ಬಳ್ಳಾರಿ / ಕಂಪ್ಲಿ: ಕ್ಷೇತ್ರದ ಜನರ ನಾಡಿ ಮಿಡಿತದೊಂದಿಗೆ ಜನಪರ ಸೇವೆ ಮಾಡಿಕೊಂಡು ಬಂದಿರುವ ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಇವರಿಗೆ ಸಚಿವ ಸ್ಥಾನ ಹಾಗೂ ಮಾಜಿ ಸಚಿವ ಝಡ್ ಜಮೀರ್ ಅಹ್ಮದ್ ಇವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಬುದ್ಧ, ಬಸವ, ಅಂಬೇಡ್ಕರ್ ವಾದ)ಯ ಜಿಲ್ಲಾ ಉಪಾಧ್ಯಕ್ಷ ಕರಡಿ ವಲಿಸಾಬ್ ಒತ್ತಾಯಿಸಿದರು.
ಅವರು ಪಟ್ಟಣದಲ್ಲಿ ಶನಿವಾರ ಪತ್ರಿಕಾ ಪ್ರಕಟಣೆ ನೀಡಿ ಮಾತನಾಡಿ, ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅವಧಿಯಲ್ಲಿ ಪಂಚ ಗ್ಯಾರಂಟಿ ಮೂಲಕ ಜನರ ಬದುಕಿಗೆ ಸರ್ಕಾರ ಆಸರೆಯಾಗಿದೆ. ಕಂಪ್ಲಿ ಸೇರಿದಂತೆ ರಸ್ತೆ, ಬೀದಿ ದೀಪ ಹಾಗೂ ಇನ್ನಿತರ ಅಭಿವೃದ್ಧಿ ಕಾರ್ಯಗಳೊಂದಿಗೆ ಜನರೊಂದಿಗೆ ಶಾಸಕ ಗಣೇಶ್ ಅವರು ಬೆರೆತ್ತಿದ್ದಾರೆ. ಇವರು ಅಭಿವೃದ್ಧಿ ಕಾರ್ಯಗಳು ಜನರನ್ನು ಮೆಚ್ಚಿಸಿದೆ. ಮತ್ತು ಜನನಾಯಕ ಝಡ್ ಜಮೀರ್ ಅಹ್ಮದ್ ಇವರು ವಿಜಯನಗರ (ಹೊಸಪೇಟೆ) ಜಿಲ್ಲೆ ಒಳಗೊಂಡಂತೆ ಅಖಂಡ ಬಳ್ಳಾರಿ ಜಿಲ್ಲಾ ಸಚಿವರಾಗಿ ಸಾಕಷ್ಟು ಅಭಿವೃದ್ಧಿ ಕಾರ್ಯದೊಂದಿಗೆ ಸರ್ಕಾರದ ಯೋಜನೆಗಳನ್ನು ಜನತೆಗೆ ಕಲ್ಪಿಸಿದ ಶ್ರೇಯಸ್ಸು ಸಲ್ಲುತ್ತದೆ. ಮತ್ತು ಕಳೆದ ವರ್ಷದ ಮುಂಗಾರು ಹಂಗಾಮಿನಲ್ಲಿ ರೈತರ ಜೀವನಾಡಿ ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಕಟ್ ಆಗಿ ಅಪಾರ ನೀರು ಪೋಲಾಗಿತ್ತು. ಮತ್ತು ಅಪಾಯದ ಅಂಚಿನಲ್ಲಿತ್ತು. ಆದರೆ, ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದಲ್ಲಿದ್ದುಕೊಂಡು ಜಮೀರ್ ಅಹ್ಮದ್ ಅವರು ಜಲಾಶಯಕ್ಕೆ ಭೇಟಿ ನೀಡಿ, ತುರ್ತಾಗಿ ನೀರು ತಡೆಯುವ ಕ್ರಮ ವಹಿಸಿದ್ದರು. ಮತ್ತು ಹೊಸ ಕ್ರಸ್ಟ್ ಗೇಟ್ ಅಳವಡಿಕೆಯಲ್ಲಿ ಅವರ ಪಾತ್ರ ದೊಡ್ಡದಿದೆ. ಜಿಲ್ಲೆ ಸೇರಿದಂತೆ ರಾಜ್ಯದ ಎಲ್ಲಾ ವರ್ಗದ ಜನರ ಸಂಕಷ್ಟಗಳಿಗೆ ಸ್ಪಂದಿಸಿ, ಸೈ ಎನ್ನಿಸಿಕೊಂಡಿದ್ದಾರೆ. ಆದ್ದರಿಂದ ಇಂದಿನ ಸರ್ಕಾರದಲ್ಲಿ ಡಿಸಿಎಂ ಸ್ಥಾನವನ್ನು ಮಾಜಿ ಸಚಿವ ಜಮೀರ್ ಅಹ್ಮದ್ ಇವರಿಗೆ ನೀಡಬೇಕು. ಇಲ್ಲವಾದಲ್ಲಿ ಮುಂದಿನ ದಿನದಲ್ಲಿ ಕಾಂಗ್ರೆಸ್ ಪಕ್ಷ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಸಿ.ಬಸವರಾಜ, ಉಪಾಧ್ಯಕ್ಷ ಮೆಟ್ರಿ ಸೋಮಪ್ಪ, ಗೌರವಾಧ್ಯಕ್ಷ ಚಂದ್ರಶೇಖರ, ತಾಲೂಕು ಯುವ ಘಟಕ ಅಧ್ಯಕ್ಷ ಜಾಫರ್ಸಾಭ್, ಹಮಾಲಿ ಸಂಘದ ಗೌರವಾಧ್ಯಕ್ಷ ಬಾಲಪ್ಪ, ಮುಖಂಡ ಅಂಜಿನಪ್ಪ, ಪದಾಧಿಕಾರಿಗಳು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















