ಬಳ್ಳಾರಿ / ಕಂಪ್ಲಿ : ನಗರದಲ್ಲಿ ಒಂದೇ ಸೂರಿನಡಿಯಲ್ಲಿ ಎಲ್ಲಾ ಇಲಾಖೆಗಳ ಪ್ರಮುಖ ನಾಗರಿಕ ಸೇವೆಗಳನ್ನು ನಾಗರಿಕರಿಗೆ ನೀಡುವ ಉದ್ದೇಶದಿಂದ ಖಾಸಗಿ ಸಹಭಾಗಿತ್ವದೊಂದಿಗೆ ಕರ್ನಾಟಕ ಒನ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಶಾಸಕ ಜೆ. ಎನ್. ಗಣೇಶ ತಿಳಿಸಿದರು. 9ನೇ ವಾರ್ಡ್ ನ ಪೋಸ್ಟ್ ಆಫೀಸ್ ಹತ್ತಿರ ಇರುವ ಗ್ರಾಮ ಒನ್ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ಈ ಭಾಗದಲ್ಲಿ ಕರ್ನಾಟಕ ಒನ್ ಕೇಂದ್ರ ಸ್ಥಾಪನೆ ಮಾಡಿದ್ದಕ್ಕೆ ಅತ್ಯಂತ ಸಂತಸವಾಗಿದೆ, ಗ್ರಾಮೀಣ ಪ್ರದೇಶದ ನಾಗರಿಕರು ವಿವಿಧ ಸೇವೆಗಾಗಿ ಯಾವುದೇ ಕಚೇರಿಗೆ ಅಲೆಯಬಾರದೆಂಬ ಉದ್ದೇಶದಿಂದ ಇಂತಹ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಹೇಳಿದರು.
ಇದರಲ್ಲಿ ಪ್ರಮುಖವಾದ ಸೇವೆಗಳೆಂದರೆ ಕಂದಾಯ ಇಲಾಖೆ, ಸಾಮಾಜಿಕ ಭದ್ರತಾ ಯೋಜನೆ, ಆರೋಗ್ಯ ಇಲಾಖೆ, ಕಾರ್ಮಿಕ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಸಹಕಾರ ಸಂಘಗಳ ಇಲಾಖೆ, ಕಾಲೇಜು ಶಿಕ್ಷಣ ಇಲಾಖೆ, ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ, ಈಶಾನ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಸೇವೆಯನ್ನು ಹೊಂದಿದೆ. ಈ ಯೋಜನೆ ಅಡಿಯಲ್ಲಿ ಮೈಕ್ರೋ ಬ್ಯಾಂಕಿಂಗ್ ಸೇವೆಗಳು, ಬಿಎಸ್ಎನ್ಎಲ್ ಬಿಲ್ ಪಾವತಿ ಸೇವೆಗಳು, ಜೆಸ್ಕಾಂ ಬಿಲ್ ಪಾವತಿ ಸೇವೆಗಳು, ಹಾಗೂ ಇತರೆ ಸೇವೆಗಳನ್ನು ಒದಗಿಸಲಾಗುತ್ತದೆ ಎಂದು ಕರ್ನಾಟಕ ಒನ್ ಸಮಗ್ರ ನಾಗರಿಕ ಸೇವಾ ಕೇಂದ್ರದ ವ್ಯವಸ್ಥಾಪಕ ಉಪ್ಪಾರ್ ನಾಗಾರ್ಜುನ ತಿಳಿಸಿದರು.
ಕಾರ್ಯಕ್ರಮದಲ್ಲಿ ಕಂಪ್ಲಿ ತಹಶೀಲ್ದಾರ್ ಮಂಜುನಾಥ್ ನಾಯಕ್, ಪುರಸಭೆ ಅಧ್ಯಕ್ಷ ಬಿ. ಪ್ರಸಾದ್, ಉಪಾಧ್ಯಕ್ಷೆ ಸುಶೀಲಮ್ಮ, ಪ್ರಮುಖರಾದ ಯು. ವಿಶ್ವನಾಥ, ಯು. ಸತೀಶ ಎನ್. ಸುಧಾಕರ, H. ಗೋಪಿನಾಥ, U. ಮಂಜುನಾಥ, D. ರವಿಕುಮಾರ, ಅಕ್ಕಿ ಜಿಲಾನ, ಶಶಿಕುಮಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್
