ಹಬ್ಬ ಕಲಿಸುತ್ತದೆ.
- ವಿಶೇಷ ಲೇಖನ
ಜಿಲಾನಸಾಬ್ ಬಡಿಗೇರ್
ಕಂಪ್ಲಿ, 9741845277
