
ಮದ್ಯ ಪ್ರೇಮಿಗಳ ತಾಣವಾದ ಇಂದಿರಾ ಮಾರುಕಟ್ಟೆ ವರದಿಗೆ ಸ್ಪಂದಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದ CMO.
ಇದೇ ಸೆಪ್ಟೆಂಬರ್ 9ರಂದು ಗುರುಮಠಕಲ್ ಪಟ್ಟಣದ ಶ್ರೀ ನಗರೇಶ್ವರ ದೇವಸ್ಥಾನ ಹಿಂಭಾಗದಲ್ಲಿರುವ ಇಂದಿರಾ ಗಾಂಧಿ ತರಕಾರಿ ಮಾರುಕಟ್ಟೆಯ ಕುರಿತಾಗಿ “ಕರುನಾಡ ಕಂದ.ಕಾಮ್ ನಲ್ಲಿ ವರದಿ ಮಾಡಿದ ಬೆನ್ನಲ್ಲೇ ಸ್ಥಳೀಯ ಶ್ರೀಕಾಂತ್ ತಲಾರಿಯವರು ಮುಖ್ಯ ಮಂತ್ರಿಗಳ ಕಚೇರಿಗೆ ಎಕ್ಸ್ ಖಾತೆ ಮೂಲಕ ಹಂಚಿಕೆ ಮಾಡಿರುತ್ತಾರೆ,ಈ ಕುರಿತು ತಕ್ಷಣ ಕ್ರಮ ಕೈಗೊಳ್ಳಲು ಮಾನ್ಯ ಮುಖ್ಯ ಮಂತ್ರಿಗಳ ಕಚೇರಿಯಿಂದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಮುಖ್ಯಮಂತ್ರಿಯವರ ಕಚೇರಿಯಿಂದ ಮಾಧ್ಯಮ ಪ್ರಕಟಣೆ
ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲ್ಲೂಕಿನ ಶ್ರೀ ನಗರೇಶ್ವರ ದೇವಸ್ಥಾನದ ಹಿಂದೆ ಇರುವ ಇಂದಿರಾ ಮಾರುಕಟ್ಟೆಯಲ್ಲಿ ಸಾರ್ವಜನಿಕರು ಅನಧಿಕೃತ ಚಟುವಟಿಕೆಗಳನ್ನು ಮಾಡುತ್ತಿರುವುದಾಗಿ ‘ ಎಕ್ಸ್ ʼ ಬಳಕೆದಾರರೊಬ್ಬರು ಮುಖ್ಯಮಂತ್ರಿಯವರ ಕಚೇರಿಯ ಕುಂದುಕೊರತೆ ವಿಭಾಗದ ಗಮನಕ್ಕೆ ತಂದಿರುತ್ತಾರೆ. ವಿಶೇಷ ಕರ್ತವ್ಯಾಧಿಕಾರಿಗಳು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದರು.
ಸದರಿ ಮಾರುಕಟ್ಟೆಯನ್ನು ಸ್ವಚ್ಛಗೊಳಿಸಿದ್ದು, ರಾತ್ರಿ ಸಮಯದಲ್ಲಿ ಮಾರುಕಟ್ಟೆಯಲ್ಲಿ ಯಾವುದೇ ಅನೈತಿಕ ಚಟುವಟಿಕೆಗಳು ನಡೆಯದಂತೆ ಸೂಕ್ತ ಕ್ರಮ ವಹಿಸಲು ತಾಲ್ಲೂಕಿನ ಪೊಲೀಸ್ ಅಧಿಕಾರಿಗಳಿಗೆ ತಿಳಿಸಲಾಗಿರುತ್ತದೆ. ಜೊತೆಗೆ ಇನ್ನು ಮುಂದೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರವಹಿಸಲಾಗಿದೆ ಎಂದು ಗುರುಮಠಕಲ್ ಪುರಸಭೆಯ ಮುಖ್ಯಾಧಿಕಾರಿಗಳು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯನ್ನು ಹೆಚ್ಚು ಪರಿಣಾಮಕಾರಿಯಾಗಿ ತ್ವರಿತ ಗತಿಯಲ್ಲಿ ಕಾರ್ಯಚರಣೆ ಕೈಗೊಳ್ಳಲು ಸಹಕರಿಸಿದ ಎಲ್ಲಾ ಕರುನಾಡ ಕಂದ ಪತ್ರಿಕೆಯ ಓದುಗರಿಗೆ ಧನ್ಯವಾದಗಳು.
ವರದಿ ಜಗದೀಶ್ ಕುಮಾರ್ ಭೂಮಾ




















