
ಬಳ್ಳಾರಿ / ಕಂಪ್ಲಿ : ಇಲ್ಲಿನ ಸೋಮವಂಶ ಆರ್ಯ ಕ್ಷತ್ರಿಯ ಚಿತ್ರಗಾರ ಸಮಾಜದ ವತಿಯಿಂದ ಶ್ರಾವಣ ಮಾಸದ ಪವಿತ್ರ ನೂಲು ಹುಣ್ಣಿಮೆಯ ಅಂಗವಾಗಿ ಶ್ರೀ ನಿಮಿಷಾಂಬ ದೇವಿಯ ಗಂಗೆ ಸ್ಥಳ ಹಾಗೂ ಭವ್ಯ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು. ದೇವಿಯ ಗಂಗೆ ಸ್ಥಳ ನೆರವೇರಿದ ನಂತರ, ಮಂಗಲ ವಾದ್ಯಗಳೊಂದಿಗೆ ದೇವಿಯ ಭವ್ಯ ಮೆರವಣಿಗೆಯು ಊರಿನ ಪ್ರಮುಖ ಬೀದಿಗಳಲ್ಲಿ ಅತ್ಯಂತ ಸಡಗರ-ಸಂಭ್ರಮದಿಂದ ಜರುಗಿತು.
ಇದೇ ಸಂದರ್ಭದಲ್ಲಿ ಶ್ರೀ ನಿಮಿಷಾಂಬ ದೇವಿ ದೇವಸ್ಥಾನದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳಾದ ಪಂಚಾಮೃತ ಅಭಿಷೇಕ ಮತ್ತು ಕುಂಕುಮಾರ್ಚನೆಗಳನ್ನು ಭಕ್ತಿಭಾವದಿಂದ ನೆರವೇರಿಸಲಾಯಿತು.
ಸಂಜೆ ದೇವಸ್ಥಾನದ ಆವರಣದಲ್ಲಿ ದೇವಿಯ ಪಲ್ಲಕ್ಕಿ ಉತ್ಸವ ಅದ್ದೂರಿಯಾಗಿ ನಡೆಯಿತು. ತದನಂತರ ಭಕ್ತಾದಿಗಳಿಗೆ ಮಹಾಪ್ರಸಾದ ವಿತರಣೆ ಮಾಡಲಾಯಿತು.
ಈ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಮಾಜದ ಅಧ್ಯಕ್ಷರಾದ ಎಸ್. ಜಿ. ಚಿತ್ರಗಾರ್, ಪ್ರಮುಖರಾದ ನಾಗರಾಜ್ ಉಭಾಳೆ, ರಾಜಣ್ಣ ಬೂಸಾರೆ, ನಾರಾಯಣ, ರಾಘವೇಂದ್ರ ಬೂಸಾರೆ, ರಾಜ ಕಾಂಬಳೆಕರ್, ಮಾರುತಿ, ವೆಂಕಟೇಶ್ ಚಿತ್ರಗಾರ್, ಶಶಿಧರ್, ವಾಸು, ಪ್ರಸಾದ್, ನಾಗರಾಜ್, ಗಜಾನನ, ಕೃಷ್ಣ, ಮುರಳಿ ಸೇರಿದಂತೆ ಸಮಾಜದ ಮುಖಂಡರು ಹಾಗೂ ನೂರಾರು ಭಕ್ತಾದಿಗಳು ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾದರು.
ವರದಿ : ಜಿಲಾನಸಾಬ್ ಬಡಿಗೇರ್




















