ಬಳ್ಳಾರಿ / ಕಂಪ್ಲಿ : ಎಪಿಎಂಸಿಯಲ್ಲಿ ನೋಂದಾಯಿಸಿಕೊಂಡ ಸಣಾಪುರ ಗ್ರಾಮದ ಹಮಾಲಿ ವೃತ್ತಿ ಮಾಡುತ್ತಿದ್ದ ಜಡಿಯಪ್ಪ ಅಕಾಲಿಕವಾಗಿ ಸಾವನ್ನಪ್ಪಿದ್ದು, ಮೃತ ಕುಟುಂಬದ ಸದಸ್ಯರಿಗೆ ಎಪಿಎಂಸಿಯಿಂದ ನೀಡುವ ಅಂತ್ಯಕ್ರಿಯೆ ಖರ್ಚಿಗೆ 25 ಸಾವಿರ ರೂಗಳ ಚೆಕ್ಕನ್ನು ಎಪಿಎಂಸಿ ಅಧ್ಯಕ್ಷರಾದ ಎನ್. ಹಬೀಬ್ ರೆಹಮಾನ್ ಅವರು ಮಂಗಳವಾರ ಕಂಪ್ಲಿ ಪಟ್ಟಣದ ಶಾಸಕರ ಜನಸಂಪರ್ಕ ಕಚೇರಿಯಲ್ಲಿ ಶಾಸಕರಾದ ಜೆ. ಎನ್. ಗಣೇಶ್ ಅವರ ಮೂಲಕ ವಿತರಿಸಿದರು.
ಮೃತ ಕುಟಂಬದ ಸದಸ್ಯರಿಗೆ ಪರಿಹಾರ ಚೆಕ್ ವಿತರಿಸಿದ ನಂತರ ಶಾಸಕ ಜೆ.ಎನ್.ಗಣೇಶ ಮಾತನಾಡಿ, ಮನೆಯ ಹಿರಿಯನನ್ನು ಕಳೆದುಕೊಂಡ ಕುಟುಂಬ ಅನಾಥವಾಗಿದೆ. ಅವರ ಕುಟುಂಬಕ್ಕೆ ಎಪಿಎಂಸಿಯಿಂದ ತಾತ್ಕಾಲಿಕ ಪರಿಹಾರ ಸಿಕ್ಕಿದ್ದು, ವಿಮೆ ಹಣವೂ ಬರಲಿದೆ. ಅದನ್ನು ವ್ಯರ್ಥವಾಗಿ ಹಾಳು ಮಾಡದೇ ಮನೆಯ ಅಭಿವೃದ್ಧಿಗೆ ಬಳಸುವಂತೆ ಸಲಹೆ ನೀಡಿದರು.
ಸಣಾಪುರ ಗ್ರಾಮದ ಹಮಾಲಿ ಕೆಲಸ ಮಾಡುತ್ತಿದ್ದ ಜಡಿಯಪ್ಪ ಅವರು ಎಪಿಎಂಸಿಯಲ್ಲಿ ನೋಂದಾಯಿತ ಹಮಾಲಿ ಕಾರ್ಮಿಕನಾಗಿದ್ದು, ಎಪಿಎಂಸಿಯಲ್ಲಿ ನೋಂದಾಯಿತ ಕಾರ್ಮಿಕರಿಗೆ ಅಂತ್ಯಕ್ರಿಯೆಗೆ ತಾತ್ಮಕಾಲಿಕ ಪರಿಹಾರ 25ಸಾವಿರ ರೂಗಳನ್ನು ನೀಡುತ್ತಿದೆ. ಮತ್ತು ಅವರ ಕುಟುಂಬಕ್ಕೆ 5 ಲಕ್ಷ ರೂಗಳ ವಿಮಾ ಮೊತ್ತವೂ ಬರುತ್ತದೆ ಎಂದು ಎಪಿಎಂಸಿ ಅಧ್ಯಕ್ಷ ಎನ್.ಹಬೀಬ್ ರೆಹಮಾನ್ ತಿಳಿಸಿದರು.
ಈ ಸಂದರ್ಭದಲ್ಲಿ ಅಕ್ಕಿ ವ್ಯಾಪಾರಸ್ತರ ಒಕ್ಕೂಟದ ಉಪಾಧ್ಯಕ್ಷ ಜಿ.ಕುಮಾರಸ್ವಾಮಿ, ನೀರು ಬಳಕೆದಾರರ ಸಂಘದ ಅಧ್ಯಕ್ಷ ಕೆ.ದೊಡ್ಡಬಸವರಾಜ, ಪುರಸಭೆ ಸದಸ್ಯರಾದ ಸಿ.ಆರ್.ಹನುಮಂತ, ತಾ.ಪಂ.ಮಾಜಿ ಸದಸ್ಯ ಕೋಟೆ ಷಣ್ಮುಖ ಮುಖಂಡರಾದ ಪಿ.ವೀರೇಶಸ್ವಾಮಿ, ಹನುಮಂತಪ್ಪ ಸೇರಿದಂತೆ ಇತರರು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















