ಹುಬ್ಬಳ್ಳಿ: ಬೆಂಬಲ ಬೆಲೆಯಲ್ಲಿ ಹೆಸರು ಖರೀದಿಸಿ ತಿಂಗಳು ಕಳೆದರೂ ಹಣ ನೀಡದ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಕಚೇರಿ ಎದುರು ‘ರೈತ ಸೇನಾ ಕರ್ನಾಟಕ’ ಸಂಘಟನೆ ನೇತೃತ್ವದಲ್ಲಿ ರೈತರು ಅಹೋರಾತ್ರಿ ಧರಣಿ ಆರಂಭಿಸಿದ್ದಾರೆ.
ಧಾರವಾಡ ಜಿಲ್ಲೆಯ ಬ್ಯಾಹಟ್ಟಿ ಖರೀದಿ ಕೇಂದ್ರದಲ್ಲಿ 95 ರೈತರಿಂದ 86,84,704 ರೂ. ಮೌಲ್ಯದ 990.5 ಕ್ವಿಂಟಲ್ ಹೆಸರು ಖರೀದಿಸಿ, ನರಗುಂದ ಗೋದಾಮಿಗೆ ಕಳುಹಿಸಲಾಗಿತ್ತು. ಆದರೆ, ಒಂದು ತಿಂಗಳ ಬಳಿಕ ಗುಣಮಟ್ಟದ ನೆಪವೊಡ್ಡಿ ಇದನ್ನು ತಿರಸ್ಕರಿಸಲಾಗಿತ್ತು. ಜಿಲ್ಲಾಡಳಿತದ ತನಿಖೆಯಲ್ಲಿ ಖರೀದಿ ಕೇಂದ್ರದ ಸಿಬ್ಬಂದಿಯೇ ತಪ್ಪು ಎಸಗಿದ್ದು, ರೈತರಿಗೆ ತಕ್ಷಣ ಹಣ ಪಾವತಿಸುವಂತೆ ಉಪವಿಭಾಗಾಧಿಕಾರಿಗಳು ವರದಿ ನೀಡಿ ನಾಲೈದು ತಿಂಗಳಾದರೂ ಇನ್ನೂ ಹಣ ಕೈ ಸೇರದಿದ್ದಕ್ಕೆ ರೈತರು ಕಂಗಾಲಾಗಿದ್ದಾರೆ.
ಪ್ರತಿಭಟನಾ ಸ್ಥಳಕ್ಕೆ ತಹಸೀಲ್ದಾರ್ ಮಹೇಶ ಗಸ್ತಿ ಭೇಟಿ ನೀಡಿ, ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಸಭೆ ಆಯೋಜಿಸುವುದಾಗಿ ತಿಳಿಸಿ ಧರಣಿ ಕೈಬಿಡಲು ವಿನಂತಿಸಿದರು. ಆದರೆ ರೈತರು ಪರಿಹಾರ ಸಿಗುವವರೆಗೂ ಕದಲುವುದಿಲ್ಲ ಎಂದು ಪಟ್ಟು ಹಿಡಿದರು. ಇದೇ ವೇಳೆ ಮಹಾಮಂಡಳದ ಪ್ರಾದೇಶಿಕ ವ್ಯವಸ್ಥಾಪಕ ಮಲ್ಲಿಕಾರ್ಜುನ ಮಲ್ಲಮ್ಮನವರ ಅವರನ್ನು ರೈತರು ತರಾಟೆಗೆ ತೆಗೆದುಕೊಂಡರು. ಆದರೆ, ಇದಕ್ಕೆ ಸೊಸೈಟಿ ಆಡಳಿತ ಮಂಡಳಿಯೇ ಕಾರಣ ಎಂದು ಅವರು ಸಮರ್ಥಿಸಿಕೊಂಡರು.
ಧರಣಿಯಲ್ಲಿ ರೈತಸೇನಾ ಅಧ್ಯಕ್ಷ ವೀರೇಶ ಸೊಬರದಮಠ, ರಾಜ್ಯ ವಕ್ತಾರ ಗುರು ರಾಯನಗೌಡ್ರ, ಪ್ರಮುಖರಾದ ವಿರೂಪಾಕ್ಷಿ ಪಾಯನ್ನವರ, ಅಶೋಕ ಮತ್ತಿಹಳ್ಳಿ, ಜಗದೀಶ ರೂಗಿ, ಅಶೋಕ ನವಲೂರ, ಬಸವರಾಜ ಗಿಡ್ಡನ್ನವರ, ಸುಭಾಷ ಕೊಂಡಿಕೊಪ್ಪ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.




















