
ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಭೀಮಾನಗರ ಸರಕಾರಿ ಶಾಲೆಯ ಕೊಠಡಿಯ ಮೇಲ್ಛಾವಣಿಯು ಕಡಿದು ಬಿದ್ದು 2 ಕೋಣೆಗಳು ಪೂರ್ತಿ ಬಿದ್ದು ಹೋಗಿವೆ, ಉಳಿದ ಕೋಣೆಗಳು ಮಳೆ ಬಂದರೆ ಸೋರುತ್ತಿವೆ. ಇದರಿಂದಾಗಿ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಮಕ್ಕಳು ಹೊರಗಡೆ ಕುಳಿತು ಪಾಠ ಕೇಳಬೇಕಾದ ಸ್ಥಿತಿ ಬಂದಿದೆ. ಶಾಲೆಯ ಗೋಡೆಗಳು ಬೀಳುವ ಹಂತಕ್ಕೆ ತಲುಪಿವೆ. ಶಾಲೆಯ ಸ್ಥಿತಿ ಮಾತ್ರ ಹೇಳತೀರದಾಗಿದೆ.
ಮಳೆ ಬಂತು ಎಂದರೆ ಬಿರುಕು ಬಿಟ್ಟ ಗೋಡೆ ಹಾಗೂ ಮೇಲ್ಚಾವಣಿಯಿಂದ ನೀರು ಸೋರಲು ಆರಂಭಿಸುತ್ತದೆ. ಈ ಶಾಲೆ ಮಳೆಯಿಂದ ಸೋರುತ್ತಿದ್ದರೂ ಕೂಡ ಶಿಕ್ಷಣ ಇಲಾಖೆಯ ಅಧಿಕಾರಿಗಳು ಕಾಯಕಲ್ಪ ಒದಗಿಸಲು ಮುಂದಾಗಿಲ್ಲ. ದುರಂತ ಎಂದರೆ ಮಳೆ ಬಂದ್ರೆ ತರಗತಿಗಳಲ್ಲಿ ಪಾಠ ನಡೆಯುವುದಿಲ್ಲ.ನಡೆದರೂ ಬೇರೆ ತರಗತಿಯ ವಿದ್ಯಾರ್ಥಿಗಳೊಂದಿಗೆ ಕುಳಿತು ಪಾಠ ಕೇಳಬೇಕಾದ ಪರಿಸ್ಥಿತಿ ಇದ್ದು, ಆದರೆ ಈ ಶಾಲೆಯಲ್ಲಿ ಒಟ್ಟು 6 ಕೋಣೆಗಳಿದ್ದು ಉಪಯೋಗಕ್ಕೆ ಯೋಗ್ಯವಾಗಿದ್ದು 1 ಕೋಣೆ ಮಾತ್ರ, ದುರಸ್ತಿ ಮಾಡಿಸಿಕೊಡುವಂತೆ ಶಾಲೆಯ ಎಸ್ಡಿಎಂಸಿ ಅಧ್ಯಕ್ಷರು ಶಿಕ್ಷಣ ಇಲಾಖೆಗೆ ಹಾಗು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ, ಶಾಸಕರಿಗೆ, ತಾಲೂಕ ಪಂಚಾಯತ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವದೇ ಪ್ರಯೋಜನ ಆಗಿರುವುದಿಲ್ಲ, ಇಲ್ಲಿಯವರೆಗೂ ಯಾರೂ ಸಹ ಈ ಶಾಲೆಗೆ ಭೇಟಿ ನೀಡಿರುವುದಿಲ್ಲ. ಈ ಶಾಲೆಯಲ್ಲಿ ಒಟ್ಟು 105 ಮಕ್ಕಳು ಓದುತ್ತಿದ್ದು , ಆದರೆ ಇಬ್ಬರು ಶಿಕ್ಷಕರು ಮಾತ್ರ ಇದ್ದು, ಈ ವರ್ಷ ಈ ಶಾಲೆಗೆ ಅತಿಥಿ ಶಿಕ್ಷಕರ ನೇಮಕಕ್ಕೂ ಇಲಾಖೆಯು ಹಿಂದೇಟು ಹಾಕುತ್ತಿದೆ. ಪಾಲಕರು ಶಾಲೆಯ ಸ್ಥಿತಿ ನೋಡಿ ತಮ್ಮ ಮಕ್ಕಳನ್ನು ಬೇರೆ ಶಾಲೆಗೆ ದಾಖಲಿಸುತ್ತಿದ್ದಾರೆ, ಒಂದು ವೇಳೆ ಅಧಿಕಾರಿಗಳು, ಜನಪ್ರತಿನಿಧಿಗಳು ಶಾಲೆಯ ರಿಪೇರಿಗೆ ಕ್ರಮಕೈಗೊಳ್ಳದೆ ಇದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದು ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ಗಡ್ಡಿಲಿಂಗ ಪೂಜಾರಿ ಹಾಗೂ ಸದಸ್ಯರಾದ ಬಾದಶ್ಯಾ ಶೇಖ್ ಇವರು ಮನವಿ ಜೊತೆ ಎಚ್ಚರಿಕೆಯನ್ನು ನೀಡಿದ್ದಾರೆ.
ವರದಿ ಮನೋಜ್ ನಿಂಬಾಳ
