ಬಸವ ತತ್ವದ ಮೂಲ ಬೇರುಗಳಾದ ಜೋಡೆತ್ತಿನ ಕೃಷಿಕರಿಗೆ ಪ್ರೋತ್ಸಾಹ ಧನ ನೀಡುವ ಯೋಜನೆ ಜಾರಿಗೆ ತಂದು ಬಸವ ಸಂಸ್ಕೃತಿ ಅಭಿಯಾನ ಕಾರ್ಯಕ್ರಮ ತಹಸೀಲ್ದಾರ್ ರವರಿಗೆ ಮನವಿ ಪತ್ರ
ಕಲಬುರಗಿ/ ಕಾಳಗಿ : ಬಸವ ಸಂಸ್ಕೃತಿಯ ಕುರಿತು ಜನರಿಗೆ ಅರಿವು ಮೂಡಿಸಲು ರಾಜ್ಯ ಮಟ್ಟದ ಅಭಿಯಾನವನ್ನು ಸೆಪ್ಟೆಂಬರ್-1 ರಿಂದ ಅಕ್ಟೋಬರ್-1 ರವರೆಗೆ ಹಮ್ಮಿಕೊಂಡಿರುವುದು ಅತ್ಯಂತ ಸಂತೋಷದ ಸಂಗತಿಯಾಗಿದೆ. ಬಸವ ತತ್ವದ ಮೂಲ ಬೇರುಗಳಾಗಿ ಕೆಲಸ ನಿರ್ವಹಿಸುತ್ತಿರುವ ನಂದಿ ಕೃಷಿಕರು ಉಳಿದರೆ ಮಾತ್ರ ಬಸವ ಸಂಸ್ಕೃತಿ ಉಳಿಯಲು ಸಾಧ್ಯ ಎಂಬ ವಿಚಾರ ಇಂದಿನ ವೈಜ್ಞಾನಿಕ ಆವಿಷ್ಕಾರಗಳಿಂದ ಸ್ಪಷ್ಟವಾಗಿ ತಿಳಿಯುತ್ತಿರುವುದರಿಂದ ಜೋಡೆತ್ತಿನ ಕೃಷಿಕರು ಹಾಗೂ ಕೃಷಿ ಪದವೀಧರರು ಒಗ್ಗೂಡಿ ನಂದಿ ಕೃಷಿಕರ ಪುನಶ್ವೇತನದ ಉದ್ದೇಶದಿಂದ ‘ನಂದಿ ಕೂಗು’ ಅಭಿಯಾನ ಪ್ರಾರಂಭಿಸಿ ನಂದಿ ಸಂತತಿ ಹೆಚ್ಚಿಸುವ ಕುರಿತು ಹಲವಾರು ವೈಜ್ಞಾನಿಕ ಚಿಂತನಾ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದ್ದಾರೆ. ಇದರೊಂದಿಗೆ ಜೋಡೆತ್ತಿನ ಕೃಷಿಕರ ಶ್ರಮಕ್ಕೆ ಬೆಲೆ ನೀಡಿ ಪ್ರತಿ ಜೋಡೆತ್ತಿನ ರೈತರಿಗೆ ಪ್ರತಿ ತಿಂಗಳು ರೂ. 11000/- ಪ್ರೋತ್ಸಾಹ ಧನ ನೀಡುವ ಯೋಜನೆ ಜಾರಿಗೆ ತಂದು ನಂದಿ ಸಂಪತ್ತು ರೈತರ ಮನೆಯಲ್ಲಿ ಉಳಿಯುವಂತೆ ಮಾಡಲು ಜೋಡೆತ್ತಿನ ಕೃಷಿಕರ ಸಂಘಟನೆಯ ವತಿಯಿಂದ ಒಂದು ವರ್ಷದ ಹಿಂದೆ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದ್ದರೂ ಕೂಡ ಇಲ್ಲಿಯವರೆಗೆ ಯಾವುದೇ ಸ್ಪಂದನೆ ದೊರೆತಿರುವುದಿಲ್ಲ, ಬಸವ ತತ್ವದ ವೈಜ್ಞಾನಿಕ ವಿಚಾರಗಳ ಕುರಿತು ಜನಜಾಗೃತಿ ಮೂಡಿಸಲು ದಿನಾಂಕ: 23-08-25 ರಿಂದ ವಿಜಯಪುರದ ಜ್ಞಾನ ಯೋಗಾಶ್ರಮದಿಂದ ಬೆಂಗಳೂರಿನ ಬಸವನಗುಡಿಯಲ್ಲಿರುವ ಶ್ರೀ ದೊಡ್ಡ ಬಸವೇಶ್ವರ ದೇವಸ್ಥಾನದವರೆಗೆ ಪಾದ ಯಾತ್ರೆಯನ್ನು ಪ್ರಾರಂಭಿಸಿ ಬಸವ ಸಂಸ್ಕೃತಿ ಅಭಿಯಾನದ ಸಂದರ್ಭದಲ್ಲಿ ಜೋಡೆತ್ತಿನ ಕೃಷಿಕರನ್ನು ಬಸವ ತತ್ವದ ಮೂಲ ಬೇರುಗಳು ಎಂದು ಗುರುತಿಸಿ ಜೋಡೆತ್ತಿನ ಕೃಷಿಕರಿಗೆ ಪ್ರೋತ್ಸಾಹ ಧನ ನೀಡುವ ಯೋಜನೆ ಜಾರಿಯ ಕುರಿತು ಘೋಷಣೆ ಮಾಡಲು ವಿನಂತಿಸಿಕೊಂಡಿದ್ದಾರೆ.
ಜೋಡೆತ್ತಿನ ಕೃಷಿಕರ ಬೇಡಿಕೆಯು ನ್ಯಾಯ ಸಮ್ಮತವಾಗಿರುವುದರಿಂದ ನಾವು ಅವರ ಬೇಡಿಕೆಗೆ ಬೆಂಬಲವಾಗಿ ನಿಲ್ಲುವುದು ನಮ್ಮ ಜವಾಬ್ದಾರಿಯಾಗಿದೆ. ಜೋಡೆತ್ತಿನ ಕೃಷಿಕರ ಕೋರಿಕೆಯಂತೆ, ಬಸವ ಸಂಸ್ಕೃತಿ ಅಭಿಯಾನದ ಸಂದರ್ಭದಲ್ಲಿ ಜೋಡೆತ್ತಿನ ಕೃಷಿಕರನ್ನು ಬಸವ ತತ್ವದ ಮೂಲ ಬೇರುಗಳು ಎಂದು ಗುರುತಿಸಿ ಜೋಡೆತ್ತಿನ ಕೃಷಿಕರಿಗೆ ಪ್ರೋತ್ಸಾಹ ಧನ ನೀಡುವ ಯೋಜನೆ ಜಾರಿಗೆ ತರುವ ಕುರಿತು ಘೋಷಣೆ ಮಾಡಿ, ಇಲ್ಲವಾದರೆ, ಜೋಡೆತ್ತಿನ ಕೃಷಿಕರು ಬಸವ ತತ್ವದ ಮೂಲ ಬೇರುಗಳು ಅಲ್ಲವೆಂದು ತಿಳಿಸಿ ಅಧಿಕೃತ ಪತ್ರವನ್ನು ನೀಡಲು ಕೋರಿಕೊಳ್ಳುತ್ತೇವೆ ತಮ್ಮಿಂದ ಯಾವುದೇ ರೀತಿಯ ಸ್ಪಂದನೆ ಬರದೇ ಇದ್ದರೆ, ಜೋಡೆತ್ತಿನ ಕೃಷಿಕರ ಸಂಘಗಳು ತೆಗೆದುಕೊಳ್ಳುವ ಮುಂದಿನ ನಿರ್ಧಾರಕ್ಕೆ ನಾವು ಬೆಂಬಲವಾಗಿ ನಿಲ್ಲುವುದು ಅನಿವಾರ್ಯವಾಗುವುದು ಎಂಬ ವಿಷಯವನ್ನು ತಮ್ಮ ಗಮನಕ್ಕೆ ತರಲು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ಬಯಸುತ್ತದೆ. ಈ ಸಂದರ್ಭದಲ್ಲಿ ರೈತ ಸೇನೆ ತಾಲೂಕ ಅಧ್ಯಕ್ಷ ವೀರಣ್ಣ ಗಂಗಾಣಿ, ಶಿವರಾಜ್ ಪಾಟೀಲ್ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು, ಸುಂದರ ಡಿ ಸಾಗರ್, ಭೀಮರಾವ್ ಮಲಗಣ, ಜಗನ್ನಾಥ ಅಲ್ಲಬ, ಮಲ್ಲು ಪಾಟೀಲ್, ಶಿವು ಸುಲೇಪೇಟ, ವೀರಣ್ಣ ಸಿಗಿ ಸೇರಿದಂತೆ ಇನ್ನೂ ಅನೇಕ ರೈತರು ಉಪಸ್ಥಿತರಿದ್ದರು.
ವರದಿ ಚಂದ್ರಶೇಖರ್ ಆರ್. ಪಾಟೀಲ್




















