
ಕೊಪ್ಪಳ/ಯಲಬುರ್ಗಾ : ತಾಲ್ಲೂಕಿನ ಮುಧೋಳ ಗ್ರಾಮದ ಮುಸ್ಲಿಂ ಬಾಂಧವರು ತ್ಯಾಗ ಬಲಿದಾನಗಳ ಸಂಕೇತವಾದ ಬಕ್ರೀದ್ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿದರು. ಧರ್ಮಗಳು ಮನುಷ್ಯನಿಗೆ ನೈತಿಕ ಬೋಧನೆಗಳನ್ನು ನೀಡಿದೆ,
ಅದನ್ನು ಅಳವಡಿಸಿಕೊಂಡು ಬದುಕುವುದು ಧರ್ಮ ವಿಶ್ವಾಸಿಯ ಆದ್ಯತೆ ಮತ್ತು ಬಾಧ್ಯತೆಯಾಗಿದೆ. ಬಕ್ರೀದ್ ಪರಸ್ಪರ ಪ್ರೀತಿಸಲು, ಕಷ್ಟದಲ್ಲಿದ್ದವರ ನೋವುಗಳಲ್ಲಿ ಭಾಗಿಯಾಗಲು ಕಲಿಸುತ್ತಿದೆ. ಎಲ್ಲಾ ಧರ್ಮಗಳ ಹಬ್ಬಗಳಿಂದ ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆ ಗಟ್ಟಿಯಾಗಿ ಬೇರೂರಬೇಕು, ಪ್ರೀತಿ ವಿಶ್ವಾಸದಿಂದ ಬೆಳೆಯುವ ಭಾವನೆ ಎಲ್ಲರದ್ದಾಗಬೇಕು, ಬಕ್ರೀದ್ ಅಲ್ಲಾಹನ ಇಷ್ಟದಾಸರ ಸ್ಮರಣೆಯಾಗಿದೆ, ಕುರ್ಬಾನಿ ಅಥವಾ ಇತರ ರೀತಿಯಲ್ಲಿ ಸಹಾಯಗಳನ್ನು ಮಾಡುವುದು ಬಕ್ರೀದಿನ ಪರಿಪೂರ್ಣತೆಯಾಗಿದೆ. ಇಸ್ಲಾಮಿನ ಹಬ್ಬಗಳು ಆರಾಧನೆ ಜೊತೆಗೆ ಭಾತೃತ್ವವನ್ನು ಬೆಳೆಸಲು ಕಲಿಸುತ್ತಿದೆ ಎಂದು ಮುಧೋಳ ಇಮಾಂ ಹಝ್ರತ್ ಆಮಿರ್ ಅಶ್ಅರೀ ಬನ್ನೂರು ಬಕ್ರೀದ್ ಸಂದೇಶ ನೀಡಿ ಮಾತನಾಡಿದರು. ಯಲಬುರ್ಗಾ ತಾಲೂಕು ಸಂಯುಕ್ತ ಖಾಝಿ ಹಝ್ರತ್ ಅಬ್ದುಲ್ ಖಾದರ್ ಖಾಝಿ ದುವಾ ಆಶೀರ್ವಚನ ನಡೆಸಿದರು.
ಈ ಸಂದರ್ಭದಲ್ಲಿ ಊರಿನ ಹಿರಿಯರು, ಮುಖಂಡರು ಹಾಗೂ ಯುವಕರು ಮತ್ತು ಮಕ್ಕಳು ಭಾಗವಹಿಸಿದರು.
ವರದಿ : ಜಿಲಾನಸಾಬ್ ಬಡಿಗೇರ್
