ಕಂಪ್ಲಿ: ಕಳೆದ ಮೂರು ತಿಂಗಳಿಂದ ಉಪಟಳ ಮಾಡುತ್ತಿದ್ದ ಕರಿ ಕೋತಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಹಿಡಿದಿದ್ದು, ವಸತಿ ನಿಲಯದ ಬಾಲಕಿಯರು ನಿಟ್ಟುಸಿರು ಬಿಡುವಂತಾಗಿದೆ.
ಹೌದು. ಇಲ್ಲಿನ ಕೊಟ್ಟಾಲ್ ರಸ್ತೆಯ ಬ್ರೈಟ್ವೇ ಶಾಲೆ ಬಳಿಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯಕ್ಕೆ ಭೇಟಿ ಕೊಡುತ್ತಿದ್ದ ಕೋತಿಯು, ಇಲ್ಲಿನ ಅಡುಗೆ ಕೊಠಡಿಗೆ ನುಗ್ಗಿ ದಾಂಧಲೆ ಮಾಡಿ, ಕನ್ನಡಿ ಒಡೆದು, ಇಲ್ಲಿನ ಬಾಲಕಿಯರಿಗೆ ಭಯಪಡುವಂತೆ ಮಾಡಿತ್ತು.
ಕಳೆದ ಮೂರು ತಿಂಗಳಿಂದ ಕೋತಿಯ ಉಪಟಳಕ್ಕೆ ವಿದ್ಯಾರ್ಥಿನಿಯರು ಹಾಗೂ ಅಲ್ಲಿನ ಸಿಬ್ಬಂದಿಗಳು ಸಹ ಬೇಸತ್ತಿದ್ದರು. ಇದಕ್ಕೆ ಏನು ಮಾಡಬೇಕೆಂದು ಆಲೋಚನೆ ಮಾಡುವಂತಾಗಿತ್ತು. ಆದರೆ, ಈಗ ಇಲ್ಲಿನ ವಸತಿ ನಿಲಯಕ್ಕೆ ಕಾಟ ಕೊಡುತ್ತಿದ್ದ ಕೋತಿಯ ಉಪಟಳವನ್ನು ಅರಿತ, ವಸತಿ ನಿಲಯದ ಪಾಲಕಿ ಎಂ.ಬಿ.ಶುಭಾ ಇವರು ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದ ಹಿನ್ನಲೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ. ಅಷ್ಟೊತ್ತಿಗೆ ಇಲ್ಲಿನ ವಿದ್ಯಾರ್ಥಿನಿಯರ ಸಮಯ ಪ್ರಜ್ಞೆ ಹಾಗೂ ಚಾಣಾಕ್ಷತನದಿಂದ ಇಲ್ಲಿನ ಕೊಠಡಿಗೆ ನುಗ್ಗಿದ ಕೋತಿಯನ್ನು ಕೊಠಡಿಯಲ್ಲೇ ಲಾಕ್ ಮಾಡಿ ಕೂಡಿ ಹಾಕಿದ್ದಾರೆ. ಸ್ಥಳಕ್ಕೆ ಬಂದ ಅರಣ್ಯ ಇಲಾಖೆಯ ಪಾಲಕ ರವಿಚಂದ್ರ ನೇತೃತ್ವದಲ್ಲಿ ಸಿಬ್ಬಂದಿಗಳು ಜೇಡರ ಬಲೆ ಹಾಕಿ, ಒಂದು ತಾಸು ನಡೆಸಿದ ಕಾರ್ಯಾಚರಣೆಯಲ್ಲಿ ಕೋತಿಯನ್ನು ಹಿಡಿದು, ಕಮಲಾಪುರ ಅರಣ್ಯಕ್ಕೆ ರವಾನಿಸಿದ್ದಾರೆ. ಹೊರಗಡೆ ಇದ್ದಿದ್ದರೆ ಕೋತಿ ಸಿಗುವುದು ಕಷ್ಟವಾಗಿತ್ತು. ಆದರೆ, ವಿದ್ಯಾರ್ಥಿನಿಯರ ಚಾಣಾಕ್ಷತನಕ್ಕೆ ಅರಣ್ಯ ಸಿಬ್ಬಂದಿಗಳು ಬಾಲಕಿಯರಿಗೆ ಅಭಿನಂದಿಸಿದ ಪ್ರಸಂಗ ನಡೆಯಿತು. ಒಟ್ಟಿನಲ್ಲಿ ಕೋತಿ ಹಾವಳಿಗೆ ಭಯಭೀತಿಯಲ್ಲಿದ್ದ ಬಾಲಕಿಯರು ಈಗ ನಿಟ್ಟುಸಿರು ಬಿಟ್ಟಿದ್ದು, ಇನ್ನೇನು ಕೋತಿ ಕಾಟ ತಪ್ಪಿತ್ತು, ವಿದ್ಯಾಭ್ಯಾಸದ ಕಡೆಗೆ ಗಮನ ಹರಿಸುವದೊಂದೇ ಮುಖ್ಯ ಎನ್ನುತ್ತಿರುವುದು ಕಂಡು ಬಂತು.
ವರದಿ : ಜಿಲಾನಸಾಬ್ ಬಡಿಗೇರ್




















