ಕೊಪ್ಪಳ : ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲ್ಲೂಕಿನ ಕಾಚಾಪುರ ಗ್ರಾಮದ ವಿಶೇಷಚೇತನ ಚೇತನ ಈರಣ್ಣ ಕುಂಬಾರ ಅವರಿಗೆ ಅಭಿನಂದನೆಗಳು.
ಕೊಪ್ಪಳ ಜಿಲ್ಲೆಯ ಆನೆಗುಂದಿ ಸಮೀಪವಿರುವ, ಹನುಮಂತನ ಜನ್ಮಸ್ಥಳ ಆಂಜನಾದ್ರಿ ಬೆಟ್ಟವನ್ನು ಹತ್ತುವುದು ಸಾಮಾನ್ಯ ಜನರಿಗೇ ದೊಡ್ಡ ಸವಾಲು. ಸುಮಾರು ೫೭೫ ಕಡಿದಾದ ಮೆಟ್ಟಿಲುಗಳನ್ನು ಹೊಂದಿರುವ ಈ ಪರ್ವತವನ್ನು ಏರಲು ದೈಹಿಕ ಶಕ್ತಿಗಿಂತಲೂ ಮಿಗಿಲಾಗಿ ಅಚಲವಾದ ವಿಶ್ವಾಸ ಬೇಕು. ಇಂತಹ ಕಠಿಣ ಸವಾಲನ್ನು ಮೆಟ್ಟಿ ನಿಂತು, ತಮ್ಮ ದೈಹಿಕ ವಿಕಲಚೇತನತೆಯನ್ನೂ ಲೆಕ್ಕಿಸದೆ ಆಂಜನಾದ್ರಿ ಬೆಟ್ಟವನ್ನು ಯಶಸ್ವಿಯಾಗಿ ಏರಿರುವ ಈರಣ್ಣ ಸಲಬಣ್ಣ ಕುಂಬಾರ ಅವರ ಸಾಧನೆ ನಿಜಕ್ಕೂ ರೋಮಾಂಚನಕಾರಿ ಮತ್ತು ಇಡೀ ಸಮಾಜಕ್ಕೆ ಪ್ರೇರಣಾದಾಯಕವಾಗಿದೆ.
ವಿಕಲಚೇತನತೆ ಎನ್ನುವುದು ಕೇವಲ ದೇಹಕ್ಕಷ್ಟೇ ಹೊರತು ಸಾಧಿಸುವ ಮನಸ್ಸಿಗಲ್ಲ ಎಂಬುದನ್ನು ಈರಣ್ಣ ಅವರು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ದೈಹಿಕ ಸವಾಲುಗಳ ನಡುವೆಯೂ ಬೆಟ್ಟದ ಒಂದೊಂದೇ ಮೆಟ್ಟಿಲುಗಳನ್ನು ಹತ್ತುತ್ತಾ, ಆಂಜನೇಯನ ದರ್ಶನ ಪಡೆದ ಇವರ ಈ ಅದಮ್ಯ ಸಾಹಸ ಮತ್ತು ಭಕ್ತಿ ಸಾರ್ವಜನಿಕರ ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ. ಅನೇಕರು ದೈಹಿಕವಾಗಿ ಸದೃಢರಾಗಿದ್ದರೂ ಸಣ್ಣಪುಟ್ಟ ಕಷ್ಟಗಳಿಗೇ ಧೃತಿಗೆಡುವ ಇಂದಿನ ದಿನಗಳಲ್ಲಿ, ಈರಣ್ಣ ಸಲಬಣ್ಣ ಕುಂಬಾರ ಅವರ ಈ ಸಾಧನೆ ಪ್ರತಿಯೊಬ್ಬರಿಗೂ “ನಮ್ಮಿಂದ ಜಗತ್ತಿನಲ್ಲಿ ಅಸಾಧ್ಯವಾದದ್ದು ಯಾವುದೂ ಇಲ್ಲ” ಎಂಬ ಧನಾತ್ಮಕ ಸಂದೇಶವನ್ನು ಸಾರುತ್ತದೆ.
ಅಂಗವೈಕಲ್ಯವನ್ನು ಮೆಟ್ಟಿ ನಿಂತು, ಆತ್ಮವಿಶ್ವಾಸದ ಶಿಖರವನ್ನು ಏರಿದ ಈ ನಾಡಿನ ಹೆಮ್ಮೆಯ ಚೇತನ ಶ್ರೀ ಈರಣ್ಣ ಸಲಬಣ್ಣ ಕುಂಬಾರ ಅವರಿಗೆ ಹಾರ್ದಿಕ ಅಭಿನಂದನೆಗಳು. ಇವರ ಮುಂದಿನ ಜೀವನ ಸುಖಕರವಾಗಿರಲಿ ಮತ್ತು ಇವರ ಸಾಧನೆಯ ಪಯಣ ಹೀಗೆಯೇ ಮುಂದುವರಿಯಲಿ ಎಂದು ಆಶಿಸೋಣ.
”ಛಲವೊಂದಿದ್ದರೆ ಬೆಟ್ಟವೂ ಬಾಗುವುದು ಎಂಬುದಕ್ಕೆ ಈರಣ್ಣ ಅವರೇ ಪ್ರತ್ಯಕ್ಷ ಸಾಕ್ಷಿ!”.
ಗೆಳೆಯರಾದ ಮಲ್ಲಣ್ಣ ಅಗಸರ ,ದೇವು ಪೂಜಾರಿ ಶರಣಗೌಡ ಗೌರ,ಮೌನೇಶ ಕುಂಬಾರ ಅವರು ಈರಣ್ಣ ಅವರ ಸಾಧನೆಗೆ ಸಾಥ್ ನೀಡಿದರು.
ವರದಿ ಆರ್. ಎಸ್. ಹಿರೇಮಠ




















