“ನಾವು ಬದುಕೆಂಬ ಸಂತೆಯೊಳಗಿನ ಸಂತರು…!”
ಅಜ್ಞಾನದ ಕಡಲೊಳಗೆ ಮಿಂದೇಳುತ್ತಿರುವ ಮಹಾಜ್ಞಾನಿಗಳು…
ಪ್ರಶ್ನಿಸಲು ಶಕ್ತಿಯಿಲ್ಲದೆ, ಮೌನದಿಂದ ಮುನ್ನಡೆಯುತ್ತಿರುವ ಮಹಾ ಪ್ರಚಂಡರು.
ಉತ್ತರಿಸಲು… ಇದ್ದರೂ, ‘ನನಗ್ಯಾಕೆ?’ ಎನ್ನುವ ಅಲಸ್ಯ ಮನೋಭಾವದವರು…
ಅತ್ಯುತ್ಸಾಹದಿಂದ ಯಶಸ್ಸೆಂಬ ಮುತ್ತನ್ನು ಎರಕಲು ಹೊರಟ ಉತ್ತರಕುಮಾರರು!
ಆದರೆ… ಅರ್ಧ ದಾರಿಯಲ್ಲೆ ಉತ್ಸಾಹ ಕಳೆದುಕೊಂಡು, ಹಿಂತಿರುಗುವ ನಿರುತ್ಸಾಹಿಗಳು.
ನಾವು… ಸಂತೆಯೊಳಗಿನ ಸಂತರು.
ದೂರದಿಂದಲೆ ಬೆಟ್ಟ-ಗುಟ್ಟಗಳ ಪ್ರಕೃತಿಯ ಸೊಬಗು ಸವಿಯುವ ಭಾಗ್ಯಶಾಲಿಗಳು.
ಆದರೆ… ಹತ್ತಿರ ಹೋದಂತೆ…
ಕಲ್ಲು-ಮುಳ್ಳುಗಳ ನಡುವೆ, ಇಳಿಜಾರಿನ ತಪ್ಪಲಲ್ಲಿ ಹರಿಯುವ ಜರಿಯ ನೀರನ್ನು ನೋಡಿ… ಬೆಚ್ಚಿ ಬೀಳುವ ಪುಕ್ಕಲು ಮಹಾಶಯರು!
ಅಕ್ಕ-ಪಕ್ಕದ ಮನೆಗೆ ಬೆಂಕಿ ಬಿದ್ದರೂ, ಮನದೊಳಗೆ ನಸು ನಗುತ,
ಮೇಲ್ನೋಟಕ್ಕೆ ಬಿಕ್ಕಿ ಬಿಕ್ಕಿ ಅಳುವ ಹೃದಯಹೀನರು!
ಲಜ್ಜೆ ಗೆಟ್ಟ ಲಂಚ ಎನ್ನುವ ಮಹಾರಾಕ್ಷಸನು ಎಗ್ಗು ಸಿಗ್ಗಿಲ್ಲದೆ ಕಿತ್ತು ತಿನ್ನುತ್ತಿರುವಾಗ,
‘ನೂರಕ್ಕೆ ಇನ್ನೂರು ಕೊಟ್ಟು ಪರರ ಗೋಜು ನಮಗ್ಯಾಕೆ?’ ಎನ್ನುವ, ನನ್ನ ಕಾಯಕವಾದರೆ ಸಾಕೆನ್ನುವ…
ಸಮಯದ ಗೊಂಬೆಗಳು ನಾವು!
ಹಂಗಾಮಿ ಹಣ ಬರುವಂತಿದ್ದರೆ ಮುಖವಿರಿಸಿ ಕಾಯುವ ಧನದಾಹಿಗಳು!
ಕೊಟ್ಟವರು ಕೇಳಿದರೆ ಅ ಕ್ಷಣದಲ್ಲೆ ಸಮರ ಸಾರುವ ಮಹಾ ಪ್ರವೀಣರು!
ಕರುನಾಡಿನ ಈ ಮಣ್ಣಲ್ಲಿ ಹುಟ್ಟಿರುವುದೇ ನಮ್ಮ ಪುಣ್ಯ!
ಇದನ್ನು ಉಳಿಸಬೇಕು, ಬೆಳಸಬೇಕು —
ಕನ್ನಡವೆಂಬ ಅಮೃತದಂತಹ ಸವಿಯನ್ನು… ಈ ಜೀವ, ಜೀವನವಿರುವರೆಗೂ… ಸವಿಯಬೇಕು!
ಮುಂದಿನ…
ಮನ್ವಂತರದವರೆಗೂ..!
– ವಾಣಿಗರಹಳ್ಳಿ ಶ್ರೀನಿವಾಸ.



















