ಬಳ್ಳಾರಿ / ಕಂಪ್ಲಿ : ದೇಶದ ಬೆನ್ನೆಲುಬಾಗಿರುವ ರೈತರಿಗೆ ಸಕಾಲದಲ್ಲಿ ಜೋಳ ಖರೀದಿ ಕೇಂದ್ರ ಆರಂಭಿಸುವ ಮೂಲಕ ಅನುಕೂಲ ಮಾಡಿಕೊಟ್ಟಿದ್ದು, ಇದರಿಂದ ಈ ಬಾರಿ ರೈತರು ಕನಿಷ್ಠ ಬೆಂಬಲ ಬೆಲೆ ಪಡೆಯುವ ಮೂಲಕ ಆರ್ಥಿಕವಾಗಿ ಸಬಲರಾಗುವ ಜತೆಗೆ ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದಾರೆ ಎಂದು ಶಾಸಕ ಜೆ.ಎನ್.ಗಣೇಶ ಹೇಳಿದರು.
ತಾಲೂಕಿನ ಎಮ್ಮಿಗನೂರು ಗ್ರಾಮದ ಎಪಿಎಂಸಿ ಆವರಣದಲ್ಲಿ ಜೋಳ ಖರೀದಿ ಕೇಂದ್ರ ಆರಂಭಿಸಿ, ರೈತರಿಗೆ ಅನುಕೂಲವಾದ ಹಿನ್ನಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಗುರುವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭ ಉದ್ಘಾಟಿಸಿದ ನಂತರ ಸನ್ಮಾನ ಸ್ವೀಕರಿಸಿ ಮಾತನಾಡಿ, ಈಗಾಗಲೇ ಎಮ್ಮಿಗನೂರು-ಕುರುಗೋಡು ರಸ್ತೆ ಅಭಿವೃದ್ಧಿ ಪಡಿಸಲಾಗಿದೆ. ಬರುವ ಒಂದೆರಡು ವರ್ಷದಲ್ಲಿ ಸಂಪೂರ್ಣವಾಗಿ ಕ್ಷೇತ್ರದಲ್ಲಿ ರಸ್ತೆಗಳು ಅಭಿವೃದ್ಧಿಯಾಗಲಿವೆ. ರೈತರು ದೇಶದ ಬೆನ್ನೆಲುಬಾಗಿರುವುದರಿಂದ ಮೊದಲ ಆಧ್ಯತೆ ರೈತರ ಅಭಿವೃದ್ಧಿ ಕಾರ್ಯಗಳಿಗೆ ಕೊಡಲಾಗುತ್ತದೆ. 2 ಕೋಟಿ ವೆಚ್ಚದ ತರಕಾರಿ ಮಾರುಕಟ್ಟೆ ಅಭಿವೃದ್ಧಿಗೆ ಅನುದಾನ ಕೊಟ್ಟಿದ್ಧೀವಿ. ಮುಂದಿನ ದಿನದಲ್ಲಿ ಎಮ್ಮಿಗನೂರು ಎಪಿಎಂಸಿ ಅಭಿವೃದ್ಧಿ ಪಡಿಸಲಾಗುವುದು. ಕ್ಷೇತ್ರದಲ್ಲಿ ಶಕ್ತಿ ಮೀರಿ ಕೆಲಸ ಮಾಡುವುದಕ್ಕೆ ರೈತರ ಸಹಕಾರ ಅಗತ್ಯವಾಗಿದೆ. ಕಟಾವು ವೇಳೆ ಖರೀದಿ ಕೇಂದ್ರ ಆರಂಭವಾದರೆ, ರೈತರಿಗೆ ಅನುಕೂಲವಾಗುತ್ತದೆ. ದಲ್ಲಾಳಿಗಳ ಹಾವಳಿಯಿಂದ ಸ್ಥಳೀಯ ರೈತರಿಗೆ ಸಮಸ್ಯೆಯಾಗುತ್ತಿರುವ ವಿಷಯ ಗಮನಕ್ಕೆ ಬಂದಿದ್ದು, ದಲ್ಲಾಳಿಗಳ ವಿರುದ್ಧ ಕ್ರಮಕ್ಕಾಗಿ ಸರ್ಕಾರದ ಗಮನಕ್ಕೆ ತರಲಾಗಿದೆ. ಈಗಾಗಲೇ ಎಮ್ಮಿಗನೂರು ಗ್ರಾಮದಲ್ಲಿ 30 ಹಾಸಿಗೆ ಆಸ್ಪತ್ರೆ ನಿರ್ಮಾಣಕ್ಕೆ ಪ್ರಾಸ್ತಾವನೆ ಸಲ್ಲಿಸಲಾಗಿದೆ. ಎಪಿಎಂಸಿ ಸೇರಿದಂತೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುವುದು ಎಂದರು.
ಸಹಕಾರ ಸಂಘದ ನಿರ್ದೇಶಕ ರಾಮು ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ನಂತರ ಶಾಸಕ ಗಣೇಶ ಇವರಿಗೆ ಹಾಗೂ ಅಧಿಕಾರಿ ವರ್ಗದವರಿಗೆ ಹಾಗೂ ಗಣ್ಯರಿಗೆ ಸನ್ಮಾನಿಸುವ ಮೂಲಕ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಕಂಪ್ಲಿ ಎಪಿಎಂಸಿ ಅಧ್ಯಕ್ಷ ಹಬೀಬ್ ರೆಹಮಾನ್, ಗ್ರಾಪಂ ಅಧ್ಯಕ್ಷೆ ಶಾರದ ಜಡೆಮೂರ್ತಿ, ಉಪಾಧ್ಯಕ್ಷ ಹೆಚ್.ಗಾದಿಲಿಂಗಪ್ಪ, ಸಹಕಾರ ಸಂಘದ ಅಧ್ಯಕ್ಷ ಕಾಸಿಂಸಾಬ್, ಉಪಾಧ್ಯಕ್ಷ ಸಿದ್ದಮ್ಮನಹಳ್ಳಿ ಅಲ್ಲಾಸಾಬ್, ಬಿಡಿಸಿಸಿ ಬ್ಯಾಂಕ್ ಜಿಲ್ಲಾ ನಿರ್ದೇಶಕ ಪಿ.ಮೂಕಯ್ಯಸ್ವಾಮಿ, ಉಗ್ರಾಣ ನಿಗಮದ ವ್ಯವಸ್ಥಾಪಕಿ ಅನುಪಮಾ, ಗ್ರೇಡರ್ಗಳಾದ ಜ್ಯೋತಿ, ಧನಲಕ್ಷ್ಮೀ, ಮುಖ್ಯಕಾರ್ಯನಿರ್ವಾಹಕ ಇ.ಜಡೇಶರೆಡ್ಡಿ, ಮುಖಂಡರಾದ ಸದಾಶಿವಪ್ಪ, ಬರ್ಗಿ ಮಹೇಶಗೌಡ, ಕಗ್ಗಲ್ ಕಾಸಿಂಸಾಬ್, ಚಂದ್ರಶೇಖರ, ವಡ್ರು ವಿರೇಶ, ಕೇಶವರೆಡ್ಡಿ, ಜಡೆಪ್ಪ, ಕಾಸಿಂಸಾಬ್, ಜೀರ್ ಉಮೇಶ, ರಾಜಾಸಾಬ್, ಮೆಟ್ರಿ ಗಂಗಾಧರ, ಶೇಖರಪ್ಪ ಸೇರಿದಂತೆ ಅನೇಕರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















