
ಬಳ್ಳಾರಿ/ ಕಂಪ್ಲಿ: ಪ್ರಾಚೀನ ಸಂಸ್ಕೃತಿಗಳಲ್ಲಿ ಒಂದಾದ ಹಿಂದೂ-ಮುಸ್ಲಿಂ ಭಾವೈಕ್ಯತೆಯ ಸಂಕೇತವಾದ ಮೊಹರಂ ಹಬ್ಬವು ಪ್ರತಿ ವರ್ಷದಲ್ಲಿ ಆಚರಿಸಿಕೊಂಡು ಬರುವ ವಿಶೇಷ ಹಬ್ಬವಾಗಿದೆ.
ಮೊಹರಂ ಹಬ್ಬ ಬಂತೆಂದರೆ ಸಾಕು ಮಕ್ಕಳಿಂದ ಹಿಡಿದು ದೊಡ್ಡವವರೆಗೂ ಸಂಭ್ರಮವೋ ಸಂಭ್ರಮ. ಅಮವಾಸ್ಯೆ ನಂತರದ ಒಂದೆರಡು ದಿನದಲ್ಲಿ ಚಂದ್ರದ ಸ್ಪರ್ಶವಾದ ದಿನದಂದು ಮಸೀದಿ ಮುಂಭಾಗದಲ್ಲಿ ಗುದ್ದಲಿ ಹಾಕಿ, ನಂತರದ ಮೊಹರಂ ಕೊನೆ ದಿನದವರೆಗೂ ಪೀರಲು ದೇವರ ಮೆರವಣಿಗೆ, ಭಕ್ತಾಧಿಗಳ ಹುಲಿವೇಷ ಸೇರಿದಂತೆ ವಿವಿಧ ತೆರನಾಗಿ ಆಚರಣೆ ಮಾಡಲಾಗುತ್ತದೆ. ಕಂಪ್ಲಿ ಪಟ್ಟಣವನ್ನು ಒಳಗೊಂಡಂತೆ ತಾಲ್ಲೂಕಿನಲ್ಲಿ ಹಿಂದೂ ಮುಸ್ಲಿಂ ಸಮುದಾಯಗಳ ಭಾವೈಕ್ಯತೆಯ ಪ್ರತೀಕವಾದ ಮೋಹರಂ ಹಬ್ಬವು ರಂಗೇರುತ್ತಿದ್ದು, ಹಬ್ಬದಲ್ಲಿ ಅತ್ಯಂತ ಪ್ರಮುಖ ವಾದ್ಯವಾಗಿರುವ ಹಲಗೆಗಳಿಗೆ (ತಪ್ಪಡಿ) ವಿಶೇಷ ಸ್ಥಾನವಿದ್ದು, ಹಲಗೆಗಳನ್ನು ಬಾರಿಸಿ ಪೀರಲು ದೇವರಿಗೆ ಸೇವೆ ಸಲ್ಲಿಸುವ ಸಂಪ್ರದಾಯ ವಿರುವುದರಿಂದ ಪಟ್ಟಣದಲ್ಲಿ ಹಲಗೆಗಳ ಮಾರಾಟ ಹಾಗೂ ಖರೀದಿ ಜೋರಾಗಿ ನಡೆಯುತ್ತಿದೆ.
ಪಟ್ಟಣದಲ್ಲಿ ಬಣ್ಣ ಬಣ್ಣದ ಚಿತ್ರಗಳುಳ್ಳ ಆಕರ್ಷಕ ಪೈಬರ್ ಶೀಟಿನ ಹಲಗೆಗಳು ಅತ್ಯಂತ ಜನಪ್ರಿಯವಾಗಿವೆ. ಹಲಗೆಗಳ ಮೇಲೆ ಪುನೀತ್ ರಾಜಕುಮಾರ್, ದರ್ಶನ್, ಯಶ್ ವಿರಾಟ್ ಕೊಹ್ಲಿ, ಹುಲಿ, ಚಿರತೆ, ಸಿಂಹ, ಜೋಕರ್ ಸೇರಿದಂತೆ ವಿವಿಧ ಚಿತ್ರಗಳು ರಾರಾಜಿಸುತ್ತಿರುವುದರ ಜೊತೆಗೆ ಬೇರೆ ಗಾತ್ರದ ತಪ್ಪಡಿಗಳನ್ನು ಮಾರಾಟ ಮಾಡುತ್ತಿದ್ದಾರೆ.
ಅನಾದಿಕಾಲದಿಂದಲೂ ಈ ಮೋಹರಂ ಹಬ್ಬದಲ್ಲಿ ತಪ್ಪಡಿಗಳಿಗೆ ವಿಶೇಷ ಮಹತ್ವವಿದೆ. ಮೊದಲು ತಪ್ಪಡಿಗಳನ್ನು ಕುರಿ ಸೇರಿದಂತೆ ವಿವಿಧ ಪ್ರಾಣಿಗಳ ಚರ್ಮದಿಂದ ತಯಾರಿಸುತ್ತಿದ್ದರು ಹಾಗೂ ಇವುಗಳನ್ನು ಹಿತವಾದ ಬೆಂಕಿಯಲ್ಲಿ ಶಾಖ ನೀಡುವ ಮೂಲಕ ಅವುಗಳನ್ನು ಉತ್ತಮ ಶಬ್ಧ ಬರುವಂತೆ ಮಾಡುತ್ತಿದ್ದರು. ಆದರೆ ಆಧುನಿಕತೆ ಬೆಳೆದಂತೆಲ್ಲಾ ತಪ್ಪಡಿಗಳ ರೂಪದಲ್ಲಿಯೂ ಬದಲಾವಣೆಯಾಗಿದ್ದು, ಈಗ ಫೈಬರ್ ಶೀಟ್ಗಳಿಂದ ತಪ್ಪಡಿಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಆದರೆ ಇವುಗಳನ್ನು ಮೊದಲಿನಂತೆ ಬೆಂಕಿಯ ಶಾಖಕ್ಕೆ ಹಿಡಿಯುವಂತಿಲ್ಲ.
ಪಟ್ಟಣದ ಪುರಸಭೆ, ಮಾರೆಮ್ಮ ಗುಡಿ ಸರ್ಕಲ್, ನಡುವಲ ಮಸೀದಿ ವೃತ್ತ, ಮುದ್ದಾಪುರ ಅಗಸಿ ಸೇರಿದಂತೆ ವಿವಿಧ ಜನಸಂದಣಿ ಇರುವ ಸ್ಥಳಗಳಲ್ಲಿ ತಪ್ಪಡಿಗಳನ್ನು ಮಾರಾಟ ಮಾಡುತ್ತಿದ್ದಾರೆ. ತಾಲ್ಲೂಕಿನ ರಾಮಸಾಗರ, ಮೆಟ್ರಿ, ದೇವಲಾಪುರ, ನೆರೆ ಜಿಲ್ಲೆಯ ತಾಲ್ಲೂಕುಗಳಾದ ಕನಕಗಿರಿ, ದರೋಜಿ, ಗಾದಿಗನೂರು, ಹೊಸಪೇಟೆ, ಕಾರಟಗಿ, ಮಸ್ಕಿ ಮತ್ತು ಇತರೆಡೆಗಳಿಂದ ಆಗಮಿಸಿ ಪೀರಲ ದೇವರು ಭಕ್ತರು ತಪ್ಪಡಿಗಳನ್ನು ಖರೀದಿಸುತ್ತಿದ್ದಾರೆ.
ತಪ್ಪಡಿಗಳಿಗೆ ಅಗತ್ಯವಾದ ಬಣ್ಣ, ಬಣ್ಣದ ಫೈಬರ್ ಶೀಟ್ಗಳನ್ನು ಹುಬ್ಬಳ್ಳಿ ಹಾಗೂ ಗಜೇಂದ್ರಗಡದಿಂದ ಕಬ್ಬಿಣದ ಕಟ್ಟುಗಳನ್ನು ತರಿಸಿ ಶೀಟ್ಗಳನ್ನು ಬಿಗಿದು ತಪ್ಪಡಿಗಳನ್ನು ತಯಾರಿಸಲಾಗುತ್ತದೆ ಎಂದು ಪಟ್ಟಣದಲ್ಲಿ ತಪ್ಪಡಿಗಳನ್ನು ಮಾರಾಟ ಮಾಡುವ ಜಹಿರುದ್ದೀನ್, ಹುಲುಗಪ್ಪ, ಕೊರವರ ರಾಮು ಹಾಗೂ ಪುರುಷೋತ್ತಮ ತಿಳಿಸಿದರಲ್ಲದೆ, ಈ ವರ್ಷ ಮೊಹರಂ ಹಬ್ಬಕ್ಕೆ ತಪ್ಪಡಿಗಳ ಮಾರಾಟ ಜೋರಾಗಿ ನಡೆಯುತ್ತಿದೆ ಎಂದು ತಿಳಿಸಿದರು.
ವಿಶೇಷ ವರದಿ : ಜಿಲಾನಸಾಬ್ ಬಡಿಗೇರ



















