ಬಳ್ಳಾರಿ / ಕಂಪ್ಲಿ : ರಾಜ್ಯದಲ್ಲಿ ಅರ್ಹರಿಗೆ ಪಂಚ ಗ್ಯಾರಂಟಿ ಯೋಜನೆಗಳನ್ನು ತಲುಪಿಸಲು ಪುನರ್ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ಕೆ.ಶ್ರೀನಿವಾಸರಾವ್ ಹೇಳಿದರು.
ತಾಲೂಕಿನ ನಂ.10 ಮುದ್ದಾಪುರ ಗ್ರಾ. ಪಂ. ಯ ಕಣವಿ ತಿಮ್ಮಲಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2025-26ನೇ ಸಾಲಿನ ರಾಜ್ಯ ಹಣಕಾಸು ಆಯೋಗದ ತಾಲ್ಲೂಕು ಪಂಚಾಯತ್ ಯೋಜನೆಯಡಿ ಸುಮಾರು 15 ಲಕ್ಷ ವೆಚ್ಚದಲ್ಲಿ ನಿರ್ಮಿಸಲಿರುವ ಒಂದು ಶಾಲಾ ಕೊಠಡಿ ಕಾಮಗಾರಿಗೆ ಭಾನುವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಕಳೆದ ಎರಡೂವರೆ ವರ್ಷ ಸತತವಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ತಲುಪಿಸಲಾಗಿದೆ. ಆದರೆ, ಈಗ ಅರ್ಹ ಫಲಾನುಭವಿಗಳಿಗೆ ಯೋಜನೆಗಳನ್ನು ನೀಡಬೇಕೆಂಬ ದೃಷ್ಠಿಯಲ್ಲಿ ಪುನರ್ ಪರಿಶೀಲನೆ ನಡೆಸಲಾಗುತ್ತಿದೆ. ಮುಂದಿನ ದಿನದಲ್ಲಿ ಸಕಾಲದಲ್ಲಿ ಯೋಜನೆಗಳನ್ನು ಸರ್ಕಾರ ನೀಡಲಿದೆ. ಕಂಪ್ಲಿ ತಾಲೂಕಿನ ಗ್ರಾಮೀಣ ಭಾಗದ ರೇಗ್ಯೂಲೇಟರ್ ಕ್ಯಾಂಪ್ನಲ್ಲಿ ಸುಮಾರು 25 ಲಕ್ಷ ವೆಚ್ಚದಲ್ಲಿ ಅಂಗನವಾಡಿ ಕೇಂದ್ರ ನಿರ್ಮಾಣ ಕಾಮಗಾರಿ, ಕೃಷ್ಣನಗರ ಕ್ಯಾಂಪ್ನ ಸ.ಕಿ.ಪ್ರಾ.ಶಾಲೆಯಲ್ಲಿ ಸುಮಾರು 15 ಲಕ್ಷ ವೆಚ್ಚದಲ್ಲಿ 1 ಕೊಠಡಿ ನಿರ್ಮಾಣ ಕಾಮಗಾರಿ, ದೇವಸಮುದ್ರ ಗ್ರಾಮದಲ್ಲಿ ಸುಮಾರು 22 ಲಕ್ಷ ವೆಚ್ಚದಲ್ಲಿ ಅರಿವು ಮತ್ತು ಗ್ರಂಥಾಲಯ ಕಟ್ಟಡ ನಿರ್ಮಾಣ ಕಾಮಗಾರಿ, ಸುಗ್ಗೇನಹಳ್ಳಿ ಗ್ರಾ. ಪಂ. ಯ ಹೊನ್ನಳ್ಳಿ ಗ್ರಾಮದಲ್ಲಿ ಸುಮಾರು 15 ಲಕ್ಷದಲ್ಲಿ 2ನೇ ಆಂಗನವಾಡಿ ಕೇಂದ್ರ ಕಟ್ಟಡ ನಿರ್ಮಾಣ ಕಾಮಗಾರಿ, ದೇವಸಮುದ್ರ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸುಮಾರು 12 ಲಕ್ಷದಲ್ಲಿ ಔಷಧಿಗಳ ದಾಸ್ತಾನು ಕೊಠಡಿ ನಿರ್ಮಾಣ ಕಾಮಗಾರಿ ಸೇರಿದಂತೆ ಒಟ್ಟಾರೆ ಸುಮಾರು 136 ಲಕ್ಷ ವೆಚ್ಚದಲ್ಲಿ ಕಾಮಗಾರಿಗಳಿಗೆ ಅಡಿಗಲ್ಲು ಪೂಜೆ ಸಲ್ಲಿಸಲಾಯಿತು ಎಂದರು.
ಪ್ರಭಾರಿ ಮುಖ್ಯಗುರು ಎನ್.ವಿಶ್ವನಾಥ ಮಾತನಾಡಿ, ಶೈಕ್ಷಣಿಕ ಪ್ರಗತಿಗೆ ಹೆಚ್ಚಿನ ಮಟ್ಟದಲ್ಲಿ ಅನುಕೂಲ ಮಾಡಿಕೊಡಬೇಕು. ಪ್ರತಿಯೊಂದು ಹಂತದ ಅಭಿವೃದ್ಧಿಯೊಂದಿಗೆ ಮಕ್ಕಳಿಗೆ ಶೈಕ್ಷಣಿಕ ಮಟ್ಟದ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಶಿವಪ್ಪ, ರಾಮಯ್ಯ, ಪಕ್ಕೀರಪ್ಪ, ಹನುಮಂತಪ್ಪ, ಮಹೇಶ, ದೇವೇಂದ್ರಪ್ಪ, ಉಳ್ಳೂರು ವೀರಣ್ಣ, ದೇವಸಮುದ್ರದ ಪ್ರಮುಖರಾದ ನಾಯಕರ ವೆಂಕೋಬ, ಕೋರಿ ಚನ್ನಬಸವರಾಜ, ಖಾಜಾಸಾಬ್, ದೊಡ್ಡ ಬಸುವ, ಕುರಿ ನಾಗೇಂದ್ರ, ಪ್ರಶಾಂತ, ಕರೇಗೌಡ್ರು ಚಂದ್ರಿ, ಕುಮಾರ, ಬಸವರಾಜ ಸೇರಿದಂತೆ ಪ್ರತಿ ಹಳ್ಳಿಗಳ ಮುಖಂಡರು ಪಾಲ್ಗೊಂಡಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















