ಸಣಾಪುರ ವೀರಭದ್ರೇಶ್ವರ ಸೇರಿದಂತೆ ತಾಲ್ಲೂಕಿನಾದ್ಯಂತ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಹಾಗೂ ಮಳೆಗಾಗಿ ಪ್ರಾರ್ಥನೆ ಜರುಗಿತು.
ಬಳ್ಳಾರಿ / ಕಂಪ್ಲಿ : ಸಣಾಪುರ ಗ್ರಾಮದ ಆರಾಧ್ಯ ದೇವರಾದ ಶ್ರೀ ಉದ್ಭವ ವೀರಭದ್ರೇಶ್ವರ ಸ್ವಾಮಿ ಸೇರಿದಂತೆ ಕಂಪ್ಲಿ ಪಟ್ಟಣ ಹಾಗೂ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ದೇವಸ್ಥಾನಗಳಲ್ಲಿ ದೇವರಿಗೆ ವಿವಿಧ ಅಬಿಷೇಕಗಳು, ವಿಶೇಷ ಅಲಂಕಾರಗಳು ಸೇರಿದಂತೆ ಮಹಾಪೂಜೆಗಳು ನಡೆದವಲ್ಲದೆ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಮಳೆಗಾಗಿ ವಿಶೇಷ ಪ್ರಾರ್ಥನೆಗಳು ಶ್ರಧ್ಧೆ,ಭಕ್ತಿ ಸಡಗರ ಸಂಭ್ರಮಗಳಿಂದ ಜರುಗಿದವು.
ಸಣಾಪುರ ಗ್ರಾಮದ ಲಿಂಗರೂಪದ ಶ್ರೀ ಉದ್ಬವ ವೀರಭದ್ರಸ್ವಾಮಿಗೆ ವಿವಿಧ ಅಭಿಷೇಕಗಳು. ಸಹಸ್ರ ಬಿಲ್ವಾರ್ಚನೆ ನಡೆಯಿತು. ಸ್ವಾಮಿಗೆ ಬೆಳ್ಳಿ, ಚಿನ್ನಾಭರಣಗಳಿಂದ ಹಾಗೂ ವಿವಿಧ ಹೂಗಳಿಂದ ಅಲಂಕರಿಸಿ ಮಹಾಮಂಗಳಾರತಿ ಮಾಡಲಾಯಿತು. ದೇಗುಲದ ಆವರಣದಲ್ಲಿ ಸ್ಥಳೀಯರು, ಸೇರಿದಂತೆ ವಿವಿಧ ಗ್ರಾಮಗಳು, ವಿವಿಧ ಜಿಲ್ಲೆಗಳು ಮತ್ತು ಬೇರೆ ಬೇರೆ ರಾಜ್ಯಗಳಿಂದ ಆಗಮಿಸಿದ ಸಕಲ ಸದ್ಭಕ್ತರಿಗೆ ಅನ್ನಸಂತರ್ಪಣೆ ಜರುಗಿತು. ರಾತ್ರಿ ರ್ದೇವಸ್ಥಾನದ ಆವರಣದಲ್ಲಿ ಸ್ವಾಮಿಯ ಕಿರು ರಥೋತ್ಸವ ಹಾಗೂ ಭಜನಾ ಕಾರ್ಯಕ್ರಮಗಳು ಜರುಗಿದ ನಂತರ ರಾತ್ರಿಯೂ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು.
ಪಟ್ಟಣದ ಶ್ರೀಪೇಟೆ ಬಸವೇಶ್ವರ, ಕೂಲಿಕಟ್ಟೆ ಬಸವೇಶ್ವರ,ದೇವಾಂಗ ಸಮಾಜದ ರಾಮಲಿಂಗೇಶ್ವರ, ಐತಿಹಾಸಿಕ ಸೋಮೇಶ್ವರ, ಸಕ್ಕರೆ ಕಾರ್ಖಾನೆಯ ಮುಕ್ತಿ ನಾಥೇಶ್ವರ ಹಾಗೂ ತಾಲ್ಲೂಕಿನ ವಿವಿಧ ಗ್ರಾಮಗಳ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಜರುಗಿದರೆ, ಕಂಪ್ಲಿ ಕೋಟೆಯ ಐತಿಹಾಸಿಕ ಪಂಪಾಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಅನ್ನಸಂತರ್ಪಣೆ ಮತ್ತು ಪಟ್ಟಣದ ವಿನಾಯಕ ನಗರದ ಗೌಸದ್ರ ಮಾರೆಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಮತ್ತು ಅನ್ನಸಂತರ್ಪಣೆ ನಡೆಯಿತು.
ವರದಿ : ಜಿಲಾನಸಾಬ್ ಬಡಿಗೇರ್




















