
ಬಳ್ಳಾರಿ / ಕಂಪ್ಲಿ : ಗುರುವಿನ ಮಾರ್ಗದರ್ಶದಲ್ಲಿ ನಡೆದರೆ ಪ್ರತಿಯೊಬ್ಬರ ಭವಿಷ್ಯ ಉಜ್ವಲವಾಗಿರುತ್ತದೆ ಎಂದು ಎಮ್ಮಿಗನೂರು ಹಂಪಿ ಸಾವಿರ ದೇವರ ಮಠದ ಶ್ರೀ ವಾಮದೇವ ಮಹಾಂತ ಶಿವಾಚಾರ್ಯ ಮಹಾಸ್ವಾಮಿ ಹೇಳಿದರು. ತಾಲೂಕಿನ ಎಮ್ಮಿಗನೂರು ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದ ಗುರು ಪೌರ್ಣಿಮದ ವಿಶೇಷ ಕಾರ್ಯಕ್ರಮದಲ್ಲಿ ಭಕ್ತರಿಂದ ತುಲಾಭಾರ ಸ್ವೀಕರಿಸಿ ಮಾತನಾಡಿ, ಮಠ, ಮಂದಿರಗಳು ಭಕ್ತರಲ್ಲಿ ಧಾರ್ಮಿಕ ಮತ್ತು ಸಂಸ್ಕೃತಿಕ ಪರಂಪರೆಗಳ ನೆಲೆಗಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿವೆ. ಮಕ್ಕಳಲ್ಲಿ ಜ್ಞಾನದ ಬುತ್ತಿ ತುಂಬುವ ಜೊತೆಗೆ ದೇಶದ ಸಂಸ್ಕೃತಿ, ಸಂಸ್ಕಾರಗಳನ್ನು ಬೆಳೆಸುವ ಕೆಲಸವಾಗಬೇಕು ಎಂದರು. ನಂತರ ಮಾಜಿ ಸೈನಿಕ ಎಮ್ಮಿಗನೂರು ಶೇಕ್ಸಾಬ್ ಮಾತನಾಡಿ, ದೇಶಾಭಿಮಾನವನ್ನು ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕು. ಮಠ, ಮಂದಿರಗಳಿಂದ ದೇಶದ ಸಂಸ್ಕೃತಿ, ಸಂಸ್ಕಾರ ಉಳಿಯಲು ಸಾಧ್ಯವಾಗಿದೆ ಎಂದರು. ವರಸದ್ಯೋಜಾತ ಶಿವಾಚಾರ್ಯ ಮಹಾಸ್ವಾಮಿ ಇವರು ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿದ್ದರು. ಸೇವಾರ್ಥಿಗಳಾದ ಯಲ್ಲಾಪುರ ವಿರೇಶಪ್ಪ, ಚಾನಾಳ್ ರಾಮಣ್ಣ, ಚನ್ನಬಸವಗೌಡ, ನಾಗಭೂಷಣಗೌಡ, ಶಿವರಾಮಪ್ಪ, ದೊಡ್ಡ ಕರಿಯಪ್ಪ, ತಿಮ್ಮಪ್ಪ, ದಿ.ಓಬಳೇಶ ಧರ್ಮಪತ್ನಿ ರುಕ್ಕಮ್ಮ ಇವರು ವಾಮದೇವ ಮಹಾಂತ ಶಿವಾಚಾರ್ಯ ಮಹಾಸ್ವಾಮಿ ಇವರಿಗೆ ತುಲಾಭಾರ ಸೇವೆ ಸಲ್ಲಿಸಿದರು. ನಂತರ ಕೃಷಿಕ ಸೇವೆ ತುಲಾಭಾರವನ್ನು ಶಾಲಿಗನೂರು ಶ್ರೀನಿವಾಸಗೆ ಹಾಗೂ ದೇಶಸೇವೆ ತುಲಾಭಾರವನ್ನು ಮಾಜಿ ಸೈನಿಕ ಎಮ್ಮಿಗನೂರು ಶೇಕ್ಸಾಬ್ ಇವರಿಗೆ ಮಾಡಲಾಯಿತು. ಪುರಾಣ ಪ್ರವಚನ ಪ್ರಶಾಂತ ಸಾಗರ ಶಿವಾಚಾರ್ಯ, ಶಿವಪ್ರಕಾಶ ಶಿವಾಚಾರ್ಯ, ಪರಶುರಾಮ ಸಂಗೀತ ಸೇವೆ ಮತ್ತು ಯಲ್ಲಪ್ಪ ಇವರು ತಬಲಕ್ಕೆ ಸಾಥ್ ನೀಡಿದರು.
ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಶ್ರೀಮಠದಿಂದ ಸನ್ಮಾನಿಸಿ ಗೌರವಿಸಿ ಪ್ರೋತ್ಸಾಹಿಸಲಾಯಿತು.
ಈ ಸಂದರ್ಭದಲ್ಲಿ ಚೌಡಯ್ಯದಾನಪುರದ ಚಿತ್ರಶೇಖರ ಶಿವಾಚಾರ್ಯ ಮಹಾಸ್ವಾಮಿ, ವಿಮಲ ರೇಣುಕ ವೀರಮುಕ್ತಿ ಮುನಿ ಶಿವಾಚಾರ್ಯ ಮಹಾಸ್ವಾಮಿ, ಡಾ.ಕರಿಬಸವರಾಜೇಂದ್ರ ಮಹಾಸ್ವಾಮಿ, ಹೆಬ್ಬಾಳ ನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿ, ಮಲ್ಲಿಕಾರ್ಜುನ ಮಹಾಸ್ವಾಮಿ, ಮಾಜಿ ಶಾಸಕ ಸೋಮಶೇಖರರೆಡ್ಡಿ, ಮುಖಂಡರಾದ ಸದಾಶಿವಪ್ಪ ಸೇರಿದಂತೆ ಸ್ಥಳೀಯ ಹಾಗೂ ಸುತ್ತಮುತ್ತಲಿನ ಭಕ್ತರು ಪಾಲ್ಗೊಂಡಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















