
ಬಳ್ಳಾರಿ / ಕಂಪ್ಲಿ : ತಾಲ್ಲೂಕು ಸುಗ್ಗೇನಹಳ್ಳಿ ಗ್ರಾಪಂಯ ಶ್ರೀರಾಮರಂಗಾಪುರ ಗ್ರಾಮದಲ್ಲಿ ಲೋಕಕಲ್ಯಾಣ ಮತ್ತು ಮಳೆಗಾಗಿ ಪ್ರಾರ್ಥಿಸಿ, ಸೋಮವಾರ ಹೋಮ ಹವನ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ಜರುಗಿದವು.

ಹೋಮ ಹವನದ ಅಂಗವಾಗಿ ಗ್ರಾಮದಲ್ಲಿರುವ ರಾಮಲಕ್ಷ್ಮಣ ದೇವಸ್ಥಾನ, ಕಾಶಿ ವಿಶ್ವೇಶ್ವರಸ್ವಾಮಿ ದೇವಸ್ಥಾನ ಮತ್ತು ರುಕ್ಮಿಣಿ ಪಾಂಡುರಂಗ ದೇವಸ್ಥಾನದಲ್ಲಿ ರುದ್ರಾಭಿಷೇಕ, ಕುಂಕುಮಾರ್ಷನೆ, ವಿವಿಧ ಬಗೆಯ ಹೂವಿನ ಅಲಂಕಾರಸೇವೆ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು.
ಬೆಲ್ಡೋಣ ರಾಮನಾಥ ಶಾಸ್ತ್ರಿ ನೇತೃತ್ವದಲ್ಲಿ ಶ್ರೀನಿವಾಸ ಶರ್ಮ ಮತ್ತು ಶ್ರೀನಿವಾಸ ಆಚಾರಿ ಸಾನಿಧ್ಯದಲ್ಲಿ 11 ಜನ ಪುರೋಹಿತರ ಪೌರೋಹಿತ್ಯದಲ್ಲಿ ಹೋಮ ಕಾರ್ಯಕ್ರಮ ಜರುಗಿತು.
ಮೂರು ದಿನಗಳ ಕಾಲ ಜರುಗಿದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭಕ್ತರು ದೇವಸ್ಥಾನಗಳಿಗೆ ಭೇಟಿ ನೀಡಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಹೂ, ಹಣ್ಣು, ಕಾಯಿ ಸಮರ್ಪಿಸಿ ಭಕ್ತಿ ಮೆರೆದರು.
ಕಾರ್ಯಕ್ರಮದ ಅಂಗವಾಗಿ ಗ್ರಾಮದ ಮುಖ್ಯ ರಸ್ತೆಗಳನ್ನು ವಿದ್ಯುತ್ ದೀಪ ಮತ್ತು ತಳಿರುತೋರಣಗಳಿಂದ ಅಲಂಕರಿಸಲಾಗಿತ್ತು. ಕಾರ್ಯಕ್ರಮದಲ್ಲಿ ಶ್ರೀರಾಮರಂಗಾಪುರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಜನರು ಭಾಗವಹಿಸಿದ್ದರಿಂದ ಗ್ರಾಮದ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಪತ್ತಿಪಟಿ ಪುಲ್ಲಯ್ಯ, ತಾಲೂರು ಪೋಲಪ್ಪ, ಭೀಮನೇನಿ ರಂಗಪ್ಪ ಕುಟುಂಬದವರು ಮತ್ತು ಗ್ರಾಮಸ್ಥರು ಭಕ್ತರು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















