ಯಾದಗಿರಿ/ಗುರುಮಠಕಲ್: ಇತ್ತೀಚೆಗೆ ಬಿಪಿಎಲ್ ಪಡಿತರ ಚೀಟಿಗಳ ಕುರಿತು ಆಹಾರ ಸಚಿವರ ಸೂಚನೆಯ ಮೇರೆಗೆ ಪರಿಶೀಲನೆ ಮಾಡಿ ಕ್ರಮ ತೆಗೆದು ಕೊಳ್ಳುತ್ತೇವೆ ಎಂದು ಗುರುಮಠಕಲ್ ತಾಲೂಕ ಆಹಾರ ನಿರೀಕ್ಷಕರಾದ ಸಾಯಿಬಣ್ಣ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿ ಗುರುಮಠಕಲ್ ತಾಲೂಕಿನಲ್ಲಿರುವ 3288 ಅನರ್ಹ ಬಿಪಿಎಲ್ ಕಾರ್ಡ್ ಬಳಸುತ್ತಿರುವವರ ಪೈಕಿ ಈಗಾಗಲೇ 330 ಬಿಪಿಎಲ್ ಕಾರ್ಡ್ಗಳನ್ನು ಪರಿಷ್ಕರಿಸಿ ಶೀಘ್ರದಲ್ಲೇ ರದ್ದುಗೊಳಿಸುವ ಪ್ರಕ್ರಿಯೆ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.
ಅಂಕಿ ಅಂಶಗಳ ಪ್ರಕಾರ ತಾಲೂಕಿನಲ್ಲಿ 1998 ಎಪಿಎಲ್ ಪಡಿತರ ಚೀಟಿದಾರರು, 30631 ಬಿಪಿಎಲ್ ಪಡಿತರ ಚೀಟಿದಾರರು ಮತ್ತು 3948 ಅಂತ್ಯೋದಯ ಪಡಿತರ ಚೀಟಿದಾರರು ಇದ್ದು, ಈ ಕೆಳಕಂಡ ಮಾನದಂಡಗಳ ಪ್ರಕಾರ ಅವುಗಳ ವಿಂಗಡಿಸಿ ಪರಿಶೀಲನೆ ಮಾಡಿ ಅವುಗಳ ಕ್ರಮ ತೆಗೆದುಕೊಳ್ಳಲಾಗುವದು ಎಂದು ತಿಳಿಸಿದ್ದಾರೆ.
- ವಾರ್ಷಿಕ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಹೆಚ್ಚಿನ ಆದಾಯ ಉಳ್ಳವರು 554.
- 7.5ಎಕರೆ ಜಮೀನು ಹೊಂದಿರುವವರು 283.
- ವಾರ್ಷಿಕ 25ಲಕ್ಷ ವಹಿವಾಟು ಮಾಡುವವರು 6.
- ಅಂತರರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುತ್ತಿರುವವರು 38.
- ಕರ್ನಾಟಕ ಸೇರಿದಂತೆ ಇತರೆ ರಾಜ್ಯದಲ್ಲಿ ಪಡಿತರ ಚೀಟಿ ಹೊಂದಿರುವವರು 1027.
- ರಾಜ್ಯದಲ್ಲಿನ ಒಂದಕ್ಕಿಂತ ಹೆಚ್ಚು ಪಡಿತರ ಚೀಟಿಯಲ್ಲಿ ಹೆಸರಿರುವವರು 2.
- ಒಂದು ವರ್ಷಕ್ಕಿಂತ ಮೇಲ್ಪಟ್ಟು ಪಡಿತರ ಪಡೆಯದಿರುವವರು 12.
- 6 ರಿಂದ 12 ತಿಂಗಳಿನೊಳಗೆ ಪಡಿತರ ಪಡೆಯದಿರುವವರು 302.
- 6 ತಿಂಗಳಿನ ಒಳಗಾಗಿ ಪಡಿತರ ಪಡೆಯದಿರುವವರು 67.
- ಪಡಿತರ ಚೀಟಿಯಲ್ಲಿ ಒಂದೇ ಸದಸ್ಯ ಇರುವವರು 1.
ವಿಶೇಷವಾಗಿ ಸರಕಾರಿ ನೌಕರಿ ಇದ್ದಲ್ಲಿ ಬಿಪಿಎಲ್ ಕಾರ್ಡ ಹೊಂದಿದ್ದರೆ ದಯವಿಟ್ಟು ಕಚೇರಿಗೆ ಭೇಟಿ ನೀಡಿ ಬಿಪಿಎಲ್ ಕಾರ್ಡ್ ನ್ನು ಮಾರ್ಪಾಟು ಮಾಡಿಕೊಳ್ಳಲು ಮತ್ತು ಪಡಿತರ ಚೀಟಿಯಲ್ಲಿ ಹೆಸರಿರುವವರು ಇನ್ನೂ E-Kyc ಮಾಡಿಸದವರಿಗೂ ಕಾರ್ಡ ರದ್ದಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
ಅನರ್ಹ ಬಿಪಿಎಲ್ ಕಾರ್ಡ್ಗಳ ಪರಿಶೀಲನೆ ಮತ್ತು ರದ್ದುಗೊಳಿಸುವ ಪ್ರಕ್ರಿಯೆ ಬಡವರ ಹಿತಾಸಕ್ತಿಗೆ ಅನುಕೂಲವಾಗಲಿದೆ.
ವರದಿ: ಜಗದೀಶ್ ಕುಮಾರ್ ಭೂಮಾ



















