
ಕೆ ಆರ್ ಎಸ್ ಪಕ್ಷದ ಆರನೇ ವರ್ಷದ ಸಂಸ್ಥಾಪನಾ ದಿನಾಚರಣೆ ಮತ್ತು ಬೃಹತ್ ಸಮಾವೇಶ ಸರ್ಕಾರ ನಾಡು ಮಂಡ್ಯದ ಸಿಲ್ವರ್ ಜುಬಿಲಿ ಆವರಣದಲ್ಲಿ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೆಆರ್ಎಸ್ ಪಕ್ಷದ ನೂತನ ರಾಜ್ಯ ಗೌರವಾಧ್ಯಕ್ಷರಾದ ರವಿ ಕೃಷ್ಣಾರೆಡ್ಡಿ ಅವರು ರಾಜ್ಯದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ಲೂಟಿಗಳಂತಹ ಅಕ್ರಮಗಳ ವಿರುದ್ಧ ಕೆ. ಆರ್. ಎಸ್. ಪಕ್ಷ ದಿನ ನಿತ್ಯ ಹೋರಾಟವನ್ನು ಮಾಡುತ್ತಿದ್ದು ರಾಜ್ಯದ ಲಕ್ಷಾಂತರ ಮಂದಿಯನ್ನು ಸೆಳೆಯುತ್ತಿದೆ. ರಾಜ್ಯದಲ್ಲಿ ಭ್ರಷ್ಟಾಚಾರ ಲೂಟಿ ಅನ್ಯಾಯ ಅಕ್ರಮ ಮೋಸಗಳು ಎಗ್ಗಿಲ್ಲದೆ ನಡೆಯುತ್ತಿದ್ದು ಇವುಗಳ ವಿರುದ್ಧ ಹೋರಾಟ ಮಾಡುವ ಯಾವ ರಾಜಕೀಯ ಪಕ್ಷವು ಮುಂಚೂಣಿಯಲ್ಲಿಲ್ಲ ಆದರೆ ಕೆಆರ್ಎಸ್ ಪಕ್ಷವು ಭ್ರಷ್ಟಾಚಾರದ ವಿರುದ್ಧ ಹೋರಾಟಕ್ಕೆ ಇಳಿದು ಇಂದು ಆರು ವರ್ಷಗಳು ಕಳೆದಿದೆ, ಭ್ರಷ್ಟಾಚಾರದ ಪ್ರಕಾರಗಳನ್ನು ಪತ್ತೆ ಹಚ್ಚಿ ಸಮಾಜಕ್ಕೆ ತಲುಪಿಸಿ ಭ್ರಷ್ಟ ಅಧಿಕಾರಿಗಳನ್ನು ಲೂಟಿಕೋರರನ್ನು ವಂಶಪಾರಂಪರ್ಯದ ರಾಜಕಾರಣಿಗಳನ್ನು ಮನೆಗೆ ಕಳಿಸುವ ಕೆಲಸ ಕೆ. ಆರ್. ಎಸ್ ಪಕ್ಷವು ಮಾಡುತ್ತಿದೆ ಎಂದು ತಿಳಿಸಿದರು.
ಕೆ ಆರ್ ಎಸ್ ಪಕ್ಷದ ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ದೀಪಕ್ ಸಿಎನ್ ರವರು ಪಕ್ಷದ ಜವಾಬ್ದಾರಿ ಮತ್ತು ನಾಳಿನ ಜನರ ಏಳಿಗೆಗಾಗಿ ಶ್ರಮವಹಿಸಿ ದುಡಿಯುತ್ತೇನೆ. ಕೆಆರ್ಎಸ್ ಪಕ್ಷವು ಮುಂದಿನ ಎಲ್ಲಾ ಹಂತಗಳ ಚುನಾವಣೆಗಳಲ್ಲಿ ಸ್ಪರ್ಧಿಸಿ ರಾಜ್ಯದ ಬಡವರ, ಹಿಂದುಳಿದವರ , ಕೃಷಿಕರ ,ಮಹಿಳೆಯರ ,ಯುವಕರ, ರೈತರ ಬೆನ್ನೆಲುಬಾಗಿ ಕೆಲಸ ಮಾಡಲಿದೆ ಎಂದು ತಿಳಿಸಿದರು. ನೂತನ ಕಾರ್ಯಾಧ್ಯಕ್ಷರಾಗಿ ನೇಮಕವಾದ ರಘು ಜಾಣಗೆರೆ, ನೂತನ ರಾಜ್ಯ ಪ್ರಧಾನ ಕಾರ್ಯದರ್ಶಿ ರಘುಪತಿ ಭಟ್, ನೂತನ ಜಂಟಿ ಕಾರ್ಯದರ್ಶಿ, ಜೀವನ್, ಉಪಾಧ್ಯಕ್ಷರಾದ ಸೋಮ ಸುಂದರ, ಮಂಜುನಾಥ್ ಸೇರಿದಂತೆ ರಾಜ್ಯ ಸಮಿತಿಯ ಎಲ್ಲಾ ಪದಾಧಿಕಾರಿಗಳು ವಿವಿಧ ಜಿಲ್ಲೆಗಳಿಂದ ಆಗಮಿಸಿದ ಪಕ್ಷದ ಸಾವಿರಾರು ಸೈನಿಕರು ಸೇರಿದ್ದರು.
- ಕರುನಾಡ ಕಂದ



















