ಬೆಂಗಳೂರು : ಸಂಗೀತ ಕ್ಷೇತ್ರದಲ್ಲಿ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ, ಶ್ರೀಮತಿ ಜ್ಯೋತಿ ಎಚ್ ಪಿ ರವರನ್ನು ಬೆಂಗಳೂರಿನ ಅನ್ವೇಷಣೆ ಸಾಂಸ್ಕೃತಿಕ ಅಕಾಡೆಮಿಯ ವತಿಯಿಂದ 2025ರ ಸಂಗೀತರತ್ನ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಇವರು ಪ್ರಸಿದ್ಧ ಸಂಗೀತ ಕಲಾವಿದರಾದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿದ್ದ ದಿವಂಗತ ಪಕೀರಪ್ಪನವರ ಮಗಳಾಗಿದ್ದು, ಚಿಕ್ಕಂದಿನಿಂದಲೂ ಸಂಗೀತದ ಬಗ್ಗೆ ಆಸಕ್ತಿ ಹೊಂದಿದ್ದರು. ಜಮುರಾ ನಾಟಕ ನೃತ್ಯ ಸಂಗೀತ ಶಾಲೆಯಲ್ಲಿ ಗುರುಗಳಾಗಿದ್ದ ಗಿರಿಜಾ ಹಿರೇಮಠ ಹಾಗೂ ತೋಟಪ್ಪ ಉತ್ತಂಗಿ ಅವರ ಬಳಿ ಸಂಗೀತ ಕಲಿತು, ಶಿವ ಸಂಚಾರ, ಶಿವ ದೇಶ ಸಂಚಾರ, ನೀನಾಸಂ ಮರು ತಿರುಗಾಟ ತಂಡಗಳಲ್ಲಿ ಹಿನ್ನೆಲೆ ಗಾಯಕಿಯಾಗಿ, ನಟಿಯಾಗಿ ಸೇವೆ ಸಲ್ಲಿಸಿದ್ದಾರೆ. ಗಾನಯೋಗಿ ಸಂಗೀತ ಬಳಗದ ಸದಸ್ಯರಾಗಿ ಹಲವಾರು ಸಂಗೀತ ಕಾರ್ಯಕ್ರಮ ನೀಡಿದ್ದಾರೆ. ಹಲವಾರು ಶಾಲಾ ಕಾಲೇಜುಗಳಲ್ಲಿ ಸಂಗೀತ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದಾರೆ. ಹಲವಾರು ಸಂಗೀತ ಸ್ಪರ್ಧೆಗಳಲ್ಲಿ ತೀರ್ಪುಗಾರರಾಗಿಯೂ ಪಾಲ್ಗೊಂಡಿದ್ದಾರೆ. ಜ್ಞಾನ ಪೂರ್ಣ ಶಾಲೆ-ದೊಡ್ಡ ಸಿದ್ದವನಹಳ್ಳಿ, ವಿದ್ಯಾ ವಿಕಾಸ ಶಾಲೆ-ಚಿತ್ರದುರ್ಗ, ಅನ್ಮೋಲ್ ಮತ್ತು ಅಥಣಿ ಹೈಸ್ಕೂಲ್ ದಾವಣಗೆರೆ. ಮುರಾರ್ಜಿ ದೇಸಾಯಿ ವಸತಿ ಶಾಲೆ ಕಡದಕಟ್ಟೆ- ಭದ್ರಾವತಿ ಈ ಶಾಲೆಗಳಲ್ಲಿ ಮಕ್ಕಳಿಗೆ ಸಂಗೀತ ಪಾಠ ನೀಡಿದ ಅನುಭವವಿದೆ. ಆಕಾಶವಾಣಿಯಲ್ಲಿ ಇವರ ಬಗೆಗಿನ ಸಂದರ್ಶನಗಳು ಮೂಡಿಬಂದಿವೆ. ಇದಲ್ಲದೆ ಕನ್ನಡ ನುಡಿಮುತ್ತು ಸಾಹಿತ್ಯ ವೇದಿಕೆ-ಕಲಬುರ್ಗಿ ಇವರು ಕೊಡ ಮಾಡುವ ಶರಣ ಶ್ರೀ ಪ್ರಶಸ್ತಿಯನ್ನು ಸಂಗೀತ ಕ್ಷೇತ್ರಕ್ಕಾಗಿ ಜ್ಯೋತಿ ಅವರಿಗೆ ನೀಡಿದ್ದಾರೆ. ಹಲವಾರು ಕಾರ್ಯಕ್ರಮಗಳಲ್ಲಿ ಕಚೇರಿಗಳಲ್ಲಿ ಸಂಗೀತ ಕಾರ್ಯಕ್ರಮ ನೀಡಿದ ಇವರಿಗೆ, ಬೆಂಗಳೂರಿನ ಅನ್ವೇಷಣೆ ಸಾಂಸ್ಕೃತಿಕ ಅಕಾಡೆಮಿಯು 2025ರ ಕನ್ನಡ ರಾಜ್ಯೋತ್ಸವ ಅಂಗವಾಗಿ ಕೊಡ ಮಾಡುವ *ಸಂಗೀತ ರತ್ನ ರಾಜ್ಯೋತ್ಸವ ಪ್ರಶಸ್ತಿಗೆ ಎಚ್ಪಿ ಜ್ಯೋತಿ ಅವರನ್ನು ಆಯ್ಕೆ ಮಾಡಿದ್ದಾರೆ.
- ಕರುನಾಡ ಕಂದ ಪತ್ರಿಕೆ




















