ಅಮಾನತು ಹಿಂದಿನ ನಿಜವಾದ ಕಾರಣ ಬಹಿರಂಗ
ಬಳ್ಳಾರಿ : ಹೊಸದಾಗಿ ಬಳ್ಳಾರಿಗೆ ನಿಯೋಜನೆಗೊಂಡಿದ್ದ ಎಸ್ಪಿ ಪವನ್ ನಿಜ್ಜೂರು ಅವರನ್ನು ಸರ್ಕಾರ ಅಮಾನತು ಮಾಡಿರುವ ಹಿಂದಿನ ನಿಜವಾದ ಕಾರಣ ಇದೀಗ ಬೆಳಕಿಗೆ ಬಂದಿದೆ. ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ನಿವಾಸದ ಮುಂದೆ ನಡೆದ ಘರ್ಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ರಾತ್ರಿ ಸರ್ಕಾರ ಅಮಾನತು ಆದೇಶ ಹೊರಡಿಸಿತ್ತು. ಅಮಾನತು ಆದೇಶ ಪ್ರಕಟವಾದ ತಕ್ಷಣವೇ “ರಾಜಕಾರಣಿಗಳ ತಪ್ಪಿಗೆ ಪೊಲೀಸರಿಗೆ ಶಿಕ್ಷೆ” ಎಂಬ ಟೀಕೆಗಳು ವ್ಯಕ್ತವಾಗಿದ್ದವು. ಆದರೆ ಸರ್ಕಾರದ ಮಟ್ಟಕ್ಕೆ ಸಲ್ಲಿಸಲಾದ ಆಂತರಿಕ ವರದಿಯಲ್ಲಿ ಅಮಾನತಿಗೆ ಸ್ಪಷ್ಟ ಕಾರಣಗಳು ಉಲ್ಲೇಖವಾಗಿವೆ.
ಜನವರಿ 1ರಂದು ಪವನ್ ನಿಜ್ಜೂರು ಅವರು ಬಳ್ಳಾರಿ ಎಸ್ಪಿಯಾಗಿ ಶೋಭಾರಾಣಿ ಅವರಿಂದ ಅಧಿಕಾರ ಸ್ವೀಕರಿಸಿದ್ದರು. ಅಧಿಕಾರ ಹಸ್ತಾಂತರದ ನಂತರ ಆಯೋಜಿಸಿದ್ದ ಪಾರ್ಟಿಯಲ್ಲಿ ಪವನ್ ನಿಜ್ಜೂರು ಮದ್ಯ ಸೇವಿಸಿದ್ದರು ಎನ್ನಲಾಗಿದೆ. ಇದೇ ದಿನ ಸಂಜೆ ವೇಳೆ ಶಾಸಕ ಜನಾರ್ದನ ರೆಡ್ಡಿ ನಿವಾಸದ ಮುಂದೆ ಗಲಾಟೆ ಆರಂಭವಾಗಿತ್ತು.
ಘರ್ಷಣೆ ನಡೆಯುತ್ತಿದ್ದರೂ ಎಸ್ಪಿ ಪವನ್ ನಿಜ್ಜೂರು ಸ್ಥಳಕ್ಕೆ ತೆರಳಿರಲಿಲ್ಲ. ಕಾನೂನು ಸುವ್ಯವಸ್ಥೆ ಹದಗೆಡುತ್ತಿದ್ದ ಸಂದರ್ಭದಲ್ಲಿ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡುವಲ್ಲಿಯೂ ವಿಫಲರಾಗಿದ್ದಾರೆ ಎನ್ನಲಾಗಿದೆ. ಗಲಾಟೆ ವಿಕೋಪಕ್ಕೆ ತಿರುಗಿದ ನಂತರ ಎಡಿಜಿಪಿ ಕಾನೂನು ಸುವ್ಯವಸ್ಥೆ ಆರ್. ಹಿತೇಂದ್ರ ಹಾಗೂ ಡಿಜಿ & ಐಜಿ ಸಲೀಂ ಅವರು ಫೋನ್ ಮೂಲಕ ಸಂಪರ್ಕಿಸಲು ಯತ್ನಿಸಿದರೂ ಪವನ್ ನಿಜ್ಜೂರು ಕರೆ ಸ್ವೀಕರಿಸಿರಲಿಲ್ಲ.
ಈ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿಗಳು ತಕ್ಷಣ ಚಿತ್ರದುರ್ಗ ಎಸ್ಪಿಗೆ ಸ್ಥಳಕ್ಕೆ ತೆರಳಿ ಪರಿಸ್ಥಿತಿ ನಿಯಂತ್ರಣಕ್ಕೆ ಸೂಚನೆ ನೀಡಿದ್ದರು. ನಂತರ ರಾತ್ರಿ ವೇಳೆಗೆ ಪವನ್ ನಿಜ್ಜೂರು ಸ್ಥಳಕ್ಕೆ ಭೇಟಿ ನೀಡಿದರಾದರೂ, ಆಗಾಗಲೇ ಇತರೆ ಪೊಲೀಸ್ ಅಧಿಕಾರಿಗಳು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದರು.
ಅತಿಯಾದ ಮದ್ಯಪಾನದಿಂದ ನಿಯಂತ್ರಣ ಕಳೆದುಕೊಂಡಿದ್ದ ಕಾರಣ ಪವನ್ ನಿಜ್ಜೂರು ಮಾಧ್ಯಮಗಳ ಮುಂದೆ ಕಾಣಿಸದಂತೆ ಹಿರಿಯ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಿದ್ದರು. ಈ ಎಲ್ಲಾ ಅಂಶಗಳನ್ನು ಬಳ್ಳಾರಿ ರೇಂಜ್ ಡಿಐಜಿ ವರ್ತಿಕಾ ಕಟಿಯಾರ್ ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದು, ವರದಿ ಸರ್ಕಾರದ ಗಮನಕ್ಕೆ ಬಂದ ಬಳಿಕ ಅಮಾನತು ನಿರ್ಧಾರ ಕೈಗೊಳ್ಳಲಾಗಿದೆ.
ವರದಿ ಜಾಫರ್ ಸಾದಿಕ್




















