ಬೆಂಗಳೂರು: ವ್ಯಕ್ತಿಗಿಂತಲೂ ನಾವು ನಿಜವಾಗಿಯೂ ಬೆಲೆ ಕೊಡಬೇಕಾದ್ದು ವ್ಯಕ್ತಿತ್ವಕ್ಕೆ, ಯಾರದೇ ಪರಿಚಯವಾಗಬೇಕಾದ್ದು ಅವರ ವ್ಯಕ್ತಿತ್ವ, ಸಾಧನೆಗಳಿಂದಲೇ ಹೊರತು ಅವರ ಕೌಟುಂಬಿಕ ಹಿನ್ನೆಲೆಯಿಂದ ಅಲ್ಲ, ಹೀಗೆಂದು ನುಡಿದವರು ಪ್ರಖ್ಯಾತ ವಾಗ್ಮಿ ಎಸ್ ಎನ್ ಸೇತುರಾಂ. ಅವರು ಮಾತಿನ ಮನೆಯ 124ನೆಯ ಕಾರ್ಯಕ್ರಮದಲ್ಲಿ ವ್ಯಕ್ತಿ-ವ್ಯಕ್ತಿತ್ವ ಕುರಿತಾಗಿ ತಮ್ಮ ಸುದೀರ್ಘ ವಿಚಾರಧಾರೆ ಹರಿಸಿ, ತಮ್ಮ ಮಾತಿನ ಮೋಡಿಯಿಂದ ನೆರೆದವರನ್ನು ಆಕರ್ಷಿಸಿದರು.
ಆರಂಭದಲ್ಲಿ ಸ್ವಾಗತ ಮತ್ತು ಪ್ರಾಸ್ತಾವಿಕ ನುಡಿಗಳನ್ನಾಡಿದ ಮಾತಿನಮನೆಯ ರಾ ಸು ವೆಂಕಟೇಶ ಅವರು ಸೇತುರಾಂ ಅವರು ನಟರಾಗಿ, ನಿರ್ದೇಶಕರಾಗಿ, ಬರಹಗಾರರಾಗಿ ಮತ್ತು ವಾಗ್ಮಿಗಳಾಗಿ ನಾಡಿನಾದ್ಯಂತ ತಮ್ಮ ನೇರ ಮತ್ತು ನಿಷ್ಟುರ ಮಾತುಗಳಿಗೆ ಹೆಸರಾದವರೆಂದು ತಿಳಿಸಿ, ಬರುವ ಮಾರ್ಚ್ 8 ರಂದು ಮಾತಿನಮನೆಗೆ ಆರು ವರ್ಷಗಳು ತುಂಬಲಿದೆಯೆಂದೂ ಹಾಗೂ ಅಂದೇ 125ನೆಯ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಲಾಗುವುದೆಂದೂ ತಿಳಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಮಾತಿನಮನೆಯ ಪರವಾಗಿ ಶ್ರೀ ಸೇತುರಾಂ ಅವರನ್ನು ಗೌರವಿಸಲಾಯಿತು.
ನಾಡಗೀತೆಯೊಂದಿಗೆ ಆರಂಭವಾದ ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ರಾಧಾ ಕೇಶವ್ ನಿರ್ವಹಿಸಿದರು.
ವರದಿ: ಕೊಡಕ್ಕಲ್ ಶಿವಪ್ರಸಾದ್



















