ಬಳ್ಳಾರಿ / ಕಂಪ್ಲಿ: ಶ್ರಾವಣಮಾಸದ ಪ್ರಯುಕ್ತ ಗಂಗಾಮತ ಸಮಾಜದಿಂದ ಕಂಪ್ಲಿ-ಕೋಟೆಯ ಆರಾಧ್ಯ ದೇವತೆಯರಾದ ಶ್ರೀ ಹುಲಿಗೆಮ್ಮದೇವಿ ಮತ್ತು ಶ್ರೀ ದ್ಯಾವಮ್ಮ ದೇವಿಯ ಗಂಗೆಸ್ಥಳ ಮೆರವಣಿಗೆ ಸಡಗರ ಸಂಭ್ರಮದಿಂದ ಮಂಗಳವಾರ ಜರುಗಿತು.
ಇಲ್ಲಿನ ತುಂಗಭದ್ರ ನದಿ ತಟದಬಳಿ ಗಂಗೆಪೂಜೆ ನೆರವೇರಿಸಿದ ನಂತರ ಆರಂಭಗೊಂಡ ಗಂಗೆಸ್ಥಳ ಮೆರವಣಿಗೆ ಸಕಲ ಮಂಗಳವಾದ್ಯದೊಂದಿಗೆ ನಡೆಯಿತು. ಕೋಟೆ ಪ್ರದೇಶದ ಪ್ರಮುಖ ರಸ್ತೆಗಳ ಮೂಲಕ ಮೆರವಣಿಗೆ ಸಂಚರಿಸಿ, ದೇವಸ್ಥಾನದ ಸನ್ನಿಧಾನದಲ್ಲಿ ಮುಕ್ತಾಯಗೊಂಡಿತು. ಮೆರವಣಿಗೆಯಲ್ಲಿ ಮಹಿಳೆಯರ ಕುಂಭ, ಕಳಸ, ಭಜನೆ, ಡೊಳ್ಳು ಕುಣಿತ, ಮಂಗಳವಾಧ್ಯ ಸೇರಿದಂತೆ ವಿವಿಧ ಕಲಾ ಪ್ರಕಾರಗಳು ಮೆರಗು ನೀಡಿದವು. ಭಕ್ತರು ಕಾಯಿ, ಕರ್ಪೂರ, ನೈವೇದ್ಯ ಅರ್ಪಿಸಿ, ದೇವರ ಕೃಪೆಗೆ ಪಾತ್ರರಾದರು. ನಂತರ ಅನ್ನಸಂತರ್ಪಣೆ ಜರುಗಿತು.
ನಂತರ ಕಂಪ್ಲಿ-ಕೋಟೆಯ ಗಂಗಾಮತ ಸಮಾಜದ ಅಧ್ಯಕ್ಷ ಕಟ್ಟೆ ದುರುಗಪ್ಪ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವು ಕೂಡ ಶ್ರಾವಣಮಾಸದ ನಿಮಿತ್ಯ ಹುಲಿಗೆಮ್ಮ ಮತ್ತು ದ್ಯಾವಮ್ಮ ದೇವಿಯ ಗಂಗೆಸ್ಥಳ ಮೆರವಣಿಗೆ ಮಾಡಲಾಯಿತು. ನಾಡಿನಲ್ಲಿರುವ ಸಂಸ್ಕೃತಿ, ಸಂಪ್ರದಾಯಗಳನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಅದರಂತೆ ಹಲವು ವರ್ಷಗಳಿಂದ ಮಾಡಿಕೊಂಡು ಬಂದಿರುವ ಗಂಗೆಸ್ಥಳ ಕಾರ್ಯಕ್ರಮವನ್ನು ಎಲ್ಲಾ ಸಮಾಜದ ಬಾಂಧವರ ಸಹಕಾರದಿಂದ ಅಚ್ಚುಕಟ್ಟು ಮಾಡಲಾಗಿದೆ. ಇಂತಹ ಧಾರ್ಮಿಕ ಕಾರ್ಯಕ್ರಮಗಳಿಂದಾಗಿ ನಾಡಿನಲ್ಲಿ ಸಮೃದ್ಧ ಮಳೆ, ಬೆಳೆಯಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಗಂಗಾಮತ ಸಮಾಜದ ನಗರ ಘಟಕ ಅಧ್ಯಕ್ಷ ಎಲೆಗಾರ ನಾಗರಾಜ, ಮುಖಂಡರಾದ ಕಟ್ಟೆ ದುರುಗಪ್ಪ, ಕಂಬತ್ ಕೃಷ್ಣಪ್ಪ, ಕೋಟೆಮೇಗಳ ನಾಗರಾಜ, ಸೆರೆಗಾರ ನಾಗರಾಜ, ಕಂಬತ್ ರಮೇಶ, ಅದ್ದಪ್ಪ ತಿಮ್ಮಪ್ಪ, ಕಂಬತ್ ಧನ್ರಾಜ್, ಮಣ್ಣೂರು ಶಿವಪ್ಪ, ಗಂಜಿ ಹನುಮಂತ, ಅಸಡ್ಡಿ ಪಕ್ಕೀರಪ್ಪ, ಕಂಬತ್ ಸಿದ್ದಪ್ಪ, ಕಟ್ಟೆ ವಿರೇಶ, ಅದ್ದಪ್ಪ ಪರಸಪ್ಪ, ಕಟ್ಟೆ ಸೂಗೂರು ಈರಣ್ಣ, ಬಾಗಲಿ ಮಂಜುನಾಥ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















