ಬಳ್ಳಾರಿ / ಕಂಪ್ಲಿ : ಎಮ್ಮಿಗನೂರಿನಲ್ಲಿರುವ ರಸಗೊಬ್ಬರ ಟ್ರೇಡರ್ಸ್ ಮಾಲೀಕರು ರೈತರಿಗೆ ಎಂಆರ್ಪಿ ದರಕ್ಕಿಂತ ಹೆಚ್ಚಿನ ದರಕ್ಕೆ ಗೊಬ್ಬರ ಮಾರಾಟ ಮಾಡುವ ಮೂಲಕ ರೈತರ ಹೊಟ್ಟೆ ಮೇಲೆ ಬರೆ ಎಳೆಯುವಂತ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ಇಲ್ಲಿನ ಮಾರಾಟ ಅಂಗಡಿಗಳ ಪರವಾನಿಗೆ ರದ್ದು ಮಾಡಿ, ಸೊಸೈಟಿ ಮೂಲಕ ಸರ್ಕಾರ ರೈತರಿಗೆ ರಸಗೊಬ್ಬರ ನೇರವಾಗಿ ನೀಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕು ಅಧ್ಯಕ್ಷ ವಡ್ರು ವಿರೇಶ ಆಗ್ರಹಿಸಿದರು.
ತಾಲೂಕಿನ ಎಮ್ಮಿಗನೂರು ಗ್ರಾಮದ ತೇರಿನ ಮನೆ ಬಳಿಯಲ್ಲಿ ಭಾನುವಾರ ರೈತರು ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿ, ಕೇಂದ್ರ ಸರ್ಕಾರ ಗೊಬ್ಬರ ಬೆಲೆ ಗಗನಕ್ಕೇರಿಸಿದೆ. ಮತ್ತು ಕರ್ನಾಟಕಕ್ಕೆ ಪೂರೈಕೆ ಮಾಡಬೇಕಾದ ಅಗತ್ಯವಿರುವಷ್ಟು ಗೊಬ್ಬರ ನೀಡದೇ ರೈತರಿಗೆ ಮೋಸ ಮಾಡುವಂತಹ ಕೆಲಸ ಮಾಡುತ್ತಿದೆ. ಸಮರ್ಪಕವಾಗಿ ಗೊಬ್ಬರ ಪೂರೈಕೆಯಾಗುತ್ತಿಲ್ಲ. ಇದರಿಂದ ರೈತರ ಬೆಳೆಗಳು ಕುಂಠಿತವಾಗುತ್ತಿವೆ. ಇಲ್ಲಿನ ರಸಗೊಬ್ಬರ ಮಾರಾಟ ಅಂಗಡಿಯವರು ಸರ್ಕಾರದ ದರಕ್ಕಿಂತ ಹೆಚ್ಚಿನ ದರದಲ್ಲಿ ರೈತರಿಗೆ ಗೊಬ್ಬರ ಮಾರಾಟ ಮಾಡುತ್ತಿದ್ದಾರೆ. ಇದರಿಂದ ರೈತರು ಗೊಬ್ಬರ ತೆಗೆದುಕೊಳ್ಳುವುದು ಕಷ್ಟಕರವಾಗಿದೆ. ಇಲ್ಲಿನ ಅಂಗಡಿಯವರು ಹೆಚ್ಚಿನ ದರದಲ್ಲಿ ಗೊಬ್ಬರ ಮಾರಾಟ ಮಾಡುತ್ತಿರುವ ಸಂಬಂಧ ಸಹಾಯಕ ನಿರ್ದೇಶಕರ ಗಮನಕ್ಕೆ ತಂದರೆ, ಇದು ಪೆಟ್ರೋಲ್, ಡೀಸಲ್ನಂತೆ ದರ ಏರಿಕೆಯಾಗುತ್ತಿದೆ ಎಂದು ರೈತರಿಗೆ ಉಡಾಫೆ ಉತ್ತರ ನೀಡುತ್ತಿದ್ದಾರೆ. ಕಂಪ್ಲಿ ಮತ್ತು ಕುರುಗೋಡಿನಲ್ಲಿ ಎಂಆರ್ಪಿ ದರದಲ್ಲಿ ಗೊಬ್ಬರ ನೀಡುತ್ತಿದ್ದು, ಸ್ಥಳಿಯ ಅಂಗಡಿಯವರು ಹೆಚ್ಚಿನ ದರದಲ್ಲಿ ನೀಡುತ್ತಿರುವುದು ಯಾವ ನ್ಯಾಯ ಅಧಿಕಾರಿಗಳೇ. ಅಧಿಕಾರಿಗಳು ಮೂರ್ಖತನದ ಸಮಜಾಯಿಷಿ ನೀಡುತ್ತಿದ್ದಾರೆ. ಖಾಲಿ ಚೆಕ್, ಬಾಂಡ್ ಸೇರಿದಂತೆ ಆಸ್ತಿ ಅಡಮಾನ ಇಟ್ಟು, ಗೊಬ್ಬರ ತೆಗೆದುಕೊಳ್ಳಿ ಎಂದು ರೈತರಿಗೆ ರಸಗೊಬ್ಬರ ಅಂಗಡಿಯವರು ದಮ್ಕಿ ಹಾಕುತ್ತಿದ್ದಾರೆ. ಆದ್ದರಿಂದ ಗ್ರಾಮದಲ್ಲಿರುವ ಗೊಬ್ಬರ ಅಂಗಡಿಗಳ ಪರವಾನಿಗೆ ರದ್ದು ಮಾಡಿ, ಸೊಸೈಟಿ ಮೂಲಕ ಗೊಬ್ಬರ ನೀಡಿದರೆ ರೈತರಿಗೆ ಅನುಕೂಲವಾಗುತ್ತದೆ. ಕೆಲ ಟ್ರೇಡರ್ಸ್ನವರು ಶಾಸಕರ ಹೆಸರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಕೂಡಲೇ ಮೇಲಿನ ಅಧಿಕಾರಿಗಳು ಗಮನ ಹರಿಸಿ ಇಂತಹ ಟ್ರೇಡರ್ಸ್ಗಳ ವಿರುದ್ಧ ಕಠಿಣ ಕ್ರಮಗೊಳ್ಳಬೇಕು. ರೈತರ ಹಿತ ಕಾಪಾಡಬೇಕು ಇಲ್ಲವಾದಲ್ಲಿ ಮುಂದಿನ ದಿನದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಅಡಿವೆಯ್ಯಸ್ವಾಮಿ, ಕಾಗಿ ಈರಣ್ಣ, ಟಿ.ಜಡೆಪ್ಪ, ಕಾಸಿಂಸಾಬ್, ಬಿ.ಜಡೆಪ್ಪ, ಶಿವರುದ್ರಪ್ಪ, ಲಿಂಗಪ್ಪ ಸೇರಿದಂತೆ ರೈತರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















