
ಬಳ್ಳಾರಿ / ಕಂಪ್ಲಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ.) ಕಂಪ್ಲಿ ತಾಲೂಕು, ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ (ಕಂಪ್ಲಿ) ಜನ ಜಾಗೃತಿ ವೇದಿಕೆ ಹಾಗೂ ಪ್ರಥಮ ದರ್ಜೆ ಕಾಲೇಜಿನ ರೆಡ್ ಕ್ರಾಸ್ ವಿಭಾಗ ಇವುಗಳ ಸಂಯುಕ್ತ ಆಶ್ರಯದಲ್ಲಿ ಸರಕಾರಿ ಪದವಿ ಕಾಲೇಜಿನಲ್ಲಿ ವಿಶ್ವ ಮಾದಕ ವಸ್ತುಗಳ ವಿರೋಧಿ ದಿನ ಕಾರ್ಯಕ್ರಮವನ್ನು ಕಾಲೇಜ್ ನ ಪ್ರಾಂಶುಪಾಲರಾದ ಡಾ. ಶ್ರೀನಿವಾಸ ರೆಡ್ಡಿ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.
ಈ ಕಾರ್ಯಕ್ರಮವನ್ನು ಜಿಲ್ಲಾ ನಿರ್ದೇಶಕರಾದ ರೋಹಿತಾಕ್ಷ ಗಿಡಕ್ಕೆ ನೀರನ್ನು ಹಾಕುವುದರ ಮೂಲಕ ಉದ್ಘಾಟನೆಯನ್ನು ಮಾಡಿ, ಕಾಲೇಜ್ ನ ವಿದ್ಯಾರ್ಥಿಗಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹಲವು ಕಾರ್ಯಕ್ರಮಗಳು ಮತ್ತು ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ನೀಡಿದರು.
ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ ಜಿಲಾನಸಾಬ್ ಬಡಿಗೇರ್ ಮಾತನಾಡುತ್ತಾ, ಮಾದಕ ವಸ್ತುಗಳಾದ ಗುಟ್ಕಾ, ಬೀಡಿ, ಸಿಗರೇಟ್, ಗಾಂಜಾ, ತಂಬಾಕುಗಳ ಸೇವನೆಯಿಂದ ಮನುಷ್ಯನ ಆರೋಗ್ಯ ಕೆಡುತ್ತದೆ. ಅದಲ್ಲದೆ ಆಯುಷ್ಯ ಕಡಿಮೆ ಆಗುತ್ತದೆ. ಇದರ ಬಗ್ಗೆ ಅರಿವು ಮೂಡಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ವಿದ್ಯಾರ್ಥಿಗಳಿಗೆ ಇದರ ಬಗ್ಗೆ ಅರಿವು ಇಲ್ಲದಿದ್ದರೆ ಮುಂದಿನ ಜೀವನದಲ್ಲಿ ಅನೇಕ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ವಿದ್ಯಾರ್ಥಿಗಳು ಇದರ ಬಗ್ಗೆ ಜಾಗೃತಿಯನ್ನು ಮೂಡಿಸಿಕೊಂಡು, ಶಿಕ್ಷಣದ ಬಗ್ಗೆ ಹೆಚ್ಚಿನ ಒಲವನ್ನು ತೋರಿಸುವುದರಿಂದ ನಿಮ್ಮ ಶೈಕ್ಷಣಿಕ ಜೀವನವು ಉಜ್ವಲವಾಗುತ್ತದೆ ಎಂದು ಹಲವು ಉದಾಹರಣೆಗಳ ಮೂಲಕ ಮನಮುಟ್ಟುವಂತೆ ಹೇಳಿದರು.
ನಂತರ ವಿದ್ಯಾರ್ಥಿಗಳಿಗೆ ಮಾದಕ ವಸ್ತು ವಿರೋಧಿ ದಿನಾಚರಣೆಯ ಬಗ್ಗೆ ಪ್ರಮಾಣ ವಚನ ಬೋಧಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಯೋಜನೆ ಅಧಿಕಾರಿಗಳಾದ ರಾಘವೇಂದ್ರ, ರಾಜ್ಯ ಸದ್ಭಾವನ ಪ್ರಶಸ್ತಿ ಪುರಸ್ಕೃತರಾದ ಜಗದೀಶ್ ಪೂಜಾರ್, ತಾಲೂಕು ಕೃಷಿ ವಿಭಾಗ ಅಧಿಕಾರಿ ಸಂಜೀವ್, ಕಾಲೇಜಿನ ಪ್ರಾಧ್ಯಾಪಕರಾದ ಎಂ. ಪಿ. ಬಾಲಾಜಿ, ಡಾ. ಚಂದ್ರಶೇಖರ್, ಡಾ. ರಾಜ್ಮ ಟಿಎಂಆರ್, ಡಾಕ್ಟರ್ ಅನ್ನಪೂರ್ಣಮ್ಮ ಗುಡ್ಡದೂರು, ಮಹೇಶ್, ಗ್ರಂಥಪಾಲಕ ವೀರಭದ್ರಪ್ಪ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ : ಕರುನಾಡ ಕಂದ



















