ಕೊಡಗು: ಭಾರತದಲ್ಲಿ ಹಬ್ಬ-ಹರಿದಿನಗಳಿಗೆ ಕಡಿಮೆ ಏನಿಲ್ಲ. ಆದರೆ ಪ್ರತಿ ವರ್ಷದ ತುಲಾ ಸಂಕ್ರಮಣದಂದು ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ಜರುಗುವ ಕಾವೇರಿ ಜಾತ್ರೆಗೆ ವಿಶೇಷ ಮಹತ್ವವಿದೆ. ದೇಶದ ಉದ್ದಗಲಕ್ಕೂ ತನ್ನ ಹೆಸರನ್ನು ಚಿರಸ್ಥಾಯಿಯಾಗಿಸಿಕೊಂಡಿರುವ ತಲಕಾವೇರಿ ಕ್ಷೇತ್ರವು ಕಂಚಿಕಾಮಕೋಟಿ ಪೀಠದ ಶಂಕರಾಚಾರ್ಯರ ಅಡಗು ತಾಣವಾದ ರಂಗಿನ ಕತೆಯಿಂದ ಇನ್ನಷ್ಟು ಬೆಳಕಿಗೆ బందిರುವುದು ಎಲ್ಲರಿಗೂ ಗೊತ್ತಿರುವ ವಿಷಯ.
ತುಲಾ ಸಂಕ್ರಮಣ ಕಾಲದಲ್ಲಿ ಇಲ್ಲಿಗೆ ಸಹಸ್ರಾರು ಮಂದಿ ಭಕ್ತರು ವಿವಿಧ ರಾಜ್ಯ,ದೇಶ, ವಿದೇಶ ಗಳಿಂದಲೂ ಬಂದು ಸೇರುತ್ತಾರೆ. ಹರಕೆ ಇರಲಿ ಇಲ್ಲದಿರಲಿ ತಮ್ಮಲ್ಲಿರುವ ನಂಬಿಕೆ ಶ್ರದ್ಧೆಗಳಿಗೆ ಕಾವೇರಿ ಮಾತೆಯನ್ನು ಪೂಜಿಸಿ ಧನ್ಯರಾಗುತ್ತಾರೆ.
ಕನಕ-ಸುಜ್ಯೋತಿ ನದಿಗಳು ಗುಪ್ತಗಾಮಿನಿಯಾಗಿ ಕಾವೇರಿ ನದಿಯನ್ನು ಸೇರುವ ಸ್ಥಳವನ್ನು ತ್ರಿವೇಣಿ ಸಂಗಮ ಎಂದು ಹೇಳುತ್ತಾರೆ. ಇಲ್ಲಿ ಸ್ಥಾನ ಮಾಡುವುದರಿಂದ ಸರ್ವಪಾಪ ನಿವಾರಣೆ ಯಾಗಿ ದೇಹದಲ್ಲಿರುವ ಕಸುವು, ಶಕ್ತಿ ಹೆಚ್ಚುವುದೆಂಬ ನಂಬಿಕೆ ಇದೆ. ಕೆಲವರು ಇಲ್ಲಿಯ ಶಾಸ್ತ್ರ, ಪಿಂಡ, ತರ್ಪಣ ಇತ್ಯಾದಿಗಳನ್ನು ನಡೆಸಿ ಕೃತಾರ್ಥರಾಗುತ್ತಾರೆ.
ಹೀಗೆ ಭಾಗಮಂಡಲದಲ್ಲಿ ಪೂಜೆ, ಸೇವೆ ಇತ್ಯಾದಿಗಳನ್ನು ನಡೆಸಿ ಅಲ್ಲಿಂದ ಕಾಲ್ನಡಿಗೆ ಯಲ್ಲಿ ತಲಕಾವೇರಿಗೆ ಹೋಗಬಹುದಾದರೂ ಆ ದಾರಿಯ ತುಂಬು ಕಡಿದಾದ ಬೆಟ್ಟಿಗಳಿಂದ, ದಟ್ಟವಾದ ಕಾಡುಗಳಿಂದ ಕೂಡಿರುವುದರಿಂದ ಎಲ್ಲರಿಗೂ ಕಾಲ್ನಡಿಗೆ ಯಲ್ಲಿ ತಲಕಾವೇರಿಗೆ ಹೋಗುವುದು ಸಾಧ್ಯವಾಗುವುದಿಲ್ಲ. ತುಲಾ ಸಂಕ್ರಮಣದ ಜಾತ್ರೆ ಸಮಯದಲ್ಲಿ ಸರಕಾರಿ ಬಸ್ಸುಗಳು ಲಭ್ಯವಿರುವುದರಿಂದ ತೊಂದರೆ ಏನಿಲ್ಲ.
ಬ್ರಹ್ಮಗಿರಿ ಬೆಟ್ಟವನ್ನು ಏರುವುದು ಒಂದು ಅದ್ಭುತ ಧಾರ್ಮಿಕ ಭಾವನೆಯಂತೆ ಕಾಣುತ್ತದೆಯಲ್ಲದೆ ವಯಸ್ಸಾದ ಮುದುಕರು, ಹೆಂಗಸರು ಎಲ್ಲರೂ ಈ ಬೆಟ್ಟವನ್ನು ಏರದೆ ಹೊರಡುವುದಿಲ್ಲ. ಈ ಬೆಟ್ಟದ ತುದಿಯಿಂದ ಆಹ್ಲಾದಕರ ವಾತಾವರಣವಲ್ಲದೆ ಸುತ್ತಲಿನ ದಟ್ಟ ಸೌಂದರ್ಯ ನಮ್ಮನ್ನು ಮಂತ್ರಮುಗ್ಧವಾಗಿಸಿ ಕಾಡುಗಳ ರಮಣೀಯ ಸೌಂದರ್ಯಗಳ ಮುದ ನೀಡುತ್ತದೆ.
ಈ ವರ್ಷ ತಲಕಾವೇರಿ ತೀರ್ಥೋದ್ಬವ ಅಕ್ಟೋಬರ್ 17ನೇ ತಾರೀಕು ಮಧ್ಯಾಹ್ನದಲ್ಲಿ ಬರುತ್ತದೆಯಲ್ಲದೆ ಆ ದಿನ ತಲಕಾವೇರಿಗೆ ಮಡಿಕೇರಿಯಿಂದ ವಿಶೇಷ ಬಸ್ಸುಗಳ ವ್ಯವಸ್ಥೆ ಇರುತ್ತದೆ. ಈ ಕಾರಣದಿಂದ ಸಂಕ್ರಮಣ ದಿವಸ ತಲಕಾವೇರಿಯಲ್ಲಿ ವಿಪರೀತ ನೂಕು ನುಗ್ಗಲೂ ಇರುತ್ತದೆ.
ಆ ದಿವಸ ಜ್ಯೋತಿಷ್ಯ ಶಾಸ್ತ್ರ ಪಂಡಿತರು ನಿಗಧಿಪಡಿಸಿದ ಸಮಯಕ್ಕೆ ಸರಿಯಾಗಿ 11, 44ಗಂಟೆಗೆ ತೀರ್ಥೋಧವ ಆಗುತ್ತದೆ ಎಂದು ವರದಿಯಾಗಿದೆ.
ತುಲಾ ಸಂಕ್ರಮಣದಂದು ಕೇಶ ಮುಂಡನ ಮಾಡಿಸಿಕೊಳ್ಳುತ್ತಿರುವ ಭಕ್ತಾದಿಗಳನ್ನು ಇಲ್ಲಿ ನೋಡುವುದೇ ಒಂದು ಸೊಗಸಾಗಿದ್ದು ತಲಕಾವೇರಿಯ ವರ್ಣನೆಯನ್ನು ನಾಲ್ಕು ಆಕ್ಷರಗಳಲ್ಲಿ ಬರೆಯಲಾಗುವುದಿಲ್ಲವಾದರೂ ಆ ಕ್ಷೇತ್ರ ಮೇಲಿರುವ ನಂಬಿಕೆ, ಪ್ರಕೃತಿ ಸೌಂದರ್ಯ ಹಾಗೂ ಪುರಾತನ ಇತಿಹಾಸ ಇಂದಿಗೂ ಅರ್ಥಪೂರ್ಣವಾಗಿದೆ.
ಹಲವಾರು ವರ್ಷಗಳ ಹಿಂದೆ ಈ ಕ್ಷೇತ್ರದ ನೀರಿನ ಕೊಳವನ್ನು ಶುದ್ದೀಕರಿಸಿದಾಗ ಕೊಳದ ತಳದಲ್ಲಿ ಹಲವಾರು ಶತಮಾನಗಳ ಹಿಂದಿನ ಶಕ್ತಿ ದೇವತೆ ವಿಗ್ರಹ ದೊರಕಿರುವುದು ಇಲ್ಲಿಯ ಮಹಿಮೆ ಇನ್ನೂ ನಿಗೂಢ ವಾಗಿದೆ ಎಂಬುದನ್ನು ಸಾಬೀತುಪಡಿಸುತ್ತಿದೆ.
ಕರ್ನಾಟಕ ರಾಜ್ಯದ ಕೊಡಗು ಜಿಲ್ಲೆಯ ಕೇಂದ್ರ ಸ್ಥಾನವಾದ ಮಡಿಕೇರಿಯಿಂದ ಒಂದೂವರೆ ಗಂಟೆ ಪ್ರಯಾಣ ಮಾಡಿದರೆ ಭಾಗಮಂಡಲ ಎಂಬ ಊರು ಸಿಗುತ್ತದೆ. ತಲಕಾವೇರಿಗೆ ಬರುವ ಭಕ್ತಾದಿಗಳು ಮೊದಲು ಇಲ್ಲಿ ಇಳಿದು ಶ್ರೀ ಭಗಂಡೇಶ್ವರ ದೇವಸ್ಥಾನದ ಎದುರು ಹರಿಯುತ್ತಿರುವ ಕಾವೇರಿ ನದಿಯ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿ, ಕೆಲವರು ವಿಶೇಷ ಭಕ್ತಿಯಿಂದ ಕೇಶ ಮುಂಡನೆ ಮಾಡಿಸಿಕೊಂಡು ನಂತರ ಶ್ರೀ ಭಗಂಡೇಶ್ವರ ದೇವಸ್ಥಾನವನ್ನು ಸಂಧರ್ಶಿಸಿ ತಲಕಾವೇರಿಗೆ ತೆರಳುವುದು ವಾಡಿಕೆಯಾಗಿರುತ್ತದೆ, ಇಲ್ಲಿಂದ ಬೇಕಾದಷ್ಟು ಭಾರಿ ಭಾಗಮಂಡಲದಿಂದ ತಲಕಾವೇರಿಗೆ ಭಕ್ತಾದಿಗಳನ್ನು ಸಾಗಿಸುತ್ತದೆ. ಉಳಿದ ಸಮಯಗಳಲ್ಲಾದರೆ ಬೆಳಿಗ್ಗೆ ಹನ್ನೊಂದುವರೆಗೆ ಮಾತ್ರ ಭಾಗಮಂಡಲದಿಂದ ತಲಕಾವೇರಿಗೆ ಬಸ್ಸಿನ ವ್ಯವಸ್ಥೆ ಇದ್ದು. ಇದು ತಪ್ಪಿದರೆ ಖಾಸಗಿ ಜೀಪುಗಳು ನಮ್ಮ ಸೇವೆಗೆ ಸದಾ ಸಿದ್ಧವಿದೆಯಾದರೂ ಅವರು ಹೇಳುವ ರೇಟು ನಮ್ಮನ್ನು ವ್ಯಸನಪಡಿಸುತ್ತದೆ.
ತಲಕಾವೇರಿಗೆ ತಲುಪಿದ ಕೂಡಲೇ ಅಲ್ಲಿರುವ ತೀರ್ಥಕುಂಡಕ್ಕೆ ಪ್ರದಕ್ಷಿಣೆ ಹಾಕಿ ಅದರ ಎದುರು ಭಾಗದಲ್ಲಿರುವ ವಿಶಾಲ ವಾದ ನೀರಿನ ಕೊಳದಲ್ಲಿ ಮುಳುಗು ಹಾಕಿ ಕುಂಡಕ್ಕೆ ನಮಸ್ಕರಿಸುವುದು ಬಹಳ ಹಿಂದಿನಿಂದಲೂ ಬಂದ ಪದ್ಧತಿ ತದನಂತರ ಆರ್ಚಕರು ಕುಂಡದಿಂದ ಪವಿತ್ರ ತೀರ್ಥವನ್ನು ನಮ್ಮ ಶರೀರಕ್ಕೆ ಪ್ರೊಕ್ಷಿಸುವ ವ್ಯವಸ್ಥೆ ಇದೆ. ತದ ನಂತರ ತೀರ್ಥಕುಂಡಕ್ಕೆ ಪೂಜಾದಿಗಳನ್ನು ಸಲ್ಲಿಸಿ ಅಲ್ಲಿಯೇ ಮೇಲುಗಡೆ ಇರುವ ಆಗಸ್ತ್ರ, ನಾಗದೇವತೆ, ಗಣಪತಿ ದೇವರುಗಳ ದರ್ಶನ ಪಡೆದರೆ ಈ ಕ್ಷೇತ್ರದ ಸೇವೆ ನಡೆಸಿದಂತಾಗುತ್ತದಾದರೂ ಈ ಕ್ಷೇತ್ರಕ್ಕೆ ಹೊಂದಿಕೊಂಡಿರುವ ಬ್ರಹ್ಮಗಿರಿ ಬೆಟ್ಟ ಏರುವುದರಿಂದ ತೀರ್ಥಯಾತ್ರೆ ಸಾರ್ಥಕ ಎನಿಸುತ್ತದೆ.
ತೀರ್ಪಕುಂಡದಲ್ಲಿ ಇದ್ದಕ್ಕಿದ್ದಂತೆ ನೀರು ಕುದಿಯುವ ರೀತಿಯಲ್ಲಿ ನೀರು ಉಕ್ಕಿ ಗುಳಿಗಳು ಮೇಲೆ ಬರುತ್ತದೆ. ಇದನ್ನೇ ಕಾವೇರಿ ತೀರ್ಥೋದ್ಭವ ಎನ್ನುತ್ತಾರೆ.
ಇನ್ನೂ ಒಂದು ಆಶ್ಚರ್ಯದ ವಿಷಯ ವೆಂದರೆ ತೀರ್ಥೋದ್ಭವದಿಂದ ಕುಂಡದ ಎದುರುಭಾಗದಲ್ಲಿರುವ ಕೊಳದಲ್ಲಿ ಮುಳುಗಿ ಏಳುತ್ತಿದ್ದಂತೆ ತಲೆಯಲ್ಲಿ ರಕ್ತ ತೊಟ್ಟಿಕ್ಕುತ್ತದೆ. ಗಾಬರಿಯಾಗಬೇಡಿ, ಕಾರಣ ಇಷ್ಟೆ ! ಕೇಶ ಮುಂಡನ ಮಾಡಿಸಿಕೊಂಡು ಕೊಳದಲ್ಲಿ ಮುಳುಗು ಹಾಕುವಾಗ ಮೇಲಿನಿಂದ ಭಕ್ತಾದಿಗಳು ಎಸೆಯುವ ನಾಲ್ಕಾಣೆ (ಇಪ್ಪತ್ತೈದು ಪೈಸೆ) ನಾಣ್ಯದ ಹರಿತವಾದ ಬದಿಗಳು ಬೋಳು ತಲೆಗೆ ಬಿದ್ದು ಗಾಯವಾಗಿ ಹಾಗಾಗುತ್ತದೆ.
ಮನುಷ್ಯರಿಗೆ ನೆಮ್ಮದಿಯ ಜೀವನಕ್ಕೆ ಧಾತ್ಮಿಕ ಭಾವನೆಯ ಅಗತ್ಯವಿದೆ. ಅಂತಹ ಒಂದು ಪರಮ ಪೂಜ್ಯ ಭಾವನೆಯನ್ನು ತಲಕಾವೇರಿಯಲ್ಲಿ ತುಲಾ ಸಂಕ್ರಮಣದಲ್ಲಾಗಲಿ ಇತರ ಸಮಯದಲ್ಲಾಗಲಿ ಕಾಣ ಬಹುದೆಂಬುದರಲ್ಲಿ ಎರಡು ಮಾತಿಲ್ಲ.
- ಕೊಡಕ್ಕಲ್ ಶಿವಪ್ರಸಾದ್.



















