ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕಾಕಾ ಕೂಡ ಅರ್ಧ ಅಪ್ಪನಂತೆ ಅಲ್ವೇ!

ಮನೆಯಲ್ಲಿ ಅದರಲ್ಲೂ ಕೂಡ ಕುಟುಂಬದಲ್ಲಿ ತನ್ನ ತಂದೆಗಿಂತಲೂ ಮಕ್ಕಳಿಗೆ ಹೆಚ್ಚು ಆತ್ಮೀಯವಾಗುವುದು ಕೆಲವೊಮ್ಮೆ ಚಿಕ್ಕಪ್ಪಂದಿರು. ಅಪ್ಪನೊಂದಿಗೆ ಹೇಳಲಾಗದ, ಅಪ್ಪನ ವರ್ಚಸ್ಸಿಗೆ ಭಯಪಟ್ಟುಕೊಳ್ಳುವ ಕೆಲ ವಿಷಯಗಳನ್ನು ಗಂಡು ಮಕ್ಕಳು ಚಿಕ್ಕಪ್ಪನ ಬಳಿ ತೋಡಿಕೊಳ್ಳುವುದುಂಟು. ಮನೆಯಲ್ಲಿ ಯಾರಾದರೂ ಬೈದರೆ ಮಕ್ಕಳು ಅಳುತ್ತಾ ಹೋಗುವುದು ಚಿಕ್ಕಪ್ಪನ ಬಳಿ. ಇನ್ನು ಏನಾದರೂ ಬೇಕೆಂದರೆ ಅದನ್ನು ತಂದು ಕೊಡುವುದು ಚಿಕ್ಕಪ್ಪ…. ಒಟ್ಟಿನಲ್ಲಿ ಮಕ್ಕಳ ಪಾಲಿಗೆ ಚಿಕ್ಕಪ್ಪ ಕಾಮಧೇನು, ಕಲ್ಪವೃಕ್ಷ, ಆಪದ್ಬಾಂಧವ ಎಲ್ಲವೂ.

ನಾಲ್ಕು ದಶಕಗಳ ಹಿಂದಿನ ಮಾತಿದು. ಪಕ್ಕದ ಮನೆಯಲ್ಲಿ ಇದ್ದ ಅವರನ್ನು ಕಾಕಾ ಎಂದು ಕರೆದೇ
ರೂಢಿ. ನಮ್ಮ ತಂದೆ ತಾಯಿಗೆ ನಾವು ಮೂರು ಜನ ಮಕ್ಕಳಾದರೆ ಅವರಿಗೆ ಕೇವಲ ಒಬ್ಬಳೇ ಮಗಳು. ಎರಡು ಮನೆಯ ನಡುವೆ ಒಟ್ಟು ನಾಲ್ಕು ಜನ ಮಕ್ಕಳು ಒಡಹುಟ್ಟಿದವರಂತೆ ನಾವು ಬೆಳೆದೆವು. ಅವರ ಮಗಳು ನನಗಿಂತ ಒಂದು ವರ್ಷ ದೊಡ್ಡವಳು. ನನ್ನಪ್ಪ ಅಥವಾ ಅವರ ಅಪ್ಪ ಏನನ್ನೇ ತರಲಿ ನಮಗೆ ಇಬ್ಬರಿಗೂ ಸೇರಿಯೇ ತರಬೇಕಿತ್ತು, ಅಂತಹ ಅನ್ಯೋನ್ಯತೆ ನಮ್ಮಿಬ್ಬರಲ್ಲಿ….. ಬಹುಶಹ ದೇವರು ಮರೆತು ಅಕ್ಕ ತಂಗಿಯರನ್ನು ಬೇರೆ ಬೇರೆ ಮನೆಗಳಲ್ಲಿ ಹುಟ್ಟಿಸಿರಬಹುದು ಎಂಬಷ್ಟು ಅಂದಿನ ಪ್ರೀತಿ ವಿಶ್ವಾಸ ಅನ್ಯೋನ್ಯತೆಗಳು ಇಂದಿಗೂ.

ನನ್ನ ಅಪ್ಪನ ಬಳಿ ಬೈಕಿತ್ತು ನಿಜ…. ಆದರೆ ಅಣ್ಣಂದಿರಿಗೆ ಕಾಕನ ಸೈಕಲ್ ಬೇಕಿತ್ತು. ನಾಲ್ಕುವರೆ ದಶಕಗಳ ಹಿಂದೆ ತಮ್ಮ ಕೆಲಸದ ಮಧ್ಯದಲ್ಲಿ ಮನೆಗೆ ಬರುವ ಕಾಕಾ
ಮನೆಯೊಳಗೆ ಹೋಗಿ ತಮ್ಮ ಊಟ ಮುಗಿಸಿ ಹೊರಗೆ ಬರುವ ಹೊತ್ತಿಗೆ ಅವರ ಸೈಕಲ್ ಮಾಯವಾಗಿರುತ್ತಿತ್ತು. ತಮ್ಮ ಕೆಲಸಕ್ಕೆ ಹೋಗಲು ಅವರಿಗೆ ಸೈಕಲ್ ಬೇಕಿದ್ದರೆ ನನ್ನ ಇಬ್ಬರು ಅಣ್ಣಂದಿರು ಅವರ ಸೈಕಲ್ ತೆಗೆದುಕೊಂಡು ಪರಾರಿಯಾಗಿರುತ್ತಿದ್ದರು. ಹುಸಿ ಮುನಿಸನ್ನು ತೋರುತ್ತಾ ನನ್ನ ಅಣ್ಣಂದಿರ ಹೆಸರನ್ನು ಕೂಗುತ್ತಾ ಅವರ ಬೆನ್ನತ್ತಿ ಹೋಗುತ್ತಿದ್ದರು ಕಾಕಾ… ಇದೀಗ ಇವೆಲ್ಲ ಸುಂದರವಾದ ನೆನಪುಗಳು ನಮ್ಮ ಪಾಲಿಗೆ.

ಇನ್ನು ದೇವಸ್ಥಾನಗಳಿಗೆ ಜಾತ್ರೆಯ ಸಮಯದಲ್ಲಿ ಹೋದಾಗ ನಾವೆಲ್ಲ ಮಕ್ಕಳು ಮತ್ತು ತಾಯಂದಿರಿಗೆ ಜೊತೆಯಾಗಿ ಕಾಕಾ ಬರುತ್ತಿದ್ದರು. ಜಾತ್ರೆಯ ಗದ್ದಲ ನೋಡಿ ಕಾಯಿ ಒಡೆಸಿಕೊಂಡು ಬರಲು ಕಾಕಾ ಮತ್ತು ಮಕ್ಕಳನ್ನು ಹೆಣ್ಣು ಮಕ್ಕಳು ಕಳುಹಿಸಿ ತಾವು ಹರಟೆ ಹೊಡೆಯುತ್ತಾ ಕುಳಿತರೆ ನಮ್ಮನ್ನು ಕರೆದುಕೊಂಡು ಹೊರಟ ಕಾಕಾ ಗುಡ್ಡದ ಒಂದು ಕಲ್ಲಿಗೆ ಕಾಯಿ ಒಡೆದು
ದೇವರೆಡೆ ಮುಖ ಮಾಡಿ ನೈವೇದ್ಯ ಮಾಡಿ ಕಾಯಿಯ ನೀರನ್ನು ನಾವು ಮಕ್ಕಳಿಗೆ ಹಂಚುತ್ತಿದ್ದರು.

ಕಾಯಿ ಒಡೆಸಿಕೊಂಡು ಬೇಗನೆ ಬರುತ್ತಿದ್ದ ನಮಗೆ ಜಾತ್ರೆಯ ಪಳಾರ ( ಕೆಲವೊಮ್ಮೆ ಮನೆಯಲ್ಲಿ ಮಾಡಿದ ತಿಂಡಿ ತಿನಿಸುಗಳು ) ಹಾಕಿ ಕೊಡುವಾಗ ನನ್ನ ಅಮ್ಮ ನಿಜವಾಗಿಯೂ ಕಾಯಿ ಒಡೆಸಿಕೊಂಡು ಬಂದಿರಾ ಅಣ್ಣ?! ಎಂದು ಕೇಳಿದಾಗ ನಾವು ಮಕ್ಕಳೆಲ್ಲ ಮುಸಿ ನಗುತ್ತಾ ಇದ್ದರೆ ಕಾಕಾ ಏನೇನೋ ನೆವ ಹೇಳುತ್ತಿದ್ದರು. ಕೊನೆಗೆ ದೇವರು ಎಲ್ಲಾ ಕಡೆ ಇದ್ದಾನೆ ದೇವಸ್ಥಾನದ ಒಳಗೆ ಹೋಗಿ ಕಾಯಿ ಒಡೆಸಿಕೊಂಡು ಬರಬೇಕು ಅಂತ ಏನೂ ಇಲ್ಲ ಎಂದು ಅತ್ಯಂತ ಸರಳವಾಗಿ ದೇವರ ಸರ್ವಾಂತರ್ಯಾಮಿತನವನ್ನು ನಮಗೆಲ್ಲ ಹೇಳುತ್ತಿದ್ದರು.
ನನ್ನಮ್ಮ, ಆಂಟಿ ಮತ್ತು ಉಳಿದ ಹೆಣ್ಣು ಮಕ್ಕಳು ಇದನ್ನು ಒಪ್ಪದೇ ಹೋದರೂ ಅವರೇನು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ತುಸು ಹೆಚ್ಛೇ ನಿರ್ಭಿಡೆಯ, ನೇರ ಮಾತಿನ ಕಾಕಾ ಯಾರ ಮುಲಾಜಿಗೂ ಒಳಗಾಗುತ್ತಿರಲಿಲ್ಲ. ನನ್ನ ಅಪ್ಪ ಎಂದರೆ ತುಸು ಹೆಚ್ಛೇ ಗೌರವವನ್ನು ಹೊಂದಿದ್ದ ಅವರು ಸಾಹೇಬರು ಎಂದೇ ಕರೆಯುತ್ತಿದ್ದರು.

ನನ್ನಪ್ಪನ ಬೈಕಿನ ಮೇಲೆ ನಾನು ಮತ್ತು ಅಕ್ಕ ( ನನಗಿಂತ ಒಂದು ವರ್ಷ ದೊಡ್ಡವಳಾದ್ದರಿಂದ ನಾನು ಆಕೆಯನ್ನು ಅಕ್ಕ ಎಂದೇ ಕರೆಯುತ್ತಿದ್ದೆ ) ಕುಳಿತಷ್ಟೇ ಸಹಜವಾಗಿ ಅವರ ಸೈಕಲ್ ಮೇಲೆಯೂ ನಮ್ಮ ಪಯಣ ಸಾಗುತ್ತಿತ್ತು. ಚಿಕ್ಕಂದಿನಲ್ಲಿ ನಾವಿಬ್ಬರೂ ಜಗಳವನ್ನು ಕೂಡ ಆಡುತ್ತಿದ್ದೆವು. ಆದರೆ ಅದೆಂದು ಮುಂದುವರೆಯುತ್ತಿರಲಿಲ್ಲ ಅದಕ್ಕೆ ಕಾರಣ ಅಪ್ಪ ಮತ್ತು ಕಾಕಾ.

ಇನ್ನು ಗಂಡು ಮಕ್ಕಳಿಲ್ಲದ ಅವರಿಬ್ಬರಿಗೆ ನನ್ನ ಅಣ್ಣಂದಿರ ಮೇಲೆ ಅತಿಯಾದ ಪ್ರೀತಿ. ನನ್ನ ಸಣ್ಣ ಅಣ್ಣನಂತೂ ಚಿಕ್ಕ ಮಗುವಿನಂತೆ ಅವರಿಬ್ಬರೂ ಗಂಡ ಹೆಂಡತಿಯರ ಜೊತೆ ನಡೆದುಕೊಳ್ಳುತ್ತಿದ್ದ, ಕಾಡುತ್ತಿದ್ದ ಪ್ರೀತಿಸುತ್ತಿದ್ದ, ಅಷ್ಟೇ ಕಿರಿಕಿರಿಯನ್ನು ಮಾಡಿ ಗೋಳು ಹೊಯ್ದುಕೊಳ್ಳುತ್ತಿದ್ದ.. ನನ್ನಮ್ಮನೊಂದಿಗೆ ಜಗಳವಾಡಿದಷ್ಟೇ ಸಲೀಸಾಗಿ ಊಟ ತಿಂಡಿಗೆ ಆಂಟಿ ಜೊತೆ ಕಿರಿಕಿರಿ ಮಾಡಿಕೊಳ್ಳುತ್ತಿದ್ದ. ಅವರು ಆತನ ನಡವಳಿಕೆಗಳನ್ನು ಅಷ್ಟೇ ಪ್ರೀತಿಯಿಂದ ಸಹಿಸಿಕೊಳ್ಳುತ್ತಿದ್ದರು.

ನನಗೂ ಅಕ್ಕನಿಗೂ ಪುಸ್ತಕದ ಹುಚ್ಚು. ತುಂಬಾ ಚಿಕ್ಕ ವಯಸ್ಸಿನಲ್ಲಿಯೇ ನಾವಿಬ್ಬರು ಕಥೆ ಕಾದಂಬರಿಗಳನ್ನು ಲೇಖನಗಳನ್ನು ಓದುತ್ತಿದ್ದೆವು. ಅವುಗಳ ಕುರಿತು ಹಿರಿಯ ಓದುಗರಂತೆ ಚರ್ಚಿಸುತ್ತಿದೆವು . ಈಗ ನೆನೆಸಿಕೊಂಡರೆ ನಗು ಬರುತ್ತದೆ. ಆ ವಯಸ್ಸಿಗೆ ತಕ್ಕ ಹಾಗೆ ಆಟವಾಡುವುದಕ್ಕಿಂತ ಪುಸ್ತಕಗಳಲ್ಲಿ ತಲೆ ಹುದುಗಿಸಿದ್ದೇ ಹೆಚ್ಚು. ಆಗ ನಮ್ಮಿಬ್ಬರ ವಯಸ್ಸು 8 ಮತ್ತು 9 ಆಗಿತ್ತು. ಉಳಿದವರು ಪುಸ್ತಕಗಳಲ್ಲಿ ಬಳ್ಳಿಗಳನ್ನು ಬರೆಯುವಾಗ ನಾವು ದೊಡ್ಡ ದೊಡ್ಡ ಕಥೆಗಳನ್ನು ಕಿರು ಕಾದಂಬರಿಗಳನ್ನು ಓದುತ್ತಿದ್ದೆವು.

ಮುಂದೆ ಅವರು ಕೆಲಸದ ನಿಮಿತ್ತ ಬೇರೆ ಬೇರೆ ಊರುಗಳಿಗೆ ವರ್ಗವಾಗಿ ಹೋದಾಗ ಪ್ರತಿ ರಜೆಯಲ್ಲಿಯೂ ನಾವು ಮಕ್ಕಳು ಅವರ ಮನೆಯಲ್ಲಿ ಮತ್ತು ನಮ್ಮ ಮನೆಯಲ್ಲಿ ವಾರಗಟ್ಟಲೆ ರಜಾ ದಿನಗಳನ್ನ ಕಳೆಯುತ್ತಿದ್ದೆವು. ಇನ್ನು ಅವರು ವರ್ಗವಾಗಿ ಹೋದ ಪ್ರತಿ ಊರುಗಳಿಗೆ ಹತ್ತಿರದ ಎಲ್ಲಾ ಪ್ರೇಕ್ಷಣೀಯ ಸ್ಥಳಗಳನ್ನು ತೋರಿಸಿಕೊಂಡು ಬರುವುದು ಕಾಕಾನ ಕೆಲಸ. ಜೊತೆಗೆ ಲೈಬ್ರರಿಯ ಮೆಂಬರ್ಶಿಪ್ ಮಾಡಿಸಿ ನಮ್ಮಿಬ್ಬರಿಗೆ ಪುಸ್ತಕ ಕೊಡಿಸಿಕೊಂಡು ಬರುವುದು ಅವರ ಕೆಲಸವಾಗಿತ್ತು.

ಕೇವಲ ನಮ್ಮ ಮನೆಯ ಮಾತ್ರವಲ್ಲ ನನ್ನ ಎಲ್ಲ ಸಂಬಂಧಿಕರ ಮದುವೆಗಳಿಗೆ ಮನೆಯ ಕಾರ್ಯಕ್ರಮಗಳಿಗೆ ಆಂಟಿ ಮತ್ತು ಅಕ್ಕನ ಹಾಜರಾತಿ ಕಡ್ಡಾಯವಾಗಿತ್ತು. ಹೀಗಾಗಿ ನಾವು ದೂರ ಬೇರೆ ಊರುಗಳಲ್ಲಿ ಇದ್ದರೂ ನಮ್ಮಿಬ್ಬರ ಆತ್ಮೀಯತೆ ಕಮ್ಮಿಯಾಗಲಿಲ್ಲ.

ದೊಡ್ಡವರಾಗುತ್ತಾ ಹೋದಂತೆ ನಮ್ಮಿಬ್ಬರ ಆತ್ಮೀಯತೆ ಮತ್ತಷ್ಟು ಹೆಚ್ಚಿತು ಇದಕ್ಕೆ ನಮ್ಮ ಪಾಲಕರ ಪ್ರೋತ್ಸಾಹವು ಇತ್ತು. ಎರಡು ದೇಹ ಒಂದು ಜೀವ ಎಂಬಂತೆ ನಾವಿಬ್ಬರೂ ಬೆಳೆದೆವು. ಒಂದೇ ಮಂಚದ ಮೇಲೆ ಕುಳಿತು ಒಂದೇ ತಟ್ಟೆಯಲ್ಲಿ ಊಟ ಮಾಡುತ್ತಾ ಒಂದೇ ಪುಸ್ತಕವನ್ನು ಇಬ್ಬರೂ ಸೇರಿ ಓದುತ್ತಾ ನಂತರ ವಿಚಾರ ವಿನಿಮಯಗಳನ್ನು ಮಾಡುತ್ತ ನಾವು ಬೆಳೆಯುತ್ತಿದ್ದೆವು. ಪತ್ರ ವ್ಯವಹಾರವಂತೂ ಇದ್ದೇ ಇತ್ತು.
ನೈತಿಕವಾಗಿ, ಭಾವನಾತ್ಮಕವಾಗಿ ಅಪ್ಪ ಮತ್ತು ಕಾಕನ ಬೆಂಬಲವೂ ಇತ್ತು.

ಒಂದೊಮ್ಮೆ ಪಿಯುಸಿಯಲ್ಲಿ ಓದುತ್ತಿರುವಾಗ ಮೊಟ್ಟ ಮೊದಲ ಬಾರಿ ನಮ್ಮಿಬ್ಬರ ನಡುವೆ ಯಾವುದೋ ಒಂದು ವಿಷಯಕ್ಕೆ ಮನಸ್ತಾಪ ಉಂಟಾಯಿತು. ನಾವು ನೆಲೆಸಿದ್ದ ಊರಿಗೆ ಕಾರ್ಯಕ್ರಮಕ್ಕೆ ಬಂದಿದ್ದ ಅಕ್ಕನನ್ನು ಕರೆದುಕೊಂಡು ಬರಲು ನನ್ನನ್ನು ಅಪ್ಪ ಕರೆದುಕೊಂಡು ಹೋದರು. ಬೈಕ್ ಇದ್ದರೂ ನಡೆಯುತ್ತಾ ಹೋದ ನನಗೆ ನನ್ನಪ್ಪ ಸ್ನೇಹದ ಮಹತ್ವ, ಪ್ರೀತಿ, ವಿಶ್ವಾಸಗಳ ಕುರಿತು
ತಿಳಿ ಹೇಳುತ್ತಾ ಸ್ನೇಹವನ್ನು ಉಳಿಸಿಕೊಳ್ಳಲು ಸಲಹೆ ನೀಡಿದರು. ಅಂದಿನಿಂದ ಇದೀಗ 3 ದಶಕಗಳು ಕಳೆದಿದ್ದರೂ ನಮ್ಮಿಬ್ಬರ ನಡುವಿನ ಆತ್ಮೀಯತೆ ಹಾಗೆಯೇ ಇದೆ.

ಚಿಕ್ಕಂದಿನಲ್ಲಿ ನಾವಿಬ್ಬರನ್ನು ತಮಾಷೆ ಮಾಡುತ್ತಾ ನನ್ನಪ್ಪ ಮತ್ತು ಕಾಕಾ ಇವರಿಬ್ಬರನ್ನು ಒಬ್ಬನಿಗೆ ಕೊಟ್ಟು ಮದುವೆ ಮಾಡಬೇಕು ಎನ್ನುತ್ತಿದ್ದರು. ಆದರೆ ಕಾಕತಾಳೀಯ ಎಂಬಂತೆ ನಮ್ಮಿಬ್ಬರ ಗಂಡಂದಿರು ಒಂದೇ ಶಾಲೆಯಲ್ಲಿ ಓದಿದ ಸ್ನೇಹಿತರಾಗಿದ್ದಾರೆ. ಈಗಲೂ ಕೂಡ ಅವರ ಶಾಲೆಯ ಹಳೆಯ ವಿದ್ಯಾರ್ಥಿಗಳ ಕಾರ್ಯಕ್ರಮಗಳಲ್ಲಿ ಮತ್ತು ಕೌಟುಂಬಿಕ ಕಾರ್ಯಕ್ರಮಗಳಲ್ಲಿ ನಾವೆಲ್ಲರೂ ಜೊತೆ ಸೇರುತ್ತೇವೆ.

ಒಂದೊಮ್ಮೆ ನಾನು ತವರೂರಿಗೆ ಹೋಗುವಾಗ ಮಾರ್ಗ ಮಧ್ಯದಲ್ಲಿ ಅವರ ಮನೆಗೆ ಹೋಗುವ ನಿರ್ಧಾರ ಮಾಡಿ ಕರೆ ಮಾಡಿದೆ. ಮಧ್ಯಾಹ್ನ 3 ಗಂಟೆಯಾದರೂ 70ರ ಹರೆಯದ ಕಾಕಾ, ಆಂಟಿ, ಮಗಳು ಮತ್ತು ಅಳಿಯ ಕೂಡ ನನಗೋಸ್ಕರ ಊಟ ಮಾಡದೆ ಕಾಯುತ್ತಾ ಕುಳಿತದ್ದು ನೆನೆದರೆ ಮನಸ್ಸು ತುಂಬಿ ಬರುತ್ತದೆ. ಪತ್ರಿಕೆಗಳಲ್ಲಿ ಪ್ರಕಟವಾಗುವ ನನ್ನ ಲೇಖನಗಳನ್ನು ನೋಡಿ ತುಂಬ ಅಭಿಮಾನದಿಂದ ಸಾಹಿತಿಗಳು ಎಂದು ನನ್ನನ್ನು ಕರೆಯುವ ಕಾಕಾನ ಮಾತಿನಲ್ಲಿ ಮೊದಲಿನ ಮೊನಚಿಲ್ಲ, ನಡಿಗೆ ನಿಧಾನವಾಗಿದೆ. ಮಾತು ಕೂಡ. ಆದರೆ ಕಣ್ಣಲ್ಲಿನ ಹೊಳಪು ಮತ್ತು ಪ್ರೀತಿ ಮಾತ್ರ ಹಾಗೆಯೇ ಉಳಿದಿದೆ.

ರಕ್ತ ಸಂಬಂಧಗಳು ಮಾತ್ರವೇ ನಿಜವಾದ ಸಂಬಂಧ ಎಂಬ ಕಾಲದಲ್ಲಿ ಸ್ನೇಹ ಸಂಬಂಧಗಳು ಆತ್ಮೀಯತೆ ಇಂದಿಗೂ ಹಾಗೆಯೇ ಉಳಿದಿದೆ ಎನ್ನುವುದಕ್ಕೆ ಕಾಕಾನ ಪ್ರೀತಿಯೇ ಸಾಕ್ಷಿ ಎಷ್ಟೇ ಆಗಲಿ ಕಾಕಾ ಎಂದರೆ ಅರ್ಧ ಅಪ್ಪನಂತೆ ಅಲ್ವೇ?

ಇದೀಗ ನನ್ನ ಅಪ್ಪ ಅಮ್ಮ ಇಬ್ಬರೂ ಇಲ್ಲದೆ ಹೋದರೂ ಕಾಕಾ ಮತ್ತು ಆಂಟಿ ಅವರ ಪ್ರೀತಿ ಹಾಗೆಯೇ ಇದೆ. ಅಂದು ನನ್ನ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ನನ್ನ ಅಣ್ಣ ಆಂಟಿಯನ್ನು ಕಾರ್ಯಕ್ರಮಕ್ಕೆ ಕರೆತಂದಾಗ ನನಗಾದ ಸಂತೋಷಕ್ಕೆ ಎಲ್ಲೆ ಇರಲಿಲ್ಲ…. ಅವರು ನಮಗಾಗಿ ಈಗಲೂ ಕಾಯುತ್ತಾರೆ ನಾವುಗಳೆ ಸಮಯ ಇಲ್ಲದವರಂತೆ ಒಂದೇ ಸಮನೆ ಬದುಕಿನ ನಾಗಾಲೋಟದಲ್ಲಿ ಓಡುತ್ತಿದ್ದೇವೆ.

70 ದಾಟಿದರೂ ಅದೇ ಉತ್ಸಾಹ,ಹುಮ್ಮಸ್ಸನ್ನು ಹೊಂದಿರುವ ಅವರು ಆರೋಗ್ಯವಂತರಾಗಿ ಇನ್ನೂ ಹಲವಾರು ವರ್ಷ ನಮ್ಮ ಜೊತೆ ಇರಲಿ ಎಂದು ಆಶಿಸುವ

ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ