ಬೀದರ್ ಜಿಲ್ಲೆಯ ಕೇಂದ್ರ ಹಾಗೂ ತಾಲೂಕಾ ಕೇಂದ್ರಗಳಲ್ಲಿ ಇಂಗ್ಲೀಷ್ ಭಾಷೆಯ ನಾಮಫಲಕಗಳು ಮತ್ತು ಬ್ಯಾನರ್ಗಳನ್ನು ತೆರವುಗೊಳಿಸುವಂತೆ ಕಲ್ಯಾಣ ಕರ್ನಾಟಕ ನಿರ್ಮಾಣ ಸೇನೆಯ ಸಂಸ್ಥಾಪಕ ಅಧ್ಯಕ್ಷರಾದ ಸ್ವಾಮಿದಾಸ ಕೆಂಪೆನೋರ್ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
ಮನವಿ ಪತ್ರದಲ್ಲಿ, ಅಕ್ಟೋಬರ್ 15ರೊಳಗಾಗಿ ಬೀದರ್ ಹಾಗೂ ತಾಲೂಕಾ ಕೇಂದ್ರಗಳಲ್ಲಿ ಇರುವ ಎಲ್ಲ ಇಂಗ್ಲೀಷ್ ಮತ್ತು ಹಿಂದಿ ನಾಮಫಲಕಗಳನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಲಾಗಿದೆ. ಇಲ್ಲವಾದರೆ, ಸೇನೆಯ ಸದಸ್ಯರು ಸ್ವಯಂಪ್ರೇರಿತ ಹೋರಾಟ ಆರಂಭಿಸಿ, ಇಂಗ್ಲೀಷ್ ಮತ್ತು ಹಿಂದಿ ಫಲಕಗಳ ಮೇಲೆ ಕಪ್ಪುಮಸಿ ಹಚ್ಚಿ ‘ಕನ್ನಡ ಬೆಳಸಿ, ಕನ್ನಡ ಉಳಿಸಿ’ ಎಂದು ಬರೆದು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಲಾಗಿದೆ.
“ಕನ್ನಡ ರಾಜ್ಯ ಸರ್ಕಾರವು ‘ಮೊದಲು ಕನ್ನಡ’ ಎಂಬ ನಿಬಂಧನೆ ಜಾರಿಗೆ ತಂದಿದ್ದರೂ, ಬೀದರ್ ಜಿಲ್ಲೆಯಲ್ಲಿ ವ್ಯಾಪಾರ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು, ಹೋಟೆಲುಗಳು ಹಾಗೂ ಬಸ್ಗಳ ಮೇಲೆ ಇಂಗ್ಲೀಷ್ ನಾಮಫಲಕಗಳು ಹೆಚ್ಚಾಗಿವೆ. ಇದರ ವಿರುದ್ಧ ಜಿಲ್ಲಾಡಳಿತ ಕ್ರಮಕೈಗೊಳ್ಳದೆ ಕಣ್ಣುಮುಚ್ಚಿ ಕುಳಿತಿದೆ” ಎಂದು ಆರೋಪಿಸಲಾಗಿದೆ.
ಈ ಸಂದರ್ಭದಲ್ಲಿ ಜಿಲ್ಲಾ ಸಂಯೋಜಕರಾದ ಶಿವರಾಜ ನೇಲವಾಳಕರ್, ಜಿಲ್ಲಾ ಅಧ್ಯಕ್ಷ ಜೇಮ್ಸ್ ಇಸ್ಲಾಂಪೂರ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸಿರಾಜೋದ್ದೀನ್ ಪಟೇಲ್ ಸೇರಿದಂತೆ ಇತರರು ಇದ್ದರು.
ವರದಿ: ರೋಹನ್ ವಾಘಮಾರೆ




















