ಬಾಗಲಕೋಟೆ /ಹುನಗುಂದ: ಉತ್ತರ ಕರ್ನಾಟಕದ ಜನಪ್ರಿಯ ಹಬ್ಬ ಹಾಗೂ ಗ್ರಾಮೀಣ ಸೊಗಡಿನ ಕಾರ ಹುಣ್ಣಿಮೆಯನ್ನು ತಾಲೂಕಾ ಆಡಳಿತ ವತಿಯಿಂದ ಎತ್ತುಗಳಿಗೆ ಗ್ರಾಮ ಲೆಕ್ಕಾಧಿಕ್ಕಾರಿಗಳಾದ ಮುರಳಿ ಹೊಸಮನಿ, ಶಿವಾನಂದ ಕುಂಬಾರ ಪೂಜೆ ಸಲ್ಲಿಸಿ ಕರಿ ಹರಿಯುವ (ಕಾರ ಹುಣ್ಣಿಮೆ) ಹಬ್ಬಕ್ಕೆ ಚಾಲನೆ ನೀಡಿದರು.
ಮುಂಗಾರು ಆರಂಭದ ಮೊದಲ ಹಬ್ಬವಾದ ಕಾರ ಹುಣ್ಣಿಮೆ, ಬೇಸಿಗೆ ಕಳೆದು ಮುಂಗಾರು ಹೊಸ್ತಿಲಿಗೆ ಬಂದ ಕನ್ನಡದ ಮೊದಲ ಮಣ್ಣಿನ ಹಬ್ಬವಾಗಿದೆ. ರೈತರು ರಾಸುಗಳಿಗೆ ಔಷಧಿ ಗುಣಗಳುಳ್ಳ ಸೊಟ್ಟಿ ಕುಡಿಸಿ, ಬಣ್ಣ ಬಳಿದು ಅಲಂಕಾರ ಮಾಡಿ ಓಡಿಸಿ ಖುಷಿ ಪಡುವ ಹಬ್ಬವಾಗಿದೆ. ರೈತರು ತಮ್ಮ ಎತ್ತು ಹಾಗೂ ಹೋರಿಗಳ ಮೈ ತೊಳೆದು, ಬಣ್ಣ ಹಚ್ಚಿ ಶೃಂಗರಿಸಿ ಹಮ್ಮಿಕೊಂಡ ಹರಿಯುವ ದೃಶ್ಯ ರೋಮಾ೦ಚನಗೊಳಿಸಿತು.
ವರ್ಷವಿಡೀ ಮನರ೦ಜನಾ ದುಡಿಯುವ ಎತ್ತುಗಳಿಗೆ ಕೂಟವಾಗಿರುವ ಕಾರ ಹುಣ್ಣಿಮೆ ನಿಮಿತ್ತ ವಿಶೇಷ ಅಲಂಕಾರ ಹಾಗೂ ಭಕ್ಷಗಳನ್ನು ಉಣಿಸುವ ಸಂಪ್ರದಾಯ ಉತ್ತರ ಕರ್ನಾಟಕದಾದ್ಯಂತ ರೂಢಿಯಲ್ಲಿದೆ. ರೈತನೊಂದಿಗೆ ದುಡಿಯುವ ಎತ್ತುಗಳಿಗೆ ಪೂಜೆ ಸಲ್ಲಿಸುವ ಸಂಭ್ರಮದ ಹಬ್ಬ ಕಾರ ಹುಣ್ಣಿಮೆ. ಅದರಲ್ಲಿಯೂ ಉತ್ತರ ಕರ್ನಾಟಕದಲ್ಲಿ ಪ್ರತಿಯೊಂದು ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಈ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಎತ್ತುಗಳನ್ನು ಅಲಂಕಾರ ಮಾಡಿ ಖುಷಿಪಡುವ ರೈತರಿಗೆ ಹುಣ್ಣಿಮೆಯಲ್ಲಿ ಪ್ರವೇಶ ಮಾಡುವ ಮಳೆ ರೈತರ ಹೊಲಗಳನ್ನು ಉತ್ತು-ಬಿತ್ತು ಚಟುವಟಿಕೆಗೆ ಹಸಿರು ನಿಶಾನೆ ನೀಡುತ್ತದೆ.
ಜಾನುವಾರಗಳ ಸಂಖ್ಯೆ ಇಳಿಮುಖ: ಕಳೆಗುಂದಿದ ಕಾರ ಹುಣ್ಣಿಮೆ ಅಧುನಿಕತೆಯ ವೈಜ್ಞಾನಿಕತೆ ಮತ್ತು ತಂತ್ರಜ್ಞಾನ ಹೆಚ್ಚಾದಂತೆ ರೈತರು ಕೃಷಿ ಚಟುವಟಿಕೆಗಳಿಗೆ ಯಂತ್ರವನ್ನು ಬಳಕೆಯಿಂದ ಜಾನುವಾರುಗಳ ಸಂಖ್ಯೆ ಇಳಿಮುಖವಾಗಿ ಮೊದಲಿನ ಕಾರ ಹುಣ್ಣಿಮೆಯ ಕಳೆ ಸದ್ಯ ಕಳೆಗು೦ದಿದೆ. ಕಾರ ಹುಣ್ಣಿಮೆ ಬಂತು ಅಂದ್ರೆ ಎಲ್ಲಿಲ್ಲದ ಉತ್ಸಾಹ ಸಂಭ್ರಮ ರೈತಾಪಿ ವರ್ಗದಲ್ಲಿ ಇರ್ತಿತ್ತು. ಎಲ್ಲಾ ಎತ್ತುಗಳಿಗಿಂತಲೂ ನನ್ನ ಎತ್ತು ಚೆನ್ನಾಗಿ ಕಾಣಬೇಕು ಅಂತ ಸಾಕಷ್ಟು ಶೃಂಗಾರ ಕೂಡಾ ಮಾಡತ್ತಿದ್ದರು. ವಿವಿಧ ಬಣ್ಣಗಳ ಎತ್ತುಗಳನ್ನು ನಿಲ್ಲಿಸಿ ಅತಿ ವಿಜೃಂಭಣೆಯಿಂದ ಕರಿ ಹರಿಯುತ್ತಿದ್ದರು. ಬಿಳಿ, ಕೆಂದ, ಕರಿಯ ಎತ್ತುಗಳ ಮುನ್ನೋಟದಲ್ಲಿ ಮುಂಗಾರು ಹಿಂಗಾರು ಬೆಳೆಯ ಸಮೃದ್ಧಿಯ ನೋಟವನ್ನು ರೈತರು ಕಾಣಿದ್ರು, ಆದರೆ ಸದ್ಯ ಕರಿ ಹರಿಯಲು ಎತ್ತುಗಳನ್ನು ಹುಡುಕಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಹುಣ್ಣಿಮೆಯ ಹಿಂದಿನ ದಿನ ‘ಹೊನ್ನುಗ್ಗಿ’ ಹಬ್ಬ ಆಚರಿಸಲಾಗುತ್ತದೆ. ಅಂದಿನ ದಿನ ರೈತರ ಮನೆಯಲ್ಲಿನ ರೈತಾಪಿ ಸಾಮಗ್ರಿಗಳನ್ನು ಕ್ಯಾವಿಯಿಂದ ಸಾರಿಸಿ ಅಲಂಕರಿಸಿ ಪೂಜಿಸುವ ವಾಡಿಕೆಯುಂಟು. ಒಟ್ಟಾರೆಯಾಗಿ ಇದು ಹಬ್ಬದ ತಯಾರಿಯ ದಿನ. ಈ ದಿನ ಎತ್ತುಗಳಿಗೆ ಹೊಸ ಹಗ್ಗ, ಕೊಳಕಣ್ಣ (ಕೊರಳಿಗೆ ಕಟ್ಟುವ ಹಗ್ಗ), ಮೂಗುದಾಣ (ಎತ್ತುಗಳ ಹತೋಟಿಗೆ ಮೂಗಿನ ಮೂಲಕ ಹಾಕುವ ಹಗ್ಗ), ಬಾಸಿಂಗ, ಗಾಜುಮಕಡಿ (ಹಣೆಗೆ ಕಟ್ಟುವ ಹೂವಿನ ಇಲ್ಲವೇ ಬಣ್ಣದ ಹಾಳೆಯ ಮಾಲೆ), ಕೋಡಿಗೆ ಕಟ್ಟಲು ಬಣ್ಣದ ಬಟ್ಟೆ ಇಲ್ಲವೇ ರಿಬ್ಬನ್ ಕಟ್ಟಿ ಶೃಂಗರಿಸಿದ್ದರು.
ಈ ಕಾರ್ಯಕ್ರಮದಲ್ಲಿ ಗ್ರಾಮ ಸಹಾಯಕರಾದ ಪರಸು ಚಿಕನಾಳ, ಬಸು ಹಂಡಿ, ಹನಮಂತ ವಾಲಿಕಾರ, ತಿಮ್ಮಣ್ಣ ವಾಲೀಕಾರ, ಸುನೀಲ ಲೋಕಾಪೂರ ಸೇರಿದಂತೆ ಇನ್ನೂ ಅನೇಕರು ಇದ್ದರು.
- ಕರುನಾಡ ಕಂದ
