ಬಳ್ಳಾರಿ / ಕಂಪ್ಲಿ : ಏತನೀರಾವರಿ ಯೋಜನೆಯಿಂದ ಗ್ರಾಮೀಣ ಭಾಗದ ರೈತರ ಜಮೀನುಗಳಿಗೆ ನೀರಿನ ಅನುಕೂಲವಾಗುವ ಜೊತೆಗೆ ಉತ್ತಮ ಬದುಕಿಗೆ ದಾರಿಯಾಗುತ್ತದೆ ಎಂದು ಕಂಪ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಶ್ರೀನಿವಾಸರಾವ್ ಅಭಿಪ್ರಾಯ ಪಟ್ಟರು.
ತಾಲೂಕಿನ ಹಂಪಾದೇವನಹಳ್ಳಿ ಗ್ರಾಮದಲ್ಲಿ ಏತನೀರಾವರಿ ಯೋಜನೆ ಕಾಮಗಾರಿಗೆ ಶನಿವಾರ ಅಡಿಗಲ್ಲು ಪೂಜೆ ಸಲ್ಲಿಸಿದ ನಂತರ ಮಾತನಾಡಿ, ಹೊನ್ನಳ್ಳಿ, ಹಂಪಾದೇವನಹಳ್ಳಿ ಭಾಗದಲ್ಲಿರುವ ಎಸ್ ಸಿ, ಎಸ್ ಟಿ ರೈತರ ಜಮೀನುಗಳಿಗೆ ನೀರು ಒದಗಿಸುವ ಹಿತದೃಷ್ಠಿಯಿಂದ ಏತನೀರಾವರಿ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲಾಗಿದೆ. ಇದರಿಂದ ಈ ಭಾಗದ ರೈತರಿಗೆ ಬಹಳಷ್ಟು ಅನುಕೂಲವಾಗಲಿದೆ. ಇದರ ಸದುಯೋಗದೊಂದಿಗೆ ಉತ್ತಮ ಬೆಳೆಗಳನ್ನು ಬೆಳೆಯುವ ಮೂಲಕ ಆರ್ಥಿಕವಾಗಿ ಸಬಲರಾಗಬೇಕು ಎಂದರು.
ಸಣ್ಣ ನೀರಾವರಿ ಇಲಾಖೆಯ ಎಇ ವಿಜಯಕುಮಾರ ಮಾತನಾಡಿ, ಏತನೀರಾವರಿ ಮೂಲಕ ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡದ ರೈತರ ಜಮೀನುಗಳಿಗೆ ಸಮರ್ಪಕವಾಗಿ ನೀರು ಒದಗಿಸಲಾಗುತ್ತದೆ. ಹೊನ್ನಳ್ಳಿ ಗ್ರಾಮದಲ್ಲಿ ಪರಿಶಿಷ್ಟ ಜಾತಿಯ ರೈತರ 55 ಎಕರೆ ಜಮೀನುಗಳಿಗೆ ನೀರು ಒದಗಿಸುವ ನಿಟ್ಟಿನಲ್ಲಿ ಸುಮಾರು 55 ಲಕ್ಷ ವೆಚ್ಚದ ಏತನೀರಾವರಿ ಕಾಮಗಾರಿಗೆ ಚಾಲನೆ ಸಿಕ್ಕಿದೆ. ಮತ್ತು ಹಂಪದೇವನಹಳ್ಳಿ ಗ್ರಾಮದಲ್ಲಿ ಪರಿಶಿಷ್ಟ ಪಂಗಡದ ರೈತರ 20 ಎಕರೆ ಜಮೀನುಗಳಿಗೆ ಸುಮಾರು 12 ಲಕ್ಷ ವೆಚ್ಚದಲ್ಲಿ ಮತ್ತು ಪರಿಶಿಷ್ಟ ಜಾತಿಯ ರೈತರ 15 ಎಕರೆ ಜಮೀನುಗಳಿಗೆ ಸುಮಾರು 27 ಲಕ್ಷ ವೆಚ್ಚದ ಏತನೀರಾವರಿ ಯೋಜನೆಯಾಗಿದೆ. ಒಟ್ಟಾರೆಯಾಗಿ ಟಿಸಿಪಿ, ಟಿಎಸ್ಪಿ ಯೋಜನೆಯಡಿ ಸುಮಾರು 94 ಲಕ್ಷ ವೆಚ್ಚದ ಏತನೀರಾವರಿ ಮಾಡಲಾಗುತ್ತಿದೆ ಎಂದರು.
ನಂತರ ಹಂಪಾದೇವನಹಳ್ಳಿ ಗ್ರಾಮದಲ್ಲಿ ಏತನೀರಾವರಿ ಯೋಜನೆ ಕಾಮಗಾರಿಗೆ ಬ್ಲಾಕ್ ಅಧ್ಯಕ್ಷ ಕೆ.ಶ್ರೀನಿವಾಸರಾವ್ ಶಂಕುಸ್ಥಾಪನೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಸೈಟ್ ಇಂಜಿನಿಯರ್ ವಿಶ್ವಜೀತ್ ಪಾಟೀಲ್, ಹೊನ್ನಳ್ಳಿ ಗ್ರಾಮದ ಮುಖಂಡರಾದ ಓಂಕಾರಗೌಡ, ದೇವರಾಜ, ಸುಬಾನ್ಸಾಬ್, ಸಿದ್ದರಾಮಣ್ಣ, ದೇವಣ್ಣ, ನಾಗರಾಜ, ಬಾಳಪ್ಪ, ಹಂಪಾದೇವನಹಳ್ಳಿಯ ಎ.ಹುಲುಗಪ್ಪ, ಗುರುಮೂರ್ತಿ, ಇಟಗಿ ಬಸಪ್ಪ, ಮಲ್ಲಯ್ಯ, ಗಿರಿಯಪ್ಪ, ಹರಿಜನ ಹುಲುಗಪ್ಪ, ಅಂಜಿನಿ, ವಿರೇಶ, ವೆಂಕಟೇಶ, ಕೆ.ರಾಮಾಂಜಿನಿ, ಪಂಪನಗೌಡ ಸೇರಿದಂತೆ ಅನೇಕರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















