ಅನಧಿಕೃತ ಗೂಡಂಗಡಿಗಳ ತೆರವಿಗೆ ಆಗ್ರಹ ವಿಳಂಬದೋರಣೆ ತೋರಿದರೆ ಹೋರಾಟದ ಎಚ್ಚರಿಕೆ.
ಯಾದಗಿರಿ/ ಗುರುಮಠಕಲ್: ಪಟ್ಟಣವು ತಾಲೂಕ ಕೇಂದ್ರವಾಗಿದ್ದು ದಿನೇ ದಿನೇ ವ್ಯಾಪಾರ ವಹಿವಾಟು ಹೆಚ್ಚುತ್ತಲೇ ಇದೆ, ಕಾನೂನು ಬಾಹಿರವಾಗಿ ಅನಧಿಕೃತವಾಗಿ ರಸ್ತೆ ಬದಿಗಳಲ್ಲಿ ಅಂಗಡಿ ಮುಂಗಟ್ಟು ಹಾಕಿಕೊಂಡಿದ್ದು ಕೂಡಲೇ ತೆರವುಗೊಳಿಸಬೇಕು ಎಂದು ಜಯ ಕರ್ನಾಟಕ ಸಂಘಟನೆ ತಾಲೂಕ ಅಧ್ಯಕ್ಷ ನಾಗೇಶ ಗದ್ದಿಗಿ ಆಗ್ರಹಿಸಿದ್ದಾರೆ.
ಈ ಕುರಿತು ಪಟ್ಟಣದ ಆರಕ್ಷಕ ನಿರೀಕ್ಷಕರಿಗೆ ಹಾಗೂ ಪುರಸಭೆ ಕಾರ್ಯಾಲಯದ ಮುಖ್ಯಾಧಿಕಾರಿಗಳಿಗೆ ಪ್ರತ್ಯೇಕ ಮನವಿ ಸಲ್ಲಿಸಿ ಅವರು ಮಾತನಾಡಿದರು.
ಪಟ್ಟಣದ ಮುಖ್ಯ ಬೀದಿಗಳಲ್ಲಿ ಅನಧಿಕೃತವಾಗಿ ನಾಯಿಕೊಡೆಯಂತೆ ತಲೆ ಎತ್ತಿರುವ ಅಂಗಡಿಗಳಿಂದ ಪುರಸಭೆಗೆ ಯಾವುದೇ ಲಾಭವಿಲ್ಲ ಹೊರತಾಗಿ ಸಂಚಾರಕ್ಕೆ ತೊಂದರೆಯಾಗಿದ್ದು ಪಾದಾಚಾರಿಗಳಿಗೆ ಸಮಸ್ಯೆಯುಂಟಾಗಿದೆ, ಅಪಘಾತ ಸಂಭವಿಸಿದ ನಿದರ್ಶನಗಳೂ ಸಹ ಉಂಟು ಎಂದರು.
ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಕಣ್ಣಿದ್ದು ಕುರುಡರಾಗಿದ್ದು ಅನಧಿಕೃತ ಅಂಗಡಿಗಳ ವಿರುದ್ಧ ಕೂಡಲೇ ಕ್ರಮ ತೆಗೆದುಕೊಂಡು ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು, ಅಲ್ಲದೇ ಇಲಾಖೆಯ ಸ್ಥಳವಿದ್ದಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿ ವ್ಯಾಪಾರಸ್ತರಿಗೆ ವ್ಯಾಪಾರ ಮಾಡಲು ಅನುಕೂಲ ಮಾಡಿಕೊಡಬೇಕು ಎಂದರು.
ಅನಧಿಕೃತವಾಗಿ ತಲೆ ಎತ್ತಿರುವ ಅಂಗಡಿಗಳು : ಪಟ್ಟಣದ ಬಸವೇಶ್ವರ ವೃತ್ತದಿಂದ ಯಲ್ಲಮ್ಮ ಗುಡಿ ಮಾರ್ಗದಲ್ಲಿ, ಬಸವೇಶ್ವರ ವೃತ್ತದಿಂದ ಸರಕಾರಿ ಆಸ್ಪತ್ರೆ, ಬಸವೇಶ್ವರ ವೃತ್ತದಿಂದ ಯಾದಗಿರಿ ಮುಖ್ಯ ರಸ್ತೆಯ ಸಾಮ್ರಾಟ್ ವರೆಗೆ ಮತ್ತು ಸಾಮ್ರಾಟ್ ದಿಂದ ಬಸ್ ಸ್ಟಾಂಡ್ ವರೆಗೆ ಅಕ್ರಮವಾಗಿ ಗೂಡಂಗಡಿಗಳ ನಿರ್ಮಾಣ ತೆರವಿಗೆ ಆಗ್ರಹಿಸಲಾಗಿದೆ.
ಗಂಭೀರ ಆರೋಪ: ಪ್ರಬಲ ವ್ಯಕ್ತಿಗಳು ಪ್ರತಿಯೊಂದು ಗೂಡಂಗಡಿಗೆ ಒಂದು ಲಕ್ಷ ರೂಪಾಯಿ ಮುಂಗಡ ಹಣ ಹಾಗೂ ಪ್ರತಿ ತಿಂಗಳು ಮೂರರಿಂದ ನಾಲ್ಕು ಸಾವಿರ ರೂಪಾಯಿಗಳ ಬಾಡಿಗೆ ತೆಗೆದುಕೊಳ್ಳುತ್ತಿದ್ದಾರೆ, ಪಾದಚಾರಿ ಮಾರ್ಗ ಅಕ್ರಮಿಸಿಕೊಂಡು ಕೆಲ ವ್ಯಕ್ತಿಗಳು ಅಂಗಡಿಗಳನ್ನು ನಿರ್ಮಿಸಿ ಅವುಗಳನ್ನು ಬಾಡಿಗೆಗೆ ಕೊಡುತ್ತಿರುವ ಮಾಹಿತಿ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದ್ದೂ ಅಧಿಕಾರಿಗಳು ಮಾತ್ರ ತಮಗೇನೂ ಗೊತ್ತಿಲ್ಲವೆಂಬಂತೆ ಮೌನಕ್ಕೆ ಶರಣಾಗಿದ್ದು ಹಲವು ಅನುಮಾನಗಳಿಗೆ ಎಡೆಮಾಡಿದೆ.
ಸಂಬಂಧ ಪಟ್ಟ ಅಧಿಕಾರಿಗಳು ವಿಳಂಬ ದೊರಣೆ ತೋರಿದರೆ ಸಂಘಟನೆ ವತಿಯಿಂದ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಅವರು ಹೇಳಿದರು. ಜಯ ಕರ್ನಾಟಕ ಸಂಘಟನಾ ಕಾರ್ಯದರ್ಶಿ ಗೋಪಾಲಕೃಷ್ಣ ಮೇಧಾ ಉಪಸ್ಥಿತರಿದ್ದರು.
ವರದಿ: ಜಗದೀಶ್ ಕುಮಾರ್ ಭೂಮಾ



















