ಬಳ್ಳಾರಿ / ಕಂಪ್ಲಿ : ಪಟ್ಟಣದ ಕೋಟೆಯಲ್ಲಿ ಗುರುವಾರ ಜೋಕುಮಾರ ಸ್ವಾಮಿಯ ಪೂಜೆ ಮನೆ ಮನೆಗಳ ಮುಂದೆ ನಡೆಯಿತು.
ಇಲ್ಲಿಯ ಮಹಿಳೆಯರು ಬಿದಿರಿನ ಬುಟ್ಟಿಯಲ್ಲಿ ಜೋಕುಮಾರ ಸ್ವಾಮಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿ ನಂತರ ಬೇವಿನ ಎಲೆಗಳಿಂದ ಸಿಂಗಾರ ಮಾಡಿ ನಂತರ ಬುಟ್ಟಿಯನ್ನು ಹೊತ್ತುಕೊಂಡು ಮನೆ ಮನೆಗೆ ತರಳಿ, ಮನೆಯ ಮುಂದಿನ ಕಟ್ಟೆಗಳ ಮೇಲೆ ಬುಟ್ಟಿಯನ್ನು ಇಟ್ಟು, ಜೋಕುಮಾರ ಸ್ವಾಮಿಯ ಹಾಡುಗಳನ್ನು ಹಾಡುತ್ತಾರೆ.
ಸುತ್ತಲಿನ ಮಹಿಳೆಯರು ಮೊರದಲ್ಲಿ ರೊಟ್ಟಿ, ಕಾಯಿಪಲ್ಲೆ, ಖಾರ, ಎಣ್ಣೆ, ಜೋಳ, ಅಕ್ಕಿ, ಮೆಣಸಿನಕಾಯಿ ಹಾಗೂ ಬೆಣ್ಣೆಯನ್ನು ಇಟ್ಟುಕೊಂಡು ಬಂದು ನೈವೇದ್ಯ ಸಲ್ಲಿಸುತ್ತಾರೆ.
ನಂತರ ಮೊರದಲ್ಲಿ ಪ್ರಸಾದವನ್ನು ಹಾಕಿ ಜೋಕುಮಾರ ಸ್ವಾಮಿಯ ಮೂರ್ತಿಗೆ ಹಚ್ಚಿದ ಬೆಣ್ಣೆಯನ್ನು ಬೇವಿನ ತಪ್ಪಲಿಗೆ ಹಾಕಿ ಕೊಡುತ್ತಾರೆ.
ಜೋಕುಮಾರ ಸ್ವಾಮಿಯು ಊರಿನ ಅಭಿವೃದ್ಧಿ ಮತ್ತು ಫಲವತ್ತತೆಯ ಸಂಕೇತವಾಗಿದ್ದಾನೆ. ಗಣೇಶ ಹೋದ ನಂತರ ಜೋಕುಮಾರ ಪೂಜೆ ಎಲ್ಲೆಡೆ ನಡೆಯುತ್ತದೆ.
ಜೋಕುಮಾರ ಸ್ವಾಮಿಯ ಆಚರಣೆ ಇನ್ನೂ ಉಳಿದುಕೊಂಡು ಬಂದಿರುವುದು ವಿಶೇಷವಾಗಿದೆ. ಇಂಥ ವಿಶೇಷ ಆಚರಣೆಗಳ ಬಗ್ಗೆ ನಮ್ಮ ಮುಂದಿನ ಜನಾಂಗಕ್ಕೆ ತಿಳಿಸಿದರೆ ಮಾತ್ರ ಆಚರಣೆಗಳನ್ನು ಉಳಿಸಿ ಬೆಳೆಸಲು ಸಾಧ್ಯವಾಗುತ್ತದೆ. ಅದೇ ರೀತಿಯಾಗಿ ಜೋಕುಮಾರನ ಪೂಜೆಯ ಸಂದರ್ಭದಲ್ಲಿ ಹಾಡುವ ಹಾಡುಗಳ ದಾಖಲೀಕರಣ ಕೂಡ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಗಮನ ನೀಡಬೇಕು ಎಂದು ನಿವೃತ್ತ ಶಿಕ್ಷಕ ಫಣಿ ಸೋಮಪ್ಪ ತಿಳಿಸಿದರು.
‘ ಜೇಡರ ಓಣ್ಯಾಗ ಹೋಗ್ಯಾನ ನನ ಕುವರ ಜೋಕುಮಾರ, ಕಟ್ಟಿ ಬಿಟ್ಟ ಬರವಲ್ಲ ಜೋಕುಮಾರ, ಕಟ್ಟಿ ಬಿಟ್ಟ ಬರವಲ್ಲ ಜೋಕುಮಾರ ರೊಟ್ಟಿ ಕೊಟ್ಟ ಕಳಸರಿ ಜೋಕುಮಾರ, ಐಯ್ಯೋಗಳ ಓಣ್ಯಾಗ ಹೋಗ್ಯಾನ ನನ ಕುವರ ಜೋಕುಮಾರ, ಕಟ್ಟಿ ಬಿಟ್ಟ ಬರವಲ್ಲ ಜೋಕುಮಾರ, ಕಟ್ಟಿ ಬಿಟ್ಟ ಬರವಲ್ಲ ಜೋಕುಮಾರ ಹೋಳಗಿ ಕೊಟ್ಟ ಕಳಸರಿ ಜೋಕುಮಾರ ‘ ಹಲವು ಹಾಡುಗಳು ಗಮನ ಸೆಳೆಯುತ್ತವೆ.
ಮನಗೆ ಮನೆಗೆ ಬಂದು ದಕ್ಷಣೆ, ಹಣ್ಣು ಹಂಪಲು, ದವಸ ಧಾನ್ಯ ಇತ್ಯಾದಿಗಳನ್ನು ತೆಗೆದುಕೊಂಡು ಹೋಗುತ್ತಾರೆ.
ವರದಿ : ಜಿಲಾನಸಾಬ್ ಬಡಿಗೇರ್



















