
ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಗಡಿಭಾಗವಾದ ಶಿಕಾರಿಪುರ ತಾಲೂಕಿನ ಹುಣಸೇಕಟ್ಟೆ ಗ್ರಾಮದ ಜೈ ಹನುಮಾನ್ ಎಂದೇ ಪ್ರಸಿದ್ಧವಾಗಿದ್ದ ಹಬ್ಬದ ಹೋರಿ (17ವರ್ಷ) ಶನಿವಾರ ಬೆಳಗಿನ ಜಾವ ಅನಾರೋಗ್ಯದಿಂದ ಮೃತಪಟ್ಟಿದೆ. ದಶಕಗಳ ಕಾಲ ಶಿವಮೊಗ್ಗ, ಹಾವೇರಿ, ಉತ್ತರ ಕನ್ನಡ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಎಲ್ಲಿಯೇ ಹೋರಿ ಬೆದರಿಸುವ ಸ್ಪರ್ಧೆ ನಡೆಯಲಿ ಅಲ್ಲಿ ಹುಣಸೇಕಟ್ಟೆ ಜೈ ಹನುಮಾನ್ ಸ್ಪರ್ಧಿಸುತ್ತಿತ್ತು.
ಅಖಾಡದಲ್ಲಿ ಜೈ ಹನುಮಾನ್ ಹೋರಿ ಬರುತ್ತದೆ ಎಂದೊಡನೆ ಪ್ರೇಕ್ಷಕರ ಹಾಗೂ ಅಭಿಮಾನಿಗಳ ಕೇಕೆ, ಶಿಳ್ಳೆ, ಚಪ್ಪಾಳೆಗಳು ಜೋರಾಗಿ ಕೇಳಿ ಬರುತ್ತಿದ್ದವು. ಅಖಾಡದಲ್ಲಿ ಮಿಂಚಿನ ಓಟ ಹಾಗೂ ಆ್ಯಕ್ಷನ್ ಮೂಲಕವೇ ಸಾವಿರಾರು ಅಭಿಮಾನಿಗಳನ್ನು ಹೊಂದಿದ್ದ ಹೋರಿ ಇನ್ನು ನೆನಪು ಮಾತ್ರ.
ಹೋರಿ ಹಬ್ಬದ ಮೂಲಕವೇ ಹುಣಸೇಕಟ್ಟೆ ಗ್ರಾಮಕ್ಕೆ ಹೆಸರು ತಂದ ಕೀರ್ತಿ ಜೈ ಹನುಮಾನ್ ಹೋರಿಗೆ ಸಲ್ಲುತ್ತದೆ. ಕುದುರೆಗಣಿ ಗ್ರಾಮದಲ್ಲಿ ಬಂಪರ್ ಬಹುಮಾನ ಬೈಕ್ ಸೇರಿದಂತೆ ಒಂದು ತೊಲ ಬಂಗಾರ, ಐದು ಗೋದ್ರೇಜ್, ಡ್ರೆಸಿಂಗ್ ಟೇಬಲ್ ಗಳು, ಟಿವಿಗಳು, ರೆಫ್ರಿಜರೇಟರ್ ಗಳು ಹೀಗೆ ನೂರಾರು ಬಹುಮಾನಗಳನ್ನು ಗೆಲ್ಲುವ ಮೂಲಕ ಹೋರಿ ಹಬ್ಬದಲ್ಲಿ ಇತಿಹಾಸ ಸೃಷ್ಠಿಸಿತ್ತು. ಜೈ ಹನುಮಾನ್ ಹೆಸರಿನ ಹೋರಿ.
ಹುಣಸೇಕಟ್ಟೆ ಗ್ರಾಮದ ತುಕಾರಾಮ್ ಅವರು ಜೈ ಹನುಮಾನ್ ಹೋರಿಯನ್ನು ಸಲುಹಿದ್ದರು. ಮನೆಯಲ್ಲಿಯೇ ಜನಿಸಿದ್ದ ಹೋರಿಯನ್ನು ಅತ್ಯಂತ ಪ್ರೀತಿಯಿಂದ ಸಾಕಿದ್ದರು. ಹೋರಿ ಸಾವನ್ನಪ್ಪುತ್ತಿದ್ದಂತೆ ತುಕಾರಾಂ ಮನೆಯ ಸದಸ್ಯರು ತಮ್ಮ ಮನೆಯ ಸದಸ್ಯನನ್ನೇ ಕಳೆದುಕೊಂಡ ದುಃಖದಲ್ಲಿದ್ದಾರೆ. ಕೊಟ್ಟಿಗೆಯಲ್ಲಿ ಚಿಕ್ಕ ಕರುವಿನಂತೆ ಕುಟುಂಬ ಸದಸ್ಯರೊಂದಿಗೆ ವರ್ತಿಸುತ್ತಿದ್ದ ಹೋರಿ ಅಖಾಡದಲ್ಲಿ ಇಳಿಯುತ್ತಿದ್ದಂತೆ ರೌದ್ರಾವತಾರ ತಾಳುತ್ತಿತ್ತು.
ಹೋರಿ ನಿಧನವಾದ ಸುದ್ದಿ ತಿಳಿಯುತ್ತಿದ್ದಂತೆ ಜಿಲ್ಲೆ ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳ ಸಾವಿರಾರು ಅಭಿಮಾನಿಗಳು ಆಗಮಿಸಿ ಅಗಲಿದ ಹೋರಿಯ ಅಂತಿಮ ದರ್ಶನ ಪಡೆದರು. ಹೂಮಾಲೆ ಹಾಕಿ ಪೂಜೆ ಸಲ್ಲಿಸಿದರು. ಹೋರಿಯ ಮಾಲೀಕರು ಮತ್ತು ಅಭಿಮಾನಿಗಳು ಹೋರಿಯ ಅಂತಿಮಯಾತ್ರೆ ನಡೆಸಿದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಅಂತಿಮ ಯಾತ್ರೆ ಸಂಚರಿಸಿತು. ವಿವಿಧ ವಾಧ್ಯಗಳೊಂದಿಗೆ ಪಟಾಕಿ ಸಿಡಿಸುವ ಮೂಲಕ ಹೋರಿಯ ಅಂತಿಮ ಯಾತ್ರೆ ನಡೆಸಲಾಯಿತು. ಮಹಿಳೆಯರು ಸೇರಿದಂತೆ ಅಭಿಮಾನಿಗಳು ಹೂಮಾಲೆ ಹಾಕಿ ನೈವೇದ್ಯ ಅರ್ಪಿಸಿದರು.
ಗ್ರಾಮದಲ್ಲಿ ಶೋಕಸಾಗರ ಮುಗಿಲು ಮುಟ್ಟಿತ್ತು. ಹಿಂದೂ ಧಾರ್ಮಿಕ ವಿಧಿವಿಧಾನದಂತೆ ಜೈ ಹನುಮಾನ್ ಹೋರಿಯ ಅಂತ್ಯಕ್ರಿಯೆ ನೆರವೇರಿಸಲಾಯಿತು. ಜನಪದ ಕ್ರೀಡೆ ಹೋರಿ ಹಬ್ಬ ಆಚರಣಾ ಸಮಿತಿ ಜಿಲ್ಲಾಧ್ಯಕ್ಷ ಜೆ. ಎಸ್. ಚಿದಾನಂದ ಗೌಡ, ಪ್ರಧಾನ ಕಾರ್ಯದರ್ಶಿ ಷಣ್ಮುಖಪ್ಪ ಹರಗಿ ಸೇರಿದಂತೆ ಸಾವಿರಾರು ಜನ ಹೋರಿಯ ಅಂತಿಮ ದರ್ಶನ ಪಡೆದು, ಹೋರಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
- ಸಂದೀಪ ಯು.ಎಲ್, ಸೊರಬ



















