ಬಳ್ಳಾರಿ / ಕಂಪ್ಲಿ : ಕಂಪ್ಲಿ-ಗಂಗಾವತಿ ಸಂಪರ್ಕದ ತುಂಗಭದ್ರಾ ನದಿ ಸೇತುವೆ ತುಂಬ ಹಳಯದ್ದಾಗಿದ್ದು, ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳಿ ಅವರು ಕಂಪ್ಲಿ ಹೊಸ ಸೇತುವೆಗೆ ಕೋಟ್ಯಾಂತರ ಅನುದಾನ ನೀಡಿ, ಚಾಲನೆ ನೀಡಿದರೆ ಈ ಭಾಗದ ರೈತರ, ವಿದ್ಯಾರ್ಥಿಗಳ, ಪ್ರಯಾಣಿಕರಿಗೆ ತುಂಬ ಅನುಕೂಲವಾಗಲಿದೆ ಎಂದು ಶಾಸಕ ಜೆ.ಎನ್.ಗಣೇಶ ಹೇಳಿದರು.
ತಾಲೂಕಿನ ಎಮ್ಮಿಗನೂರು ಗ್ರಾಮದಲ್ಲಿ ಕಲ್ಯಾಣ ಪಥ ಯೋಜನೆಯಡಿ ಸುಮಾರು 6.10ಕೋಟಿ ವೆಚ್ಚದ ನಿರ್ಮಿಸಲಿರುವ ಎಮ್ಮಿಗನೂರು-ಇಟಗಿ ಬಿಟಿ ರಸ್ತೆ ಕಾಮಗಾರಿಗೆ ಸೋಮವಾರ ಭೂಮಿ ಪೂಜೆ ಸಲ್ಲಿಸಿದ ನಂತರ ಮಾತನಾಡಿ, ಇಲ್ಲಿನ ಸೇತುವೆಯು 75 ವರ್ಷದ ಹಳೆಯದಾಗಿದೆ. ನದಿ ಪ್ರವಾಹದ ವೇಳೆ ಸಂಚಾರ ಕಡಿತವಾಗಿ ರೈತರು, ಪ್ರಯಾಣಿಕರು, ವಿದ್ಯಾರ್ಥಿಗಳಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ಇಲ್ಲಿ ಹೊಸ ಸೇತುವೆ ನಿರ್ಮಿಸಬೇಕೆಂದು ಸದನದಲ್ಲಿ ಧ್ವನಿ ಎತ್ತಲಾಗಿದೆ. ಈಗ ಸಚಿವ ಸತೀಶ ಜಾರಕಿಹೋಳಿ ಅವರು ಪರಿಶೀಲಿಸಲಿದ್ದು, ಹೊಸ ಸೇತುವೆಯ ಭರವಸೆ ಮೂಡಿದೆ. ನಬಾರ್ಡ್ ಮತ್ತು ಲೋಕೋಪಯೋಗಿಯ ಸುಮಾರು 110 ಕೋಟಿ ವೆಚ್ಚದಲ್ಲಿ ಕಂಪ್ಲಿ ಸೇತುವೆ ನಿರ್ಮಾಣದ ಸಾಧ್ಯತೆ ಇದೆ. ಬಹಳ ವರ್ಷಗಳಿಂದ ಎಮ್ಮಿಗನೂರು-ಇಟಗಿ ಮಾಗಾಣಿ ರಸ್ತೆ ಆಗಿರಲಿಲ್ಲ. ಆದರೆ, ಈಗ ಕೋಟ್ಯಾಂತರ ವೆಚ್ಚದಲ್ಲಿ ಬಿಟಿ ರಸ್ತೆ ಮಾಡಲಾಗುತ್ತಿದೆ. ಈಗಾಗಲೇ ಒಂದು ಕೋಟಿ ವೆಚ್ಚದಲ್ಲಿ ಒಂದು ಕಿ.ಮೀ ಸಿಸಿ ರಸ್ತೆ ಮಾಡಲಾಗಿದೆ. 30 ಹಾಸಿಗೆಯ ಸರ್ಕಾರಿ ಆಸ್ಪತ್ರೆ, ಎಪಿಎಂಸಿ ಮಾರುಕಟ್ಟೆ ಕಾಮಗಾರಿಗೆ ಅತಿ ಶೀಘ್ರದಲ್ಲೇ ಚಾಲನೆ ನೀಡಲಾಗುವುದು. ಎಮ್ಮಿಗನೂರು ಪಟ್ಟಣ ಪಂಚಾಯಿತಿ ಮಾಡಬೇಕಾಗಿದೆ. ಕಂಪ್ಲಿ ತಾಲೂಕಿನಲ್ಲಿ ಸುಮಾರು 34ಕೋಟಿ ವೆಚ್ಚದಲ್ಲಿ ಕಂಪ್ಲಿಕೋಟೆ – ರಾಮಸಾಗರ, ಜವುಕು-ದೇವಸಮುದ್ರ, ಎಮ್ಮಿಗನೂರು-ಇಟಗಿ ಸೇರಿದಂತೆ ರೈತರ ಮಾಗಾಣಿ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಪಿಡಿಒ ತಾರಾನಾಯ್ಕ್, ಗ್ರಾಪಂ ಅಧ್ಯಕ್ಷೆ ಶಾರದಾ, ಸದಸ್ಯರು, ಜನಪ್ರತಿನಿಧಿಗಳು, ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್
