ಬಳ್ಳಾರಿ / ಕಂಪ್ಲಿ : ತಾಲ್ಲೂಕಿನ ರಾಮಸಾಗರ ಗ್ರಾಮದ ಆರಂಭದ ಗುಡ್ಡದ ಮೇಲಿರುವ ಶ್ರೀ ಬಂಡೇಭೀಮೇಶ (ಆಂಜಿನೇಯಸ್ವಾಮಿಗೆ) ನಿಗೆ ವಿಜಯದಶಮಿಯ ದಿನವಾದ ದಸರಾ ಹಬ್ಬದ ದಿನ ಸುಮಾರು 5.5.ಕೆ.ಜಿ ತೂಕದ ಬೆಳ್ಳಿ ಕವಚವನ್ನು ಸಮರ್ಪಣೆ ಮಾಡಿದರು.
ಗ್ರಾಮದ ಆರ್ಯವೈಶ್ಯ ಸಮಾಜದ ಮುಖಂಡರಾದ ಎಚ್. ಸತ್ಯನಾರಾಯಣ ಶ್ರೇಷ್ಠಿ ಮುಂದಾಳತ್ವದಲ್ಲಿ ಗ್ರಾಮದ ವಿವಿಧ ಸಮಾಜಗಳ ಮುಖಂಡರು, ದಾನಿಗಳು ನೀಡಿದ ದೇಣಿಗೆಯಲ್ಲಿ ಬಂಡೆ ಭೀಮೇಶನಿಗೆ ಬೆಳ್ಳಿ ಕವಚವನ್ನು ಮಾಡಿದ್ದು, ದಸರಾ ಹಬ್ಬದ ದಿನಸ್ವಾಮಿಗೆ ವಿವಿಧ ಅಭಿಷೇಕಗಳನ್ನು ನೆರವೇರಿಸಿದ ನಂತರ ಸುಮಾರು 8.5.ಲಕ್ಷರೂ ವೆಚ್ಚದ 5.5.ಕೆ.ಜಿ.ತೂಕದ ಬೆಳ್ಳಿ ಕವಚದಿಂದ ಅಲಂಕಾರ ಮಾಡಿ ವಿಶೇಷ ಪೂಜೆಯನ್ನು ಸಲ್ಲಿಸಿ ಮಹಾಮಂಗಳಾರತಿ ಮಾಡಿ ನೆರೆದಿದ್ದ ಸಕಲ ಸದ್ಭಕ್ತರಿಗೆ ಪ್ರಸಾದವನ್ನು ವಿತರಿಸಿದರು. ಯತಿಗಳಾದ ಶ್ರೀ ವ್ಯಾಸರಾಯರು ನಾಡಿನಲ್ಲಿ ಸ್ಥಾಪಿಸಿದ 732 ಆಂಜಿನೇಯ ಮೂರ್ತಿಗಳಲ್ಲಿ ಇದು ಒಂದಾಗಿದೆ ಎಂದು ಹೇಳಲಾಗುತ್ತಿದೆ. ಗ್ರಾಮದ ಈಶಾನ್ಯ ಪ್ರದೇಶದಲ್ಲಿ ಗುಡ್ಡ ಇರುವುದರಿಂದ ಗ್ರಾಮಕ್ಕೆ ಕೆಡಕಾಗಬಹುದೆಂದು ಬೃಹತ್ ಕಲ್ಲಿನ ಗುಡ್ಡದ ಮೇಲೆ ಆಂಜಿನೇಯಸ್ವಾಮಿಯನ್ನು ಪ್ರತಿಷ್ಠಾಪಿಸಿದ್ದು, ಬೃಹತ್ ಬಂಡೆಯ ಮೇಲೆ ಆಂಜಿನೇಯ ಸ್ವಾಮಿ ಇರುವುದರಿಂದ ಈತನನ್ನು ಬಂಡೆ ಭೀಮೇಶ್ ಎಂದು ಕರೆಯುತ್ತಾರೆ. ನೂತನ ಬೆಳ್ಳಿ ಕವಚ ಸಮರ್ಪಣೆ ಜೊತೆಗೆ ದೇವಸ್ಥಾನದ ಆವರಣದಲ್ಲಿ ಜೀರ್ಣೋದ್ಧಾರ ಮಾಡಿದ್ದಾರೆ.
ಸಂಜೆ ದೇವಸ್ಥಾನದಲ್ಲಿ ಅಂಕಲಗಿ ಮಠದ ಸ್ವಾಮೀಜಿಗಳಿಂದ ಮುತ್ಯೆದೆಯರಿಗೆ ಉಡಿ ತುಂಬುವ ಹಾಗೂ ದಾನಿಗಳಿಗೆ, ಕಾರ್ಯಕರ್ತರಿಗೆ ಅತ್ಮೀಯ ಸನ್ಮಾನ ಕಾರ್ಯಕ್ರಮ ಜರುಗಿತು. ನಂತರ ಸಾರ್ವಜನಿಕರಿಗೆ ಅನ್ನ ಸಂತಾರ್ಪಣೆ ಜರುಗಿತು. ಸಂಜೆ ಗ್ರಾಮದ ಸಾರ್ವಜನಿಕರು ಬನ್ನಿ ಮುಡಿಯುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಕಲಸದ್ಭಕ್ತರು ನೂತನವಾಗಿ ಕಂಗೊಳಿಸುತ್ತಿರುವ ಬಂಡೇ ಭೀಮೇಶನ ಕಾರ್ಯ ಮಾಡಿ ಪುನೀತರಾದರು.
ವರದಿ : ಜಿಲಾನಸಾಬ್ ಬಡಿಗೇರ್




















