ಬಳ್ಳಾರಿ / ಕಂಪ್ಲಿ : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ವಿವಿಧ ಸರಕಾರಿ ಸಾರಿಗೆ ಸಂಸ್ಥೆಗಳ ನೌಕರರು ಮುಷ್ಕರ ಆರಂಭಿಸಿದ ಮೊದಲ ದಿನವೇ ಸಾರಿಗೆ ಸಂಚಾರ ಇಲ್ಲದ ಪರಿಣಾಮ ಪ್ರಯಾಣಿಕರು ಕಂಪ್ಲಿಯಲ್ಲಿ ಖಾಸಗಿ ವಾಹನಗಳಿಗೆ ಅಧಿಕ ಹಣ ನೀಡಿ ಸಂಚಾರ ಮಾಡುವ ಅನಿವಾರ್ಯತೆ ಉಂಟಾಗಿತ್ತು.
ಮುಷ್ಕರ ಹಮ್ಮಿಕೊಂಡ ಹಿನ್ನಲೆ ಸಾರಿಗೆ ಬಸ್ಗಳು ರಸ್ತೆಗೆ ಇಳಿಯದೇ, ಇಲ್ಲಿನ ಹೊಸ ಬಸ್ ನಿಲ್ದಾಣದಲ್ಲಿ ಒಂದೆಡೆ ಸೇರಿದ್ದವು. ಇದರಿಂದ ಪ್ರಯಾಣಿಕರಿಗೆ ಮುಷ್ಕರ ಬಿಸಿ ತಟ್ಟಿರುವುದು ಕಂಡು ಬಂತು. ರಸ್ತೆಗೆ ಬಸ್ ಇಳಿಸಿದರೆ, ಯಾರಾದರೂ ಕಲ್ಲು ಹೊಡೆದರೆ, ಅದರ ಜವಾಬ್ದಾರಿ ನಮ್ಮ ಮೇಲೆ ಬೀಳುತ್ತದೆ ಎಂದು ಸಾರಿಗೆಯ ಚಾಲಕ ಮತ್ತು ನಿರ್ವಾಹಕರು ಬಸ್ಗಳನ್ನು ಇಲ್ಲಿನ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದರು.
ಕಂಪ್ಲಿ ಮಾರ್ಗ ಮಧ್ಯದಿಂದ ಬಳ್ಳಾರಿ, ಹೊಸಪೇಟೆ, ಗಂಗಾವತಿ ಸೇರಿದಂತೆ ವಿವಿಧ ನಗರ, ಪಟ್ಟಣ ಮತ್ತು ಗ್ರಾಮಗಳಿಗೆ ಸಂಚರಿಸುವ ಬಸ್ಗಳ ಓಡಾಟ ಸ್ಥಗಿತಗೊಂಡಿತ್ತು. ಇದರಿಂದ ಸಾಕಷ್ಟು ಪ್ರಯಾಣಿಕರು ಊರುಗಳಿಗೆ ತೆರಳಲು ಪರದಾಡಿದರು. ಇಲ್ಲಿ ನಿಂತಿರುವ ಬಸ್ಗಳನ್ನು ನೋಡಿ ಆಯಾ ಊರುಗಳತ್ತ ತೆರಳಬಹುದು ಎನ್ನುಕೊಂಡಿದ್ದರು. ಆದರೆ, ಇಲ್ಲಿನ ಬಸ್ಗಳು ಬಸ್ ನಿಲ್ದಾಣ ಬಿಟ್ಟು ರಸ್ತೆಗೆ ಇಳಿಯುವುದಿಲ್ಲ ಎಂಬುದನ್ನು ಅರಿತ ಪ್ರಯಾಣಿಕರು ನಂತರ ಖಾಸಗಿ ಬಸ್ ಹಾಗೂ ವಾಹನಗಳ ಮೂಲಕ ಊರುಗಳತ್ತ ಮುಖ ಮಾಡಿದರು.
ಪ್ರಯಾಣಿಕರ ಓಡಾಟಕ್ಕೆ ತೊಂದರೆಯಾಗದಂತೆ ಬಳ್ಳಾರಿ ಜಿಲ್ಲಾಡಳಿತವು ಖಾಸಗಿ ಬಸ್ಗಳ ಮೂಲಕ ಜನತೆಗೆ ಅನುಕೂಲ ಮಾಡಿಕೊಟ್ಟಿತ್ತಾದರೂ, ಅಲ್ಲೊಂದು ಇಲ್ಲೊಂದು ಖಾಸಗಿ ಬಸ್ಗಳ ಓಡಾಟವನ್ನು ತಿಳಿದ ಪ್ರಯಾಣಿಕರು ಬಸ್ಗಳನ್ನು ಕಾದು ಕುಳಿತುಕೊಳ್ಳುವ ಬದಲು ಖಾಸಗಿ ವಾಹನಗಳ ಮೂಲಕ ಅಧಿಕ ಹಣ ನೀಡಿ ಮನೆಗಳಿಗೆ ಸೇರಿದರು.
ಖಾಸಗಿ ವಾಹನಗಳ ದರ್ಬಾರ್ :
ಸಾರಿಗೆ ನೌಕರರ ಮುಷ್ಕರ ಹಿನ್ನಲೆ ಬಸ್ಗಳ ಸಂಚಾರ ಸ್ಥಗಿತಗೊಂಡಿತ್ತು. ಇದರಿಂದ ಖಾಸಗಿ ವಾಹನಗಳಿಗೆ ಎಲ್ಲಿಲ್ಲದ ಬೇಡಿಕೆ ಬಂದಿರುವುದು ಕಂಡು ಬಂತು. ಬಸ್ ಇಲ್ಲದ ಪರಿಣಾಮ ಜನರು ಅಧಿಕ ದರದಲ್ಲಿ ಬಸ್, ಆಟೋ, ಕ್ರಶರ್ ಸೇರಿದಂತೆ ಖಾಸಗಿ ವಾಹನಗಳ ಮೂಲಕ ಪ್ರಯಾಣಿಸಬೇಕಾದ ಅನಿವಾರ್ಯತೆ ಉಂಟಾಗಿತ್ತು. ಖಾಸಗಿ ವಾಹನಗಳತ್ತ ಜನರು ಮುಖ ಮಾಡಿದ ಹಿನ್ನಲೆ ಡಿಮ್ಯಾಂಡ್ ಬಂದಿತ್ತು. ಒಟ್ಟಿನಲ್ಲಿ ಸಾರಿಗೆ ಮುಷ್ಕರ ಕಂಪ್ಲಿ ತಾಲೂಕಿನಲ್ಲಿಯೂ ಸಹ ಬಿಸಿ ತಟ್ಟಿರುವುದು ಕಂಡು ಬಂತು.
ವರದಿ : ಜಿಲಾನಸಾಬ್ ಬಡಿಗೇರ್



















