ಬಳ್ಳಾರಿ / ಕಂಪ್ಲಿ : ನಿವೃತ್ತ ನೌಕರರು ವೃತ್ತಿಯಿಂದ ನಿವೃತ್ತಿಯಾಗಿದ್ದೇವೆಂದು ಜೀವನದಲ್ಲಿ ಕೀಳಿರಿಮೆ ಬೆಳೆಸಿಕೊಳ್ಳದೇ ಕುಟುಂಬದೊಂದಿಗೆ ಉತ್ತಮ ಜೀವನ ನಡೆಸಬೇಕು ಎಂದು ಕಂಪ್ಲಿ ಅಂಚೆ ಕಚೇರಿಯ ಪೋಸ್ಟ್ ಮಾಸ್ಟಾರ್ ನಾಗರತ್ನ ಅಭಿಪ್ರಾಯಪಟ್ಟರು.
ಅವರು ಪಟ್ಟಣದ ಐತಿಹಾಸಿಕ ಸೋಮೇಶ್ವರ ದೇವಸ್ಥಾನದ ಆವರಣದಲ್ಲಿ ಅಂಚೆ ಕಚೇರಿ ಸಿಬ್ಬಂದಿಗಳು ಆಯೋಜಿಸಿದ್ದ ಅಂಚೆ ಕಚೇರಿಯ ನಿವೃತ್ತ ನೌಕರರಿಗೆ ಹೃದಯ ಸ್ಪರ್ಶಿ ಬೀಳ್ಕೊಡುಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಜ್ಯ ಅಥವಾ ಕೇಂದ್ರ ಸರ್ಕಾರಿ ನೌಕರರು ನಾಲ್ಕು ದಶಕಗಳ ಸೇವೆ ಸಲ್ಲಿಸಿ ನಿವೃತ್ತ್ತಿಯಾಗುವುದು ಮನಸ್ಸಿಗೆ ನೋವನ್ನುಂಟುಮಾಡುತ್ತದೆ. ಯಾಕೆಂದರೆ ಪ್ರತಿದಿನ ಸಹೋದ್ಯೋಗಿಗಳೊಂದಿಗೆ, ಸಾರ್ವಜನಿಕರೊಂದಿಗೆ ನಿರಂತರ ಒಡನಾಟ ಇರುವವರು ಕೂಡಲೇ ನಿವೃತ್ತಿಯಾಗುವುದು ಮನಸ್ಸಿಗೆ ಕಸಿವಿಸಿ ಉಂಟುಮಾಡುತ್ತದೆ. ಆದರೆ, ನಿವೃತ್ತ ನೌಕರರು ನಿವೃತ್ತಿಯಾಗಿದ್ದೇವೆನ್ನುವ ಕೀಳಿರಿಮೆ ಬೆಳೆಸಿಕೊಳ್ಳದೇ ತಮ್ಮ ಸುಧೀರ್ಘ ಅನುಭವವನ್ನು ತಮ್ಮ ಸಹೋದ್ಯೋಗಿಗಳೊಂದಿಗೆ ಹಂಚಿಕೊಳ್ಳುವ ಮೂಲಕ ಹಾಗೂ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವ ಜೊತೆಗೆ ಕುಟುಂಬದೊಂದಿಗೆ ನೆಮ್ಮದಿಯ ಜೀವನ ಕಳೆಯಬೇಕೆಂದರು.
ಅಂಚೆ ಇಲಾಖೆಯ ದೇವಲಾಪುರ ಅಂಚೆಕಚೇರಿಯಲ್ಲಿ 42 ವರ್ಷ ಸೇವೆ ಸಲ್ಲಿಸಿದ ಬಿಪಿಎಂ, ಮೆಟ್ರಿಯ ಎಚ್.ಎಂ.ಪ್ರಭಾಕರಸ್ವಾಮಿ, ಕಂಪ್ಲಿ ಕೋಟೆಯಲ್ಲಿ ಸುಮಾರು 43 ವರ್ಷಗಳ ಸೇವೆಸಲ್ಲಿಸಿದ ಬಿಪಿಎಂಎಸ್.ಎ.ಮಲ್ಲಿಕಾರ್ಜುನಸ್ವಾಮಿ ಇವರನ್ನು ಇಲಾಖೆಯ ಪರವಾಗಿ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಟ್ಟರು.
ಕಾರ್ಯಕ್ರಮದಲ್ಲಿ ದೇವಲಾಪುರ ಅಂಚೆ ಕಚೇರಿಯ ಪೋಸ್ಟ್ ಮಾಸ್ಟಾರ್ ದೀಪಾ, ಅಂಚೆ ಕಚೇರಿಯ ಅಂಚೆ ಮೇಲ್ವಿಚಾರಕರಾದ ಆರ್.ಎಂ.ಸೋಮಶೇರಯ್ಯ, ಕೆ.ನಾಗರಾಜ, ಸಿರಗುಪ್ಪ ಉಪವಿಭಾಗದ ಓ.ಎ.ರಾಮರೆಡ್ಡಿ, ಎಂಇ ಬಸವರಾಜ್, ಆರೋಗ್ಯ ನಿರೀಕ್ಷಕ ರ್ರಿಸ್ವಾಮಿ, ಗಾದಿಲಿಂಗಪ್ಪ, ಮಹಾನಂದಿ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಂಎಸ್.ಗಂಗಾಧರಯ್ಯಸ್ವಾಮಿ ಹಾಗೂ ಮೆಟ್ರಿ, ಕಂಪ್ಲಿ, ಕೋಟೆ, ರಾಮಸಾಗರ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳ ಅಂಚೆಕಚೇರಿ ಸಿಬ್ಬಂದಿಗಳು, ಸಾರ್ವಜನಿಕರು, ಭಾಗವಹಿಸಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















