ಗುರುಮಠಕಲ್: ಪಟ್ಟಣದಿಂದ ಕಾಕಲವಾರಗೆ ಹೋಗುವ ಮಾರ್ಗದಲ್ಲಿರುವ ವಾರ್ಡ್ ನಂ.17, ಸರ್ವೆ ನಂ.85ರ ಕಂದಕೂರು ಬಡಾವಣೆಯಲ್ಲಿ ನಕ್ಷೆ ಬದಲಿಸಿ ಅನಧಿಕೃತವಾಗಿ ನಿವೇಶನಗಳನ್ನು ಮಾರಾಟ ಮಾಡಲಾಗಿದೆ ಎಂಬ ಗಂಭೀರ ಆರೋಪವನ್ನು ವಿಜಯಕುಮಾರ್ ನೀರೇಟಿ ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ದಾಖಲೆಗಳೊಂದಿಗೆ ಮಂಡಿಸಿದರು.
ಸರ್ವೆ ನಂ.85ರ ಮೂಲ ಕ್ರಯ ಯೋಜನೆಯಲ್ಲಿ ಒಟ್ಟು 243 ನಿವೇಶನಗಳು ಮಾತ್ರ ಇದ್ದವು. ಆದರೆ, ಅದನ್ನು 248 ಎಂದು ತಿದ್ದುಪಡಿ ಮಾಡಿ, ಇಲ್ಲದ 5 ನಿವೇಶನಗಳನ್ನು ನಕ್ಷೆಯಲ್ಲಿ ಸೃಷ್ಟಿಸಿ ನಕಲಿ ದಾಖಲೆಗಳ ಆಧಾರದಲ್ಲಿ ಮಾರಾಟ ಮಾಡಲಾಗಿದೆ, ಇದಲ್ಲದೆ, ಈ ನಿವೇಶನಗಳಿಗೆ ಪುರಸಭೆ ಮುಖಾಂತರ ಪ್ರತಿವರ್ಷ ತೆರಿಗೆ ಸಂಗ್ರಹ ಮಾಡಲಾಗುತ್ತಿದ್ದು, ಖರೀದಿದಾರ ಮಲ್ಲಿಕಾರ್ಜುನರಾವ್ ಅವರು ಮನೆ ನಿರ್ಮಾಣಕ್ಕೆ ಮುಂದಾದಾಗ ಪುರಸಭೆಯಿಂದ ಆಕ್ಷೇಪಣೆ ನೀಡಲಾಗಿದೆ.
ನಿವೇಶನಕ್ಕೆ ಪಿಐಡಿ ಸಂಖ್ಯೆಯನ್ನೂ ಪುರಸಭೆ ಕಾರ್ಯಾಲಯದಿಂದ ನೀಡಲಾಗಿದೆ. ಆದರೂ ಏಕಾಏಕಿ ನಿವೇಶನ ಮಾನ್ಯತೆ ಕುರಿತು ಅಧಿಕಾರಿಗಳ ನಡೆ ಅನುಮಾನಾಸ್ಪದವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅನಧಿಕೃತ ನಿವೇಶನ ಮಾರಾಟದಲ್ಲಿ ಭಾಗಿಯಾದವರ ವಿರುದ್ಧ ಸಂಬಂಧ ಪಟ್ಟ ಮೇಲಾಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದರು. ಈ ಸಂದರ್ಭದಲ್ಲಿ ನಿವೇಶನ ಖರೀದಿದಾರ ಮಲ್ಲಿಕಾರ್ಜುನರಾವ್ ಹಾಗೂ ಚಂದ್ರಶೇಖರ ನಿವೃತ್ತ ಶಿಕ್ಷಕರು ಉಪಸ್ಥಿತರಿದ್ದರು.
- ಕರುನಾಡ ಕಂದ ಪತ್ರಿಕೆ




















