ದಾವಣಗೆರೆ: ಬಸವಣ್ಣನವರ ಹೆಸರಿನಲ್ಲಿ ಕೆಲಸ ಮಾಡುತ್ತಿರುವ ಕೆಲವು ಮಠಾಧೀಶರು ಸಮಾಜದಲ್ಲಿ ಕಂದಕ ಸೃಷ್ಟಿಸುತ್ತಿದ್ದಾರೆ. ವೀರಶೈವರೇ ಬೇರೆ, ಲಿಂಗಾಯತರೇ ಬೇರೆ ನಮಗೂ ಅವರಿಗೂ ಯಾವುದೇ ಸಂಬಂಧವಿಲ್ಲ
ಎನ್ನುತ್ತಾ ಭೇದಭಾವ ಹುಟ್ಟು ಹಾಕುತ್ತಿದ್ದಾರೆ ಎಂದು ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ಸೋಮವಾರ ಆರೋಪಿಸಿದರು.
ನಗರದಲ್ಲಿ ನಿನ್ನೆ ಆರಂಭವಾದ ವೀರಶೈವ ಶಿವಾಚಾರ್ಯರ ಎರಡು ದಿನದ ಶೃಂಗಸಭೆಯಲ್ಲಿ ಮಾತನಾಡುತ್ತಾ ರಂಭಾಪುರಿ ಶ್ರೀಗಳು ಬಸವಣ್ಣನವರ ಪ್ರಸಿದ್ಧ ‘ಇವ ನಮ್ಮವ’ ವಚನವನ್ನು ಹೇಳಿ ಸಮಾಜದಲ್ಲಿ ‘ಭೇದಭಾವ’ ಮಾಡುತ್ತಿರುವವರನ್ನು ಖಂಡಿಸಿದರು.
“ ಇನ್ನೊಂದು ವರ್ಗದ ಜನ ಎಂದೂ ರೇಣುಕಾದಿ ಪಂಚಾಚಾರ್ಯರ ಹೆಸರನ್ನು ಹೇಳದೆ ಕೇವಲ ಬಸವಾದಿ ಶರಣರ ಚಿಂತನೆಗಳನ್ನು ಮಾತ್ರ ಹೇಳುತ್ತಾರೆ. ಇದು ಬಹಳ ತಪ್ಪು. ನಮ್ಮ ಶಾಸ್ತ್ರದ, ಬೆಳೆದು ಬಂದ ಪರಂಪರೆಯ ಅರಿವಿಲ್ಲದೆ ನಡೆಯುತ್ತಿರುವ ಘಟನೆಗಳು ಅವರಿಗೆ ಬೆಲೆ ಕೊಡೊ ಅವಶ್ಯಕತೆಯಿಲ್ಲ ಬಸವಾದಿ ಶರಣರ ಸಾಮಾಜಿಕ ಚಿಂತನೆಯನ್ನ ಎಲ್ಲಾ ಪಂಚಾಚಾರ್ಯರು ತಮ್ಮ ಅನೇಕ ಆಶೀರ್ವಚನದಲ್ಲಿ ಹೇಳುತ್ತಾರೆ ” ಎಂದು ಶ್ರೀಗಳು ಹೇಳಿದರು.
“ರೇಣುಕಾದಿ ಆಚಾರ್ಯರು ಕಟ್ಟಿದ ವೀರಶೈವವನ್ನು ದೊಡ್ಡದಾಗಿ ಬೆಳೆಸುವಂತಹ ಕಾರ್ಯವನ್ನು ಬಸವಣ್ಣನವರು ಮಾಡಿದರು. ವೀರಶೈವ ಸಿದ್ದಾಂತ, ಆಚರಣೆಗಳನ್ನು 12ನೇ ಶತಮಾನದ ಬಸವಾದಿ ಶರಣರು ಉಳಿಸಿ ಬೆಳೆಸಿದರೆ ಹೊರತು ಹೊಸದಾದ ಯಾವುದೇ ಪಂಥವನ್ನಾಗಲಿ ಪಂಗಡವಾಗಲಿ ಮಾಡಲಿಲ್ಲ. ಈ ಸತ್ಯವನ್ನು ಎಲ್ಲರೂ ಅರಿಯಬೇಕು ” ಎಂದು ಹೇಳಿದರು.
ಶ್ರೀಗಳಿಗಿಂತ ಮುಂಚೆ ಉಜ್ಜಿನಿಯ ಸಿದ್ಧಲಿಂಗ ರಾಜದೇಶಿಕೇಂದ್ರ ಸ್ವಾಮೀಜಿ, ಶ್ರೀಶೈಲ ಮಠದ ಚನ್ನಸಿದ್ಧರಾಮ ಪಂಡಿತಾರಾಧ್ಯ ಸ್ವಾಮೀಜಿ, ಕಾಶಿ ಪೀಠದ ಮಲ್ಲಿಕಾರ್ಜುನ ವಿಶ್ವಾರಾಧ್ಯ ಸ್ವಾಮೀಜಿ, ಕೇದಾರ ಪೀಠದ ಭೀಮಾಶಂಕರ ಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತಾಡಿದರು.
ಎಲ್ಲಾ ಶ್ರೀಗಳು ಸಮುದಾಯದ ಸಂಖ್ಯೆ ಕ್ಷೀಣಿಸುತ್ತಿರುವುದರ ಬಗ್ಗೆ ಆತಂಕ ವ್ಯಕ್ತಪಡಿಸಿ ಮುಂಬರುವ ಜಾತಿಗಣತಿಯಲ್ಲಿ ಎಲ್ಲಾರೂ ವೀರಶೈವ ಲಿಂಗಾಯತರೆಂದು ಬರೆಸಲು ಕರೆ ಕೊಟ್ಟರು.
ಅಖಿಲ ಭಾರತ ವೀರಶೈವ ಮಹಾಸಭಾದ ಬೆಂಬಲದಿಂದ ನಡೆದ ಸಮಾವೇಶದಲ್ಲಿ ಯಡಿಯೂರಪ್ಪ, ಶಾಮನೂರು ಶಿವಶಂಕರಪ್ಪ, ಎಸ್ ಮಲ್ಲಿಕಾರ್ಜುನ, ಈಶ್ವರ ಖಂಡ್ರೆ, ವಿಜಯೇಂದ್ರ, ಶಂಕರ ಬಿದರಿ ಮುಂತಾದ ಧುರೀಣರು ಭಾಗವಹಿಸಿದ್ದರು.
. ಕರುನಾಡ ಕಂದ



















