ಬಳ್ಳಾರಿ/ ಕಂಪ್ಲಿ :
ಪಟ್ಟಣದ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ಆಡಳಿತ, ಸಮುದಾಯ ಆರೋಗ್ಯ ಕೇಂದ್ರ ಕಂಪ್ಲಿ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಕುಷ್ಟರೋಗ ಪತ್ತೆ ಹಚ್ಚುವ ಅಭಿಯಾನ ಕಾರ್ಯಕ್ರಮದ ತಾಲ್ಲೂಕು ಮಟ್ಟದ ಸಮನ್ವಯ ಸಮಿತಿ ಸಭೆಯು ತಹಶೀಲ್ದಾರ್ ಜೂಗಲ್ ಮಂಜುನಾಯಕ ಅಧ್ಯಕ್ಷತೆಯಲ್ಲಿ ಜರುಗಿತು.
ಈ ಸಂದರ್ಭದಲ್ಲಿ ಮಾತನಾಡಿದ ತಹಶೀಲ್ದಾರ ಜೂಗಲ್ ಮಂಜುನಾಯಕ ಆವರು ಕುಷ್ಟರೋಗವು ಮೈಕೋಬ್ಯಾಕ್ಟೀರಿಯಂ ಲೆಪ್ರಾಬ್ಯಾಸಿಲೆ ಎಂಬ ರೋಗಾಣುವಿನಿಂದ ಬರುವ ಖಾಯಿಲೆಯಾಗಿದೆ. ಈ ರೋಗದಲ್ಲಿ ಸಾಂಸಾರ್ಗಿಕ ಹಾಗೂ ಅಸಾಂಸಾರ್ಗಿಕ ಎನ್ನುವ ಎರಡು ವಿಧಗಳಿವೆ. ಒಟ್ಟು ರೋಗಿಗಳಲ್ಲಿ ಶೇ.3%ರಷ್ಟಿರುವ ಸಾಂಸರ್ಗಿಕ ರೋಗಿಗಳಿಂದ ಈ ರೋಗ ಬಹಳ ನಿಧಾನವಾಗಿ ಹರಡುತ್ತದೆ. ಈ ರೋಗವು ವಂಶಪಾರಪರ್ಯವಲ್ಲ ಹಾಗೂ ಪಾಪ ಶಾಪಗಳಿಂದ ಬರುವುದಿಲ್ಲ. ಈ ರೋಗದ ಲಕ್ಷಣಗಳು ಕಂಡ ಕೂಡಲೇ ಸಮೀಪದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರಿಂದ ಸೂಕ್ತ ಚಿಕಿತ್ಸೆಯನ್ನು ಪಡೆಯಬೇಕೆಂದರು.
ಸಮುದಾಯ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಪಿ. ಬಸವರಾಜ ಮಾತನಾಡಿ, ಕುಷ್ಟರೋಗ ಲಕ್ಷಣಗಳ ಬಗ್ಗೆ ವಿವರಿಸಿ ತಿಳಿ ಬಿಳಿ ತಾಮ್ರವರ್ಣದ ಮಚ್ಚೆಗಳು, ಚರ್ಮದ ಬಣ್ಣದಲ್ಲಿ ಯಾವುದೇ ಬದಲಾವಣೆ, ಮಚ್ಚೆಗಳ ಮೇಲೆ ದಪ್ಪನಾದ ಚರ್ಮ ಇರುವುದು, ಹೊಳೆಯುವ ಅಥವಾ ಎಣ್ಣೆಯುಕ್ತ ಮುಖದ ಚರ್ಮವಾಗಿರುವುದು, ಕಣ್ಣುಗಳ ರಪ್ಪೆ ಮುಚ್ಚಲು ಅಸಮರ್ಥತೆಯಾಗುವುದು ಸೇರಿದಂತೆ ವಿವಿಧ ಲಕ್ಷಣಗಳು ಕಂಡು ಬಂದರೆ ಇವುಗಳನ್ನು ಗುಪ್ತವಾಗಿಡದೇ ವೈದ್ಯರಿಗೆ ತೋರಿಸುವುದು, ರೋಗದ ಪ್ರಾರಂಭಿಕ ಹಂತದಲ್ಲಿಯೇ ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದು ತಿಳಿಸಿದರಲ್ಲದೆ, ಈ ರೋಗಕ್ಕೆ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಔಷಧಿ ದೊರೆಯುತ್ತದೆ.ಚಿಕಿತ್ಸೆಯು ಸರಳ ಅವಧಿ ಕೇವಲ 6 ಅಥವಾ 12 ತಿಂಗಳು ಮಾತ್ರ ಮನೆಯಲ್ಲಿಯೇ ಚಿಕಿತ್ಸೆ ಪಡೆಯಬಹುದು ಎಂದು ವಿವರಿಸಿದರು.
ನಂತರ ಕುಷ್ಟರೋಗ ಪತ್ತೆ ಹಚ್ಚುವ ಹಾಗೂ ಕುಷ್ಟರೋಗ ನಿರ್ಮೂಲನ ಅಭಿಯಾನ ಕಾರ್ಯಕ್ರಮದ ಕರಪತ್ರಗಳನ್ನು ತಹಶೀಲ್ದಾರ್ ಜೂಗಲ್ ಮಂಜುನಾಯಕ ಮತ್ತು ಅಧಿಕಾರಿಗಳು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ತಾ.ಪಂ.ಇಒ ಆರ್.ಕೆ.ಶ್ರೀಕುಮಾರ್, ಪುರಸಭೆ ಮುಖ್ಯಾಧಿಕಾರಿ ಬಿ.ಮಲ್ಲಿಕಾರ್ಜುನ, ಬಳ್ಳಾರಿ ಡಿ.ಎಲ್.ಒ.ಕಚೇರಿಯ ಪ್ರಹ್ಲಾದ್, ತಾಲ್ಲೂಕು ಮಟ್ಟದ ಅಧಿಕಾರಿಗಳು, ಆರೋಗ್ಯ ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















